ಕೊಡಗು: ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಕೇಂದ್ರದ ತಂಡ ಭೇಟಿ

Update: 2018-09-12 15:07 GMT

ಮಡಿಕೇರಿ, ಸೆ.12: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಪರಿವೀಕ್ಷಣೆಗಾಗಿ ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಬುಧವಾರ ಜಿಲ್ಲೆಗೆ ಆಗಮಿಸಿದ್ದು, ಹಾರಂಗಿ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರಿಂದ ಸಮಗ್ರ ಮಾಹಿತಿ ಪಡೆಯಿತು.

ಕೇಂದ್ರ ಸರಕಾರದ ಅಧಿಕಾರಿ ಅನಿಲ್ ಮಲಿಕ್ ನೇತೃತ್ವದ ತಂಡದಲ್ಲಿ ಜಿತೇಂದರ್ ಪನ್ವಾರ್, ಡಾ.ಪೊನ್ನುಸ್ವಾಮಿ ಇದ್ದು, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗಿರುವ ನಷ್ಟ, ಪ್ರಮುಖವಾಗಿ ಕೃಷಿ ತೋಟಗಾರಿಕಾ ಬೆಳೆಗಳ ಹಾನಿ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸೇರಿದಂತೆ ಸಂಪರ್ಕ ರಸ್ತೆಗಳಿಗೆ ಆಗಿರುವ ಹಾನಿ, ಕಾಫಿ, ಏಲಕ್ಕಿ, ತೆಂಗು, ಅಡಿಕೆ, ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ವಿದ್ಯುತ್ ಇಲಾಖೆಗೆ ಆಗಿರುವ ಹಾನಿ, ಮನೆ ಹಾನಿ, ಆಸ್ತಿ ಹಾನಿ ಕುರಿತಾದ ಸಮಗ್ರ ಮಾಹಿತಿಯನ್ನು ಅಧಿಕಾರಿಗಳ ತಂಡ ಪಡೆಯಿತು.

ಜಿಲ್ಲಾಧಿಕಾರಿಗಳ ಸಹಿತ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಿಂದ ಹಂತ ಹಂತವಾಗಿ ಮಾಹಿತಿಯನ್ನು ಪಡೆದ ಕೇಂದ್ರದ ತಂಡ ಬಳಿಕ ಪ್ರಕೃತಿ ವಿಕೋಪಕ್ಕೆ ತುತ್ತಾದ ಕೆಲವು ಪ್ರದೇಶಗಳಿಗೆ ಭೇಟಿ ನೀಡಿತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಸಂಸದ ಪ್ರತಾಪ ಸಿಂಹ ಅವರು ಘಟನೆ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ. ಚಂದ್ರಕಲಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾತ್ ಕುಮಾರ ಮಿಶ್ರಾ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್, ಕಾಫಿ ಮಂಡಳಿ ಅಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News