ಕೊಳ್ಳೇಗಾಲ: ನಗರಸಭೆ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಂಸದ ದ್ರುವನಾರಾಯಣ್ ಮತಯಾಚನೆ

Update: 2018-08-27 18:17 GMT

ಕೊಳ್ಳೇಗಾಲ,ಆ.27: ನಗರಸಭೆ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಂಸದ ಆರ್. ದ್ರುವನಾರಾಯಣ್ ಮತಯಾಚಿಸಿದರು.

ಪಟ್ಟಣದ ಮುಡಿಗುಂಡ, ಅಮ್ಮನ್ ಕಾಲೋನಿ, ನಂಜಯ್ಯ ಕಟ್ಟೆ, ನೂರ್ ಮೊಹಲ್ಲಾ, ಆಶ್ರಯ ಬಡಾವಣೆ, ಹೊಸ ಅಣಗಳ್ಳಿ, ಸಾಮಂದಿಗೇರಿ, ಭೀಮನಗರ, ಉಪ್ಪಾರ ಮೋಳೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನ್ಯಾಯದ ತತ್ವದ ಅಡಿಯಲ್ಲಿ ಎಲ್ಲಾ ವರ್ಗಗಳಿಗೂ ಸೂಕ್ತ ಸ್ಥಾನಮಾನ ಹಾಗೂ ಅನುಕೂಲಗಳನ್ನು ಕಲ್ಪಿಸಿಕೊಟ್ಟ ಏಕೈಕ ಪಕ್ಷ ಎಂದರು.

ಕಳೆದ 5 ವರ್ಷದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಗೆ ಮಾಜಿ ಶಾಸಕ ಜಯಣ್ಣರವರು ಸಾಕಷ್ಟು ಅನುದಾನಗಳನ್ನು ತಂದು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಬಸ್‍ ನಿಲ್ದಾಣ, ಒಳ ಚರಂಡಿ, ನಗರೋತ್ಹಾನ ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ನಗರಸಭೆಯನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಶ್ರಮಿಸಿದ್ದಾರೆ. ಆದ್ದರಿಂದ ನಗರಸಭೆ ವ್ಯಾಪ್ತಿಯ ವಾರ್ಡ್‍ಗಳ ಜನತೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅತೀ ಹೆಚ್ಚಿನ ಮತಗಳಿಂದ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಮತಯಾಚನೆಯ ವೇಳೆ ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು, ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕಾಂಗ್ರೆಸ್ ಮುಖಂಡ ಬಸವರಾಜು, ಗಣೇಶ್ ಪ್ರಸಾದ್, ಬ್ಲಾಕ್ ರಾಜ್ಯ ಉಪ್ಪಾರ ನಿಗಮ ಅಭಿವೃದ್ಧಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ ಸದಸ್ಯ ಶಿವಕುಮಾರ್, ಕೊಪ್ಪಾಳಿ ಮಹದೇವನಾಯಕ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚೇತನ್ ಹಾಗೂ ಎಲ್ಲಾ ವಾರ್ಡಿನಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News