ಮಡಿಕೇರಿ: ಬೆಂಗಳೂರು ವಕೀಲರ ಸಂಘದಿಂದ ಸಂತ್ರಸ್ತ ವಕೀಲರಿಗೆ 7.50 ಲಕ್ಷ ರೂ. ಪರಿಹಾರ ವಿತರಣೆ

Update: 2018-09-12 17:24 GMT

ಮಡಿಕೇರಿ, ಸೆ.12: ಪ್ರಕೃತಿ ವಿಕೋಪದಲ್ಲಿ ಮನೆ, ತೋಟ ಹಾನಿಗೊಳಗಾದ ಮಡಿಕೇರಿ ವಕೀಲರ ಸಂಘದ ಸದಸ್ಯರಿಗೆ ಬೆಂಗಳೂರು ವಕೀಲರ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು. ಕೊಡಗಿನ ಸಂತ್ರಸ್ಥರಿಗಾಗಿ ಬೆಂಗಳೂರು ವಕೀಲರ ಸಂಘ 30 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದು, ಈ ಪೈಕಿ ಮಡಿಕೇರಿ ಸಂಘದ 15 ವಕೀಲರಿಗೆ 7.50  ಲಕ್ಷ ರೂ. ಪರಿಹಾರ ವಿತರಿಸಲಾಯಿತು.

ಮಡಿಕೇರಿ ನ್ಯಾಯಾಲಯ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯದ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ,  ಕೆಲವು ವಿದ್ಯುನ್ಮಾನ ಮಾಧ್ಯಮಗಳು ಇಡೀ ಕೊಡಗೇ ಕೊಚ್ಚಿ ಹೋಗಿದೆ ಎಂದು ಬಿಂಬಿಸುತ್ತಿದೆ. ವಾಸ್ತವವಾಗಿ ಮಡಿಕೇರಿ ವ್ಯಾಪ್ತಿಯ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾತ್ರ ಭಾರೀ ಹಾನಿ ಸಂಭವಿಸಿದೆ ಎಂದರು.

ಕೊಡಗಿಗೆ ಮೋಜು ಮಸ್ತಿಯ ಪ್ರವಾಸೋದ್ಯಮ ಬೇಡ, ಪರಿಸರ ಸ್ನೇಹಿ, ಪ್ರವಾಸೋದ್ಯಮಕ್ಕಷ್ಟೇ ಪ್ರೋತ್ಸಾಹ ನೀಡೋಣ ಎಂದರು. ಪ್ರಕೃತಿ ವಿಕೋಪ ತಾಣಗಳಿಗೆ ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ಚಟುವಟಿಕೆ ಬಗ್ಗೆ ಅವರು ಕಿಡಿಕಾರಿದರು. ಕೊಡಗಿನ ನಿಸರ್ಗ ಸಂರಕ್ಷಣೆ ನಿಟ್ಟಿನಲ್ಲಿ ರಾಜ್ಯದ ವಕೀಲರೂ ಕಾನೂನು ರೀತಿಯಲ್ಲಿ ಸಹಕರಿಸುವಂತೆಯೂ ಎಂ.ಸಿ.ನಾಣಯ್ಯ ಕೋರಿದರು.

ರಾಜ್ಯದ ಅಡಿಷನಲ್ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ಯಾವ ರೀತಿಯಲ್ಲಿ ಸಮುದ್ರ ತನ್ನಲ್ಲಿರುವ ತ್ಯಾಜ್ಯವನ್ನು ದಡಕ್ಕೆ ಬಿಸಾಡುತ್ತದೆಯೋ ಅದೇ ರೀತಿ ಪ್ರಕೃತಿಯೂ ತನ್ನಲ್ಲಿ ಸೇರಿರುವ ಮಲಿನವನ್ನು ಹೊರಹಾಕುವ ಪ್ರಕ್ರಿಯಿಯೇ ಪ್ರಕೃತಿ ವಿಕೋಪವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಜಕೀಯವಾಗಿ ಪ್ರಭಾವಿಯಲ್ಲದ ಕೊಡಗು ಜಿಲ್ಲೆಗೆ ಸಂಭವಿಸಿರುವ ಅನಾಹುತಕ್ಕೆ ರಾಜ್ಯದ ಜನತೆ ಕಂಬನಿ ಮಿಡಿದಿದ್ದು ಕೊಡಗಿಗೆ ನೆರವಿನ ಮಹಾಪೂರವನ್ನೇ ನೀಡುವ ಮೂಲಕ ಈ ಪುಟ್ಟ ಜಿಲ್ಲೆಯ ಜನತೆಯ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದು ಶ್ಲಾಘಿಸಿದರು. 

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ,.ರಂಗನಾಥ್ ಮಾತನಾಡಿ, ಸಂಘದಿಂದ ಸಂತ್ರಸ್ತರಿಗಾಗಿ 35 ಲಕ್ಷ ರೂ. ಸಂಗ್ರಹಿಸಲ್ಪಟ್ಟಿದ್ದು, ಈ ಪೈಕಿ 5 ಲಕ್ಷವನ್ನು ಕೇರಳಕ್ಕೆ ನೀಡಲಾಗಿದೆ. ಏಳೂವರೆ ಲಕ್ಷ ರುಪಾಯಿಯನ್ನು ಹಾನಿಗೊಳಗಾದ ಮಡಿಕೇರಿ ವಕೀಲರಿಗೆ ನೀಡಲಾಗಿದ್ದು ಉಳಿದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತದೆ ಎಂದರು. 

ಮಡಿಕೇರಿಯ ಹೆಚ್ಚುವರಿ ಮತ್ತು ಅಪರ ಜಿಲ್ಲಾ ನ್ಯಾಯಾಧೀಶ ಡಿ.ಪವನೇಶ್ ಮಾತನಾಡಿ, ಆಧುನಿಕತೆ ಹೆಸರಿನಲ್ಲಿ ನಾವು ಮಾಡಿದ ಕೃತ್ಯಗಳನ್ನು ಮನಗಂಡು ಇನ್ನಾದರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. 

ಮಡಿಕೇರಿ ವಕೀಲರ ಸಂಘದ 11 ಸದಸ್ಯರಿಗೆ ನಷ್ಟ ಪರಿಹಾರವಾಗಿ ಬೆಂಗಳೂರು ವಕೀಲರ ಸಂಘದಿಂದ ಏಳೂವರೆ ಲಕ್ಷ ರೂ.ಗಳನ್ನು ವಿತರಿಸಲಾಯಿತು. 

ನ್ಯಾಯಾಧೀಶರಾದ ವಿಜಯಕುಮಾರ್, ಮನು, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್, ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿ ಗಂಗಾಧರಯ್ಯ, ಖಚಾಂಚಿ ಶಿವಮೂರ್ತಿ ಸೇರಿದಂತೆ ಮಡಿಕೇರಿ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News