ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಶೀಘ್ರ: ಸಚಿವ ಆರ್.ಶಂಕರ್

Update: 2018-09-11 14:57 GMT

ಬೆಂಗಳೂರು, ಸೆ.11: ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆಗಾಗಿ ವಿವಿಧ ಹಂತದ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸುವ ಸಂಬಂಧ ಪ್ರಕ್ರಿಯೆ ನಡೆಯುತ್ತಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದರು.

ಮಂಗಳವಾರ ನಗರದ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಆರಣ್ಯ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕಾರವು ಒಟ್ಟು 3,085 ವಿವಿಧ ದರ್ಜೆಯ ಕ್ಷೇತ್ರ ಸಿಬ್ಬಂದಿ ಮತ್ತು ಅಧಿಕಾರಿ ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಿದ್ದು, ಅವುಗಳನ್ನು 2019-20ನೆ ಸಾಲಿನಿಂದ ಭರ್ತಿ ಮಾಡಲು ಅನುಮತಿ ನೀಡಲಾಗಿದೆ.

ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಮರಣ ಹೊಂದಿದರೆ, 20 ಲಕ್ಷ ರೂ., ಶಾಶ್ವತ ಅಂಗವಿಕಲತೆಯಾದರೆ 10 ಲಕ್ಷ ರೂ. ಹಾಗೂ ಗಂಭೀರ ಗಾಯವಾದರೆ 2 ಲಕ್ಷ ರೂ., ಪರಿಹಾರ ಮೊತ್ತ ಮತ್ತು 10 ಲಕ್ಷ ರೂ.ವಿಶೇಷ ಗುಂಪು ವಿಮಾ ಮೊತ್ತ ಪರಿಹಾರ ನೀಡಲು ಸರಕಾರ ಆದೇಶಿಸಿದೆ ಎಂದು ಅವರು ತಿಳಿಸಿದರು.

ಹುತಾತ್ಮರು: ಪ್ರಸ್ತುತ ಸಾಲಿನಲ್ಲಿ ದುರದೃಷ್ಟವಶಾತ್ ಮಾ.3 ರಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಣಿಕಂದನ್ ಅವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅರಣ್ಯಕ್ಕೆ ಕಾಡ್ಗಿಚ್ಚು ಸಂಭವಿಸಿದ ವೇಳೆ ಪರಿಶೀಲನೆ ನಡೆಸುತ್ತಿದ್ದಾಗ ಏಕಾಏಕಿ ಕಾಡಿನ ಆನೆ ದಾಳಿ ನಡೆಸಿದ ಪರಿಣಾಮ ಮರಣ ಹೊಂದಿದ್ದಾರೆ. ಅಲ್ಲದೆ, ಮಣಿಕಂದನ್ ಇಲಾಖೆಯಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಇವರಿಗೆ ‘ಎಲಿಫೆಂಟ್ ವಾರಿಯರ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ತಿಳಿಸಿದರು.

ಮೇ 26ರಂದು ರಾಮನಗರ ವಿಭಾಗದ ಕ್ಷೇಮಾಭಿವೃದ್ಧಿ ನೌಕರ ಚಿಕ್ಕೀರಯ್ಯ, ಸಾತನೂರು ವಲಯದ ಯಡಮಾರನಹಳ್ಳಿಕೆರೆ ಹತ್ತಿರ ಇದ್ದ ಎಂಟು ಕಾಡಾನೆಗಳನ್ನು ಕಾವೇರಿ ವನ್ಯಜೀವಿ ಧಾಮಕ್ಕೆ ಹಿಮ್ಮೆಟ್ಟಿಸುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದ್ದರು. ಇವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದೆಂದು ಸಚಿವ ಶಂಕರ್ ಹೇಳಿದರು.

ರಾಜ್ಯದಲ್ಲಿ 43,38,276 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಭೌಗೋಳಿಕ ಪ್ರದೇಶದ ಶೇ.22.62ರಷ್ಟು ಪ್ರದೇಶವು ಅರಣ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯಾಭಿವೃದ್ಧಿ ಮತ್ತು ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಗತ್ಯವಿರುವ ಜಾಗಗಳಲ್ಲಿ ಗಿಡನೆಡುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಭಾರತೀಯ ಅರಣ್ಯ ಸಮೀಕ್ಷೆ ಪ್ರಕಾರ 2015-17ರ ಅವಧಿಯಲ್ಲಿ ರಾಜ್ಯದಲ್ಲಿನ ಅರಣ್ಯ ಮತ್ತು ಹೊದಿಕೆಯು 1,26,200 ಹೆಕ್ಟೇರ್ ನಷ್ಟು ಹೆಚ್ಚಾಗಿರುತ್ತದೆ. ಅಲ್ಲದೆ, ವನ್ಯಜೀವಿಗಳಾದ ಆನೆ, ಹುಲಿ ಹಾಗೂ ಚಿರತೆಗಳ ಸಂಖ್ಯೆಯೂ ಅಧಿಕವಾಗಿದ್ದು, ವನ್ಯಜೀವಿ ಪ್ರಮಾಣದಲ್ಲಿ ಕರ್ನಾಟಕ ಮೊದಲನೆ ಸ್ಥಾನ ಪಡೆದಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್ ದವೆ, ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News