ಶೃಂಗೇರಿ: ನದಿಗೆ ಈಜಲು ತೆರಳಿದ್ದ ಯುವಕ ನೀರುಪಾಲು
Update: 2018-09-09 18:02 GMT
ಶೃಂಗೇರಿ, ಸೆ.9: ತಾಲೂಕಿನ ಅಡ್ಡಗದ್ದೆ ಸಮೀಪದ ಕೆರೋಡಿಯ ತುಂಗಾನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ನೀರುಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಅಡ್ಡಗದ್ದೆ ಮೂಲದ ಸಂದೀಪ್ ಶಾಸ್ತ್ರಿ (25) ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ತನ್ನ ಹೆತ್ತವರೊಂದಿಗೆ ಬೆಂಗಳೂರಿನಲ್ಲೇ ನೆಲೆಸಿದ್ದರು. ಸಂಬಂಧಿಕರೊಬ್ಬರ ಮರಣದ ಹಿನ್ನೆಲೆಯಲ್ಲಿ ಮರಣೋತ್ತರ ಕಾರ್ಯಕ್ಕಾಗಿ ಶುಕ್ರವಾರ ಅಡ್ಡಗದ್ದೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಶನಿವಾರ ಸಂಜೆಯ ವೇಳೆ ಅಡ್ಡಗದ್ದೆ ಗ್ರಾಮದಲ್ಲಿರುವ ತಮ್ಮ ಮನೆ ಸಮೀಪದಲ್ಲಿ ಹರಿಯುವ ತುಂಗಾನದಿಯಲ್ಲಿ ಈಜಲು ತೆರಳಿದ್ದ ಸಂದೀಪ್ ನದಿಯ ನೀರಿನ ಸುಳಿಗೆ ಸಿಲುಕಿ ಕೊಚ್ಚಿ ಹೋಗಿದ್ದಾರೆಂದು ತಿಳಿದು ಬಂದಿದೆ. ಸಂದೀಪ್ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಶೃಂಗೇರಿ ಪೊಲೀಸರು, ಸ್ಥಳೀಯರು, ಸಂಬಂಧಿಕರು ಶೋಧ ಮುಂದುವರಿಸಿದ್ದಾರೆಂದು ತಿಳಿದು ಬಂದಿದೆ.