ಉತ್ತರಪ್ರದೇಶ: ಜಾನುವಾರು ಕಳ್ಳತನ ಶಂಕೆಯಲ್ಲಿ ಯುವಕನ ಥಳಿಸಿ ಹತ್ಯೆ

Update: 2018-08-30 08:23 GMT

ಬರೇಲಿ(ಉ.ಪ್ರ.), ಆ.30: ಜಾನುವಾರು ಕಳ್ಳತನ ಶಂಕೆಯಲ್ಲಿ ಗುಂಪೊಂದು 22ರ ಹರೆಯದ ಯುವಕನನ್ನು ಥಳಿಸಿ ಹತ್ಯೆಗೈದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯು ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಭೋಲಾಪುರ್ ಹಿಂಡೊಲಿಯಾ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಜಾನುವಾರು ಕಳವು ಮಾಡಲು ಯತ್ನಿಸುತ್ತಿದ್ದಾನೆಂಬ ಶಂಕೆಯಲ್ಲಿ ಶಾರೂಖ್ ಖಾನ್ ಎಂಬಾತನನ್ನು ಹಿಡಿದು ಥಳಿಸಿದ್ದ ಗ್ರಾಮಸ್ಥರು ಬಳಿಕ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಖಾನ್‌ರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ದುಬೈನ ಕಸೂತಿ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದ ಖಾನ್ ಜನವರಿಯಲ್ಲಿ ತನ್ನೂರಿಗೆ ಬಂದಿದ್ದರು. ಸ್ನೇಹಿತನ ಒತ್ತಾಯದ ಮೇರೆಗೆ ಆತನನ್ನು ಭೇಟಿಯಾಗಲು ಗ್ರಾಮಕ್ಕೆ ತೆರಳಿದ್ದು, ಮತ್ತೆ ವಾಪಸಾಗಲಿಲ್ಲ ಎಂದು ಖಾನ್ ಸಹೋದರ ಹೇಳಿದ್ದಾರೆ.

 "ನಾವು ಘಟನಾ ಸ್ಥಳಕ್ಕೆ ತಲುಪಿ, ಖಾನ್‌ರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ತನಿಖೆ ಪ್ರಗತಿಯಲ್ಲಿದೆ. ದೇಹದಲ್ಲಿನ ಆಂತರಿಕ ಗಾಯದಿಂದ ಖಾನ್ ಮೃತಪಟ್ಟಿದ್ದಾಗಿ ಶವಪರೀಕ್ಷೆ ವರದಿಯಲ್ಲಿ ಗೊತ್ತಾಗಿದೆ'' ಎಂದು ನಗರ ಎಸ್ಪಿ ಅಭಿನಂದನ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News