ಬೆಂಗಳೂರು: ಮಹಿಳೆಯ ಕೊಲೆಗೈದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Update: 2018-09-11 13:08 GMT

ಬೆಂಗಳೂರು, ಸೆ.11: ಬಟ್ಟೆ ವ್ಯಾಪಾರಿಯೊಬ್ಬ ತನ್ನ ಜೊತೆ ಸಹಜೀವನ ನಡೆಸುತ್ತಿದ್ದ ಮಹಿಳೆಯನ್ನು ಮನೆಯಲ್ಲೇ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿವೇಕನಗರದ ವನ್ನಾರ್‌ಪೇಟೆಯ ಬಾಲಾಜಿ ಥಿಯೇಟರ್ ಮುಂಭಾಗದ ಜನಾರ್ದನ್ ಕಟ್ಟಡದ ನಿವಾಸಿ ರವೀಂದ್ರನ್(69) ಎಂಬವರು ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಉಮಾ(60) ಅವರನ್ನು ಕೊಲೆ ಮಾಡಿ ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕೇರಳ ಮೂಲದ ರವೀಂದ್ರನ್ ಅವರು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಸೇನೆಯ ಸಮವಸ್ತ್ರ ಹೊಲಿಯುವ ಟೈಲರ್ ಕೆಲಸವನ್ನೂ ಮಾಡುತ್ತಿದ್ದರು. ಕೊಡಗು ಮೂಲದ ಉಮಾ ಅವರೊಂದಿಗೆ 1999ರಿಂದ ವನ್ನಾರ್‌ಪೇಟೆಯ ನಿವಾಸದಲ್ಲಿ ಸಹ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಮೂರು ದಿನಗಳಿಂದ ಇವರ ಮನೆಯ ಬಾಗಿಲು ತೆರೆದಿರಲಿಲ್ಲ. ಮಾತ್ರವಲ್ಲ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಮನೆ ಮಾಲಕರು ಅನುಮಾನಗೊಂಡು ಈ ಬಗ್ಗೆ ರವೀಂದ್ರನ್ ಅವರ ಪುತ್ರ ದೊಮ್ಮಲೂರು ನಿವಾಸಿ ರಿತ್ವಿನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡಿದಾಗ ಇಬ್ಬರೂ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ಉಮಾ ಅವರ ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತದೇಹಗಳು ಸಂಪೂರ್ಣ ಕೊಳೆತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಯಾವ ರೀತಿ ಕೊಲೆ ಮಾಡಲಾಗಿದೆ ಎಂಬುದು ತಿಳಿಯಲಿದೆ ಎಂದು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿರುವ ವಿವೇಕನಗರ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News