ಕೊಡಗು: ಹೊಸ ಬಟ್ಟೆ ಹಂಚಿ, ಸಂತ್ರಸ್ತರೊಂದಿಗೆ ಸಿಹಿ ಊಟ ಮಾಡಿದ ಸಚಿವ ಸಾ.ರಾ.ಮಹೇಶ್

Update: 2018-09-12 13:17 GMT

ಮಡಿಕೇರಿ, ಸೆ.12: ಜಿಲ್ಲೆಯಲ್ಲಿರುವ 17 ಪುನರ್ವಸತಿ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಗೌರಿಹಬ್ಬದ ಉಡುಗೊರೆಯಾಗಿ ಸರಕಾರದಿಂದ ಹೊಸ ಬಟ್ಟೆ ವಿತರಿಸಿದರು. ಮಹಿಳೆಯರಿಗೆ ರೇಷ್ಮೆ ಸೀರೆ, ಮಕ್ಕಳಿಗೆ ಬಟ್ಟೆ, ಪುರುಷರಿಗೆ ಷರ್ಟ್, ಪ್ಯಾಂಟ್ ನೀಡಿದರು. ನಗರದ ಮೈತ್ರಿ ಸಭಾಂಗಣದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರಿಗೆ ಬಟ್ಟೆ ವಿತರಿಸಿದ ಸಚಿವರು ಸಂತ್ರಸ್ತರೊಂದಿಗೆ ಸಿಹಿ ಊಟ ಮಾಡಿದರು. 

ನಗರದ ಮೈತ್ರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಮನೆ ಕಳೆದುಕೊಂಡವರಿಗೆ ರಾಜ್ಯ ಸರಕಾರ ತೋಟಗಾರಿಕೆ, ಕೃಷಿ ಇಲಾಖೆಗಳಿಗೆ ಸೇರಿದ ತಲಾ 20 ಎಕ್ರೆ ಜಾಗವನ್ನು ಗುರುತಿಸಿದೆ. 5 ಪಂಚಾಯತ್ ವ್ಯಾಪ್ತಿಯಲ್ಲಿ 30 ಎಕ್ರೆ ಜಾಗವನ್ನೂ ಗುರುತಿಸಲಾಗಿದೆ. ಹಾಗೆಯೇ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ 500 ಮನೆಗಳ ನಿರ್ಮಾಣವಾಗಬೇಕಾಗಿದ್ದು, ಇದಕ್ಕಾಗಿ ಅರಣ್ಯ ಭೂಮಿಯನ್ನು ಮಡಿಕೇರಿ ಸಮೀಪ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಮನೆಯನ್ನು ತಾವೇ ನಿರ್ಮಿಸಲು ಮುಂದಾಗುವವರಿಗೆ ಸರಕಾರ ಪ್ರತೀ ಕುಟುಂಬಕ್ಕೆ 6 ಲಕ್ಷ ರುಪಾಯಿ ನೀಡಲಿದೆ. ಮನೆಯನ್ನು ಕಟ್ಟಿಸಿಕೊಡಿ ಎಂದು ಬಯಸುವವರಿಗೆ ಸರಕಾರವೇ ಮನೆ ನಿರ್ಮಿಸಲಿದೆ ಎಂದರಲ್ಲದೇ, ಶಾಶ್ವತವಾಗಿ ಸೂರು ದೊರಕುವವರೆಗೆ ಬಾಡಿಗೆ ಮನೆಯಲ್ಲಿ ಇರುತ್ತೇವೆ ಎಂದು ಬಯಸುವವರಿಗೆ ಮನೆ ಬಾಡಿಗೆಯನ್ನು ಸರಕಾರವೇ ನೀಡಲಿದೆ ಎಂದು ತಿಳಿಸಿದರು. ನೂತನ ಮನೆಗಳನ್ನು 10 ತಿಂಗಳ ಅವಧಿಯಲ್ಲಿ ನಿರ್ಮಿಸಿಕೊಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಕೇಂದ್ರದಿಂದ 4 ಜನರ ತಂಡ ಕೊಡಗಿನ ಅತಿವೃಷ್ಟಿ ಹಾನಿ ಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡಿದ್ದು ಈಗಾಗಲೇ ಸರಕಾರದ ವತಿಯಿಂದ ಹಾನಿಯ ವಿವರಗಳನ್ನು ಈ ತಂಡಕ್ಕೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ಕೇಂದ್ರದಿಂದ ಹೆಚ್ಚಿನ ಅನುದಾನ ಪ್ರಕೃತಿ ವಿಕೋಪ ಸಮಸ್ಯೆ ಪರಿಹಾರಕ್ಕೆ ಲಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರಕಾರ ಪತನವಾಗಲಿದೆ ಎಂಬುದೆಲ್ಲಾ ವದಂತಿಗಳು ಎಂದು ಹೇಳಿದ ಸಚಿವ ಸಾ.ರಾ.ಮಹೇಶ್, ಒಂದೇ ಸುಳ್ಳನ್ನು 100 ಬಾರಿ ಹೇಳಿ ಸತ್ಯವೆಂದು ಸಾಬೀತುಪಡಿಸುವ ವ್ಯರ್ಥ ಕಸರತ್ತಿನಲ್ಲಿ ಬಿಜೆಪಿ ತೊಡಗಿದೆ ಎಂದು ಟೀಕಿಸಿದರು.

ಶಾಸಕಿ ವೀಣಾ ಅಚ್ಚಯ್ಯ, ಜೆಡಿಎಸ್ ಮುಖಂಡ ಕೆ.ಎಂ.ಗಣೇಶ್, ಹೊಸೂರು ಸತೀಶ್ ಜೋಯಪ್ಪ ಮತ್ತಿತರರು ಹಾಜರಿದ್ದರು.        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News