ಕೊಡಗಿನಲ್ಲಿ ಸಾರಿಗೆ ವ್ಯವಸ್ಥೆ ಸುಧಾರಣೆ: ಸುರಕ್ಷಿತ ಪ್ರದೇಶಗಳಿಗೆ ಬಸ್‍ಗಳ ನಿಯೋಜನೆ

Update: 2018-08-31 11:50 GMT

ಮಡಿಕೇರಿ, ಆ.31: ಕಳೆದ 15-20 ದಿನಗಳಿಂದ ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಭೂಕುಸಿತ ಉಂಟಾಗಿ ಜಿಲ್ಲೆಯ ಹಲವಾರು ಭಾಗಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪುತ್ತೂರು ವಿಭಾಗ, ಮಡಿಕೇರಿ ಘಟಕದ ಮೂಲಕ ಕೆಎಸ್‍ಆರ್‍ಟಿಸಿ ಬಸ್ ಮತ್ತು ಮಿನಿ ಬಸ್‍ಗಳು ಸಂಚಾರವನ್ನು ಆರಂಭಿಸಿದ್ದು, ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಸೋಮವಾರಪೇಟೆ- ಬೆಂಗಳೂರಿಗೆ ಹೋಗುವ ಬಸ್ಸುಗಳಲ್ಲಿ ಮಡಿಕೇರಿ-ಸುಂಟಿಕೊಪ್ಪ-ಮಾದಾಪುರ-ಸೋಮವಾರಪೇಟೆ ಮೂಲಕ ಬೆಂಗಳೂರಿಗೆ ತೆರಳಬಹುದು. ಮಡಿಕೇರಿಯಿಂದ ಮೇಕೇರಿ ಮೂಲಕ ವಿರಾಜಪೇಟೆ-ಬೆಂಗಳೂರಿಗೆ ಹೋಗುವ ವಾಹನಗಳು ಮಡಿಕೇರಿ-ಚೆಟ್ಟಳ್ಳಿ-ಸಿದ್ದಾಪುರ-ಗೋಣಿಕೊಪ್ಪ ಮೂಲಕ ಮೈಸೂರು-ಬೆಂಗಳೂರಿಗೆ ಸಂಚರಿಸುತ್ತಿವೆ. 

ಮಡಿಕೇರಿಯಿಂದ ಬೆಳಗ್ಗೆ 8 ಗಂಟೆಗೆ ಸುಂಟಿಕೊಪ್ಪ-ಮಾದಾಪುರ ಮಾರ್ಗವಾಗಿ ಸೋಮವಾರಪೇಟೆ ಮಾರ್ಗವಾಗಿ ಹೋಗಿ ಪುನಃ ಅದೇ ಮಾರ್ಗವಾಗಿ ಮಡಿಕೇರಿಗೆ ಬಂದು, ಪುನಃ ಮಧ್ಯಾಹ್ನ 3.30 ಗಂಟೆಗೆ ಮಡಿಕೇರಿಯಿಂದ ಅದೇ ಮಾರ್ಗವಾಗಿ ಸೋಮವಾರಪೇಟೆ ತಲುಪಿ, ನಂತರ ಕಿಕ್ಕರಳ್ಳಿ-ಸೂರ್ಲಬ್ಬಿ-ಗರ್ವಾಲೆಗೆ ತಲುಪಿ, ಗರ್ವಾಲೆಯಲ್ಲಿ ವಾಸ್ತವ್ಯ ಹೂಡಿ, ಪುನಃ ಬೆಳಗ್ಗೆ 7 ಗಂಟೆಗೆ ಅಲ್ಲಿಂದ ಹೊರಟು ಅದೇ ಮಾರ್ಗವಾಗಿ ಮಡಿಕೇರಿಗೆ ಸಂಚರಿಸುತ್ತದೆ.  

ಮಡಿಕೇರಿ-ಸುಳ್ಯಕ್ಕೆ ಭಾಗಮಂಡಲ-ಕರಿಕೆ-ಪಾಣತ್ತೂರು-ಆಲೆಟ್ಟಿ ಮಾರ್ಗವಾಗಿ ಸುಳ್ಯಕ್ಕೆ ಕರ್ನಾಟಕ ಸಾರಿಗೆ ವಾಹನವನ್ನು ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ಯವರೆಗೆ ಪ್ರತಿ ಗಂಟೆಗೆ ಬಸ್ ಸಂಚರಿಸುತ್ತಿವೆ. ಮಿನಿ ಬಸ್ಸುಗಳು ಮಡಿಕೇರಿ-ಮೇಕೇರಿ ನಡುವೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7.30ರವರೆಗೆ ಪ್ರತಿ 15 ನಿಮಿಷಕ್ಕೊಮ್ಮೆ ಸಂಚರಿಸುತ್ತವೆ. ಮಡಿಕೇರಿ-ಮಕ್ಕಂದೂರಿಗೆ 03 ಮಿನಿ ಬಸ್ಸುಗಳು, ಬೆಳಗ್ಗೆ 8.30 ಗಂಟೆಗೆ, ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 4.15 ಗಂಟೆಗೆ ಬಸ್ ಸಂಚರಿಸುತ್ತವೆ.  

ಭಾಗಮಂಡಲಕ್ಕೆ ಹೋಗುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಗ್ಗೆ 7 ಗಂಟೆಗೆ ಅಯ್ಯಂಗೇರಿ-ಬಲ್ಲಮಾವಟಿ-ಪೇರೂರು-ನಾಪೋಕ್ಲು-ಹೊದ್ದೂರು-ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ಬಸ್ ಸಂಚಾರ ಮಾಡಿ, ಪುನಃ ಅದೇ ಮಾರ್ಗವಾಗಿ ಸಂಜೆ 4.30ಕ್ಕೆ (ಶಾಲಾ ಮಕ್ಕಳ ಅನುಕೂಲಕ್ಕಾಗಿ) ಮಡಿಕೇರಿಯಿಂದ ಭಾಗಮಂಡಲಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. 

ಮಡಿಕೇರಿ-ಕಾಟಕೇರಿಗೆ 03 ಮಿನಿ ಬಸ್ಸುಗಳು, ಬೆಳಗ್ಗೆ 8.30 ಗಂಟೆಗೆ, ಅಪರಾಹ್ನ 2 ಗಂಟೆಗೆ ಹಾಗೂ ಸಂಜೆ 4.15 ಗಂಟೆಗೆ ವ್ಯವಸ್ಥೆ ಮಾಡಲಾಗಿದೆ. 

ಮಡಿಕೇರಿಯಿಂದ ಸುಂಟಿಕೊಪ್ಪ-ಗರಗಂದೂರು ಮಾರ್ಗವಾಗಿ ಮಾದಾಪುರಕ್ಕೆ ಬೆಳಗ್ಗೆ 8 ಗಂಟೆಯಿಂದ (ಶಾಲಾ ಮಕ್ಕಳ ಅನುಕೂಲಕ್ಕಾಗಿ) ಸಂಜೆ 4 ಗಂಟೆಗೆ ಅದೇ ಮಾರ್ಗವಾಗಿ ಬಸ್ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ. 
  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News