ಸಂಪೂರ್ಣ ಸಾಲಮನ್ನಾಕ್ಕೆ ಸರಕಾರಕ್ಕೆ ಪ್ರಸ್ತಾವನೆ: ಕೊಡಗು ಬ್ಯಾಂಕರ್ಸ್ ಸಭೆಯಲ್ಲಿ ನಿರ್ಧಾರ

Update: 2018-09-07 12:16 GMT

ಮಡಿಕೇರಿ, ಸೆ.7: ಮಹಾಮಳೆಯಿಂದ ಜಿಲ್ಲೆಯಾದ್ಯಂತ ಕಾಫಿ ಮತ್ತು ಕರಿಮೆಣಸು ಬೆಳೆಗೆ ಶೇ.70ರಷ್ಟು ಹಾನಿಯಾಗಿರುವುದರಿಂದ ಕೊಡಗಿನ ಬೆಳೆಗಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ಸ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್‍ ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್ ಗಳ ಸಮನ್ವಯ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಸಂಸದ ಪ್ರತಾಪ್‍ ಸಿಂಹ ಅವರು, ಜಿಲ್ಲೆಯ ಮಡಿಕೇರಿ ಹಾಗೂ ಸೋಮವಾರಪೇಟೆ 6 ಗ್ರಾ.ಪಂ.ಗಳು ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಪೂರ್ಣವಾಗಿ ನಾಶವಾಗಿದ್ದು, ಈ ಹಿನ್ನೆಲೆಯಲ್ಲಿ ಆ ಗ್ರಾ.ಪಂ.ವ್ಯಾಪ್ತಿಯ ಜನತೆ ಪಡೆದಿರುವ ಯಾವುದೇ ಸಾಲವನ್ನು 3 ತಿಂಗಳವರೆಗೆ ವಸೂಲು ಮಾಡಲು ಮುಂದಾಗದಿರುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ಮಾಡಿದರು. ಅಲ್ಲದೆ ಈ ಅವಧಿಯಲ್ಲಿ ಅವರುಗಳ ಸಾಲವನ್ನು ಮನ್ನಾ ಮಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರಲ್ಲದೆ, ಈ ನಿಟ್ಟಿನಲ್ಲಿ ತಾವುಗಳು ಕೂಡ ಸರಕಾದ ಮಟ್ಟದಲ್ಲಿ ವ್ಯವಹರಿಸುವುದಾಗಿ ಹೇಳಿದರು. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಯಿಂದಾಗಿ ಬಹುತೇಕ ಎಲ್ಲಾ ವಿಧದ ಫಸಲು ಶೇ.70ರಷ್ಟು ಹಾನಿಯಾಗಿರುವುದರಿಂದ ಜಿಲ್ಲೆಯಾದ್ಯಂತ ಮೂರು ತಿಂಗಳ ಕಾಲ ಯಾವುದೇ ಸಾಲ ವಸೂಲಿಗೆ ಮುಂದಾಗಬಾರದು ಎಂದು ಸಲಹೆ ಮಾಡಿದರು.

ಇಂದು ರಾಜ್ಯದ ಬೊಕ್ಕಸಕ್ಕೆ ಬೆಂಗಳೂರು ಮಹಾನಗರದಿಂದ ಹೆಚ್ಚಿನ ಆದಾಯ ಬರುತ್ತಿರಬಹುದು. ಆದರೆ ಬೆಂಗಳೂರಿನ ಜನತೆ ಉಸಿರಾಡುತ್ತಿರುವುದು ಕೊಡಗಿನ ಕಾವೇರಿಯಿಂದಾಗಿ ಎಂದು ಅಭಿಪ್ರಾಯಿಸಿದ ಅವರು, ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದರು.

ಸಂಸದರ ನಿಧಿಯಿಂದ 2.50 ಕೋಟಿ: ಕೊಡಗಿನ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ತಾನು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 2.50 ಕೋಟಿ ರೂ.ಗಳನ್ನು ಒದಗಿಸುವುದಾಗಿ ಇದೇ ಸಂದರ್ಭ ಘೋಷಿಸಿದ ಪ್ರತಾಪ್‍ಸಿಂಹ ಅವರು, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರ ಪ್ರಯತ್ನದಿಂದ ರಾಜ್ಯದ ವಿವಿಧ ಕ್ಷೇತ್ರಗಳ ಶಾಸಕರುಗಳು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಸುಮಾರು 57 ಕೋಟಿ ರೂ.ಗಳನ್ನು ಒದಗಿಸಲು ಮುಂದಾಗಿದ್ದು, ಇದಕ್ಕಾಗಿ ಅವರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಬ್ಯಾಂಕ್‍ಗಳು ಕೂಡಾ ತಮ್ಮ ಸಿಎಸ್‍ಆರ್ ನಿಧಿಯಿಂದ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ನೆರವು ನೀಡುವಂತೆ ಮನವಿ ಮಾಡಿದರು.

ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ಜಿಲ್ಲೆಯಲ್ಲಿ ಸುಮಾರು ಒಂದು ಸಾವಿರ ಮನೆಗಳು ನಾಶವಾಗಿರುವುದಾಗಿ ಹೇಳಿದ ಅವರು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪುನರ್ ನಿರ್ಮಾಣಕ್ಕೆ ಸರಕಾರಗಳು ಅನುದಾನ ನೀಡಲಿದ್ದು, ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹಿನ್ನೆಲೆಯಲ್ಲಿ ತಾನು ಈಗಾಗಲೇ ಇನ್ಫೋಸಿಸ್, ವಿಪ್ರೋದಂತಹ ಸಂಸ್ಥೆಗಳೊಂದಿಗೆ ವ್ಯವಹರಿಸಿದ್ದು, ಕೆಲವು ಮನೆಗಳನ್ನು ನಿರ್ಮಿಸಿಕೊಡಲು ಅವರುಗಳು ಮುಂದೆ ಬಂದಿದ್ದಾರೆ. ಸಂತ್ರಸ್ತರಿಗೆ ಕಚ್ಚಾ ಮನೆಗಳನ್ನು ನಿರ್ಮಿಸಿಕೊಡಬಹುದಾದರೂ, ಕೊಡಗಿನ ಜನತೆಯ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ಮನೆ ನಿರ್ಮಿಸಿಕೊಡುವ ಅಗತ್ಯವಿರುವುದರಿಂದ ಸರಕಾರದ ಜೊತೆಗೆ ಸಂಘಸಂಸ್ಥೆಗಳು, ದಾನಿಗಳು ನೆರವು ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಮಹಾಮಳೆ ಹಾಗೂ ಪ್ರಕೃತಿ ವಿಕೋಪದಿಂದ ಇಡೀ ಕೊಡಗಿನ ಜನತೆ ಇಂದು ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬೆಳೆಗಾರರು ಪಡೆದಿರುವ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟರಲ್ಲದೆ, ಈ ಕುರಿತು ನಿರ್ಣಯ ಕೈಗೊಂಡು ಪ್ರಸ್ತಾವನೆ ಸಲ್ಲಿಸುವಂತೆ ಸಲಹೆ ನೀಡಿದರು.

ಸಂಪೂರ್ಣ ಸಾಲ ಮನ್ನಾ ಸಾಧ್ಯವಾಗದಿದ್ದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ 6 ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯ ಜನತೆ ಪಡೆದಿರುವ ಸಾಲವನ್ನು ಮುಂದಿನ 5 ವರ್ಷಗಳವರೆಗೆ ಮರುಪಾವತಿಗೆ ಒತ್ತಾಯಿಸಬಾರದು. ಅಲ್ಲದೆ ಆ ಬಳಿಕ ಕೂಡಾ ಅಸಲನ್ನು ಮಾತ್ರ ವಸೂಲು ಮಾಡಬೇಕು ಎಂದು ಸಲಹೆ ಮಾಡಿದ ಅವರು, ತೋಟ, ಜಮೀನು ಅಭಿವೃದ್ಧಿಗೆ ಸಾಲ ಕೋರುವವರಿಗೆ ಮತ್ತೆ ಸಾಲ ನೀಡಿ ಸಹಕಾರ ನೀಡಬೇಕು ಎಂದು ಬ್ಯಾಂಕರ್ ಗಳಲ್ಲಿ ಮನವಿ ಮಾಡಿದರು.

ಕೊಡಗು ಜಿಲ್ಲೆಯ ಜನತೆ ಎಂದೂ ಸಾಲ ಮನ್ನಾಕ್ಕೆ ಒತ್ತಾಯಿಸಿದವರಲ್ಲ. ಅಲ್ಲದೆ ಸಾಲ ಮರುಪಾವತಿಯಲ್ಲೂ ಪ್ರಾಮಾಣಿಕತೆ ಮೆರೆದಿದ್ದಾರೆ. ಆದರೆ ಅಂತಹವರೇ ಇಂದು ಸಂಕಷ್ಟಕ್ಕೆ ಸಿಲುಕಿರುವುದರಿಂದ ಕೊಡಗಿನ ಜನತೆ ಹೊಂದಿರುವ ಸುಮಾರು 1400 ಕೋಟಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಅವರು ಈ ಸಂದರ್ಭ ಆಗ್ರಹಿಸಿದರು.

ಭೂಕುಸಿತಕ್ಕೆ ಒಳಗಾಗಿರುವ ಪ್ರದೇಶಗಳಲ್ಲಿ ಮತ್ತೆ ಮನೆ ನಿರ್ಮಿಸುವುದು ಸುರಕ್ಷಿತವಲ್ಲ. ಆದ್ದರಿಂದ ಅಂತಹವರಿಗೆ ಇತರೆಡೆಗಳಲ್ಲಿ ಜಾಗ ಗುರುತಿಸಿ ಆದಷ್ಟು ಶೀಘ್ರ ಮನೆಗಳನ್ನು ನಿರ್ಮಿಸಿಕೊಡುವ ಕೆಲಸವಾಗಬೇಕಿದೆ. ಸರಕಾರ ಜಾಗ ಗುರುತಿಸಿಕೊಟ್ಟಲ್ಲಿ ಹಲವಾರು ದಾನಿಗಳು ಮನೆ ನಿರ್ಮಿಸಿಕೊಡಲು ಮುಂದೆ ಬರುತ್ತಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಯತ್ನ ಮಾಡಬೇಕು. ಕೆಲವು ದಾನಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಹಿಂದೇಟು ಹಾಕುತ್ತಿದ್ದು, ನೇರವಾಗಿ ಕೊಡಗಿನ ಸಂತ್ರಸ್ತರಿಗೆ ನೆರವು ಒದಗಿಸಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲೇ ಸಂತ್ರಸ್ತರ ಪರಿಹಾರ ನಿಧಿಯ ಖಾತೆ ತೆರೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ಇದಕ್ಕೆ ಕೆಲವು ಬ್ಯಾಂಕರ್ ಗಳು ಕೂಡಾ ಧ್ವನಿಗೂಡಿಸಿ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಬ್ಯಾಂಕ್‍ಗಳಿಗೂ ಕಷ್ಟವಾಗುತ್ತದೆ. ಆದರೆ ಸ್ಥಳೀಯವಾಗಿ ಪರಿಹಾರ ನಿಧಿ ಸ್ಥಾಪಿಸಿದಲ್ಲಿ ಬ್ಯಾಂಕ್‍ಗಳು ಕೂಡಾ ಸ್ಪಂದಿಸಬಹುದಲ್ಲದೆ, ಹಲವು ದಾನಿಗಳು ಕೂಡಾ ಆ ಖಾತೆಗೆ ಹಣ ನೀಡಲು ಸಿದ್ಧರಿದ್ದಾರೆ ಎಂದು  ಗಮನಸೆಳೆದರು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸುವುದಾಗಿ ಸಂಸದ ಪ್ರತಾಪ್‍ಸಿಂಹ ಹಾಗೂ ಶಾಸಕ ಅಪ್ಪಚ್ಚುರಂಜನ್ ಭರವಸೆ ನೀಡಿದರು.

ಜಿಲ್ಲಾ ಮಾರ್ಗದರ್ಶಿ (ಲೀಡ್)ಬ್ಯಾಂಕ್ ವ್ಯವಸ್ಥಾಪಕ ಗುಪ್ತಾ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಪೋರೇಷನ್ ಬ್ಯಾಂಕ್ ಮೈಸೂರು ವಲಯದ ಡಿಜಿಎಂ ಎಸ್.ಎಲ್ ಗಣಪತಿ, ನಬಾರ್ಡ್‍ನ ಜಿಲ್ಲಾ ವ್ಯವಸ್ಥಾಪಕ ಎಂ.ಸಿ.ನಾಣಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‍ ಕುಮಾರ್ ಮಿಶ್ರಾ ಮತ್ತಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News