ದೇವಸ್ಥಾನದಲ್ಲಿ ಬಲೂನು ಒಡೆದ ದಲಿತ ಬಾಲಕನ ಥಳಿಸಿ ಹತ್ಯೆ

Update: 2018-09-07 06:12 GMT

ಲಕ್ನೋ, ಸೆ.7: ಜನ್ಮಾಷ್ಠಮಿಯ ಪ್ರಯುಕ್ತ ದೇವಸ್ಥಾನದಲ್ಲಿ ಅಲಂಕಾರಕ್ಕೆಂದು ಹಾಕಲಾಗಿದ್ದ ಬಲೂನನ್ನು ಒಡೆದ ಎಂಬ ಕಾರಣಕ್ಕೆ ಐದು ಬಾಲಕರ ತಂಡ ಹನ್ನೆರಡರ ಹರೆಯದ ದಲಿತ ಬಾಲಕನನ್ನು ಥಳಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಅಲಿಗಡ ಜಿಲ್ಲೆಯಲ್ಲಿ ನಡೆದಿದೆ. ಮೃತಬಾಲಕನ ಜೊತೆಗಿದ್ದ ಇನ್ನೊರ್ವ ಬಾಲಕ ಸ್ಥಳದಿಂದ ಓಡಿಹೋಗಿ ಥಳಿತಕ್ಕೊಳಗಾದ ಬಾಲಕನ ತಾಯಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ಆಕೆ ಕೂಡಲೇ ದೇವಸ್ಥಾನಕ್ಕೆ ಧಾವಿಸಿದ್ದು ಈ ಸಂದರ್ಭ ಬಾಲಕ ನೆಲದ ಮೇಲೆ ಬಿದ್ದದ್ದ. ಅದೇ ದಿನ ರಾತ್ರಿ ಬಾಲಕನಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದ ಆತನ ತಾಯಿ ಆತನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದರೆ ಅಲ್ಲಿ ಆತನ ನೋವು ಕಡಿಮೆಯಾಗದಿರುವುದನ್ನು ಗಮನಿಸಿದ ವೈದ್ಯರು ಆತನನ್ನು ಜಿಲ್ಲಾಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಆದರೆ ಅಲ್ಲಿ ಆತ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಐದು ಆರೋಪಿ ಬಾಲಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 304ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News