ಮಂಡ್ಯ: ವೃದ್ಧೆ ಕೊಲೆ ಆರೋಪಿಯ ಬಂಧನ

Update: 2018-08-28 15:58 GMT

ಮಂಡ್ಯ, ಆ.28: ವೃದ್ಧೆಯೋರ್ವಳನ್ನು ಹತ್ಯೆಗೈದು ಚಿನ್ನಾಭರಣದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮದ್ದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮದ್ದೂರು ತಾಲೂಕಿನ ನಗರಕೆರೆ ಗ್ರಾಮದ ದಿವಂಗತ ಚಿಕ್ಕಣ್ಣ ಅವರ ಪುತ್ರ ಎಸ್.ಸಿ. ಅಶ್ವಥ್ ಹತ್ಯೆ ಆರೋಪಿಯಾಗಿದ್ದು, ಈತನು ಬೆಂಗಳೂರಿನ ಚುಂಚನಕಟ್ಟೆ ಜೆ.ಪಿ. ನಗರದಲ್ಲಿ ವಾಸವಿದ್ದನೆನ್ನಲಾಗಿದೆ.

ಮೇ.14ರಂದು ನಗರಕೆರೆ ಗ್ರಾಮದಲ್ಲಿ ವಯೋವೃದ್ಧೆ ಬೆಟ್ಟಮ್ಮ ಅವರನ್ನು ಹತ್ಯೆ ಮಾಡಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡು ಕೊಲೆಯ ವಿಚಾರವನ್ನು ಮರೆಮಾಚುವ ಉದ್ಧೇಶದಿಂದ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. 

ಪೊಲೀಸ್ ತಂಡವು ಆರೋಪಿ ಎಸ್.ಸಿ. ಅಶ್ವಥ್‍ನನ್ನು ಆ.25 ರಂದು ಶಿವಪುರದಲ್ಲಿ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿದಂತೆ 27 ಗ್ರಾಂ ಚಿನ್ನದ ಸರ, ನಾಲ್ಕು ಗ್ರಾಂ ಚಿನ್ನದ ಓಲೆ ಒಳಗೊಂಡಂತೆ ಸುಮಾರು 1.20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್‍ದೇವರಾಜು ಕೃತ್ಯ ಬೇಧಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News