ತೆಲಂಗಾಣ: ಕೆ. ಚಂದ್ರಶೇಖರ್ ರಾವ್ ರಾಜಕೀಯ ಜೂಜಾಟ!

Update: 2018-09-15 18:32 GMT

ಚಂದ್ರಶೇಖರ್ ರಾವ್ ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಬೇಕಿದ್ದ ವಿಧಾನಸಭೆಯನ್ನು ಹೆಚ್ಚೂಕಡಿಮೆ ಹತ್ತು ತಿಂಗಳಿಗೂ ಮುನ್ನವೇ ವಿಸರ್ಜನೆ ಮಾಡಿ ತಮ್ಮ ರಾಜ್ಯವನ್ನು ಚುನಾವಣೆಗೆ ನೂಕಿದ್ದಾರೆ.
ಇದರ ಹಿಂದಿರುವುದು ರಾಜ್ಯದ ಅಭಿವೃದ್ಧಿಯಾಗಲಿ ಅಥವಾ ಜನತೆಯ ಆಶೋತ್ತರಗಳಾಗಲಿ ಅಲ್ಲ. ಬದಲಿಗೆ ಅವರ ಶುದ್ಧ ಅಧಿಕಾರದಾಹ ಮಾತ್ರ.


ವರ್ತಮಾನದ ರಾಜಕಾರಣದಲ್ಲಿ ಇದ್ದಕ್ಕಿದ್ದಂತೆ ಯೂಟರ್ನ್ ಹೊಡೆದು ತನ್ನ ಅಧಿಕಾರದಾಹವನ್ನು ಪ್ರದರ್ಶಿಸಿ, ಅದಕ್ಕೆ ಪೂರಕವಾಗಿ ಸಂವಿಧಾನದತ್ತವಾಗಿ ಜನತೆ ನೀಡಿದ ಐದು ವರ್ಷದ ಅಧಿಕಾರಾವಧಿಯನ್ನು ತಿರಸ್ಕರಿಸಿ, ವಿಧಾನಸಭೆಯನ್ನು ವಿಸರ್ಜಿಸಿದ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಮ್ಮ ರಾಜ್ಯದ ಜನತೆಗೆ ಮಾತ್ರವಲ್ಲದೆ ಸಂವಿಧಾನಕ್ಕೂ ದ್ರೋಹ ಬಗೆದಿದ್ದಾರೆ. ಈ ಹಿಂದೆಯೂ ಭಾರತದ ರಾಜಕಾರಣದಲ್ಲಿ ಹಲವಾರು ಮುಖ್ಯಮಂತ್ರಿಗಳು ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಿದ್ದಿದೆ. ಆದರೆ ಅವರೆಲ್ಲರಿಗೂ ಹೇಳಿಕೊಳ್ಳಲು ಒಂದೊಂದು ಕಾರಣಗಳಿರುತ್ತಿದ್ದವು. ಸ್ಪಷ್ಟ ಬಹುಮತ ಇಲ್ಲದಿರುವುದು, ಸರಕಾರದ ಒಳಗೆ ಹಲವು ರೀತಿಯ ಭಿನ್ನಮತೀಯ ಚಟುವಟಿಕೆಗಳಿರುವುದು, ಸರಕಾರವೇ ದೊಡ್ಡ ಹಗರಣಗಳ ಸುಳಿಗೆ ಸಿಲುಕುವುದು ಹೀಗೆ ವಿಧಾನಸಭೆ ವಿಸರ್ಜನೆ ಸಮರ್ಥಿಸಿಕೊಳ್ಳಲು ಅವರಿಗೆಲ್ಲ ಗಟ್ಟಿ ಕಾರಣಗಳಿರುತ್ತಿದ್ದವು.

ಈ ಹಿನ್ನೆಲೆಯಲ್ಲಿ ನೋಡಿದರೆ ಚಂದ್ರಶೇಖರ್‌ರಾವ್ ಅವರಿಗೆ ಇಂತಹ ಯಾವುದೇ ಕಾರಣಗಳೂ ಇರಲಿಲ್ಲ ಮತ್ತು ಅವರ ಸರಕಾರದ ಭದ್ರತೆಗೆ ಯಾವುದೇ ಆಂತರಿಕ ಮತ್ತು ಬಾಹ್ಯ ಬೆದರಿಕೆಯೂ ಇರಲಿಲ್ಲ. ನೂರ ಹತ್ತೊಂಬತ್ತು ಸಂಖ್ಯಾಬಲದ ವಿಧಾನಸಭೆಯಲ್ಲಿ ಅವರ ಟಿಆರ್‌ಎಸ್ ಪಕ್ಷಕ್ಕೆ ತೊಂಬತ್ತು ಸ್ಥಾನಗಳ ರಾಕ್ಷಸ ಬಹುಮತ ಲಭ್ಯವಿತ್ತು. ಜೊತೆಗೆ ಅಂತಹ ಯಾವುದೇ ಭಿನ್ನಮತೀಯ ಚಟುವಟಿಕೆಯಾಗಲಿ, ಹಗರಣಗಳ ಆರೋಪವಾಗಲಿ ಇರಲಿಲ್ಲ. ಇಷ್ಟೆಲ್ಲ ಇದ್ದಾಗ್ಯೂ ಚಂದ್ರಶೇಖರ್ ರಾವ್ ಮುಂದಿನ ವರ್ಷದ ಮೇ-ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಬೇಕಿದ್ದ ವಿಧಾನಸಭೆಯನ್ನು ಹೆಚ್ಚೂಕಡಿಮೆ ಹತ್ತು ತಿಂಗಳಿಗೂ ಮುನ್ನವೇ ವಿಸರ್ಜನೆ ಮಾಡಿ ತಮ್ಮ ರಾಜ್ಯವನ್ನು ಚುನಾವಣೆಗೆ ನೂಕಿದ್ದಾರೆ.

ಇದರ ಹಿಂದಿರುವುದು ರಾಜ್ಯದ ಅಭಿವೃದ್ಧಿಯಾಗಲಿ ಅಥವಾ ಜನತೆಯ ಆಶೋತ್ತರಗಳಾಗಲಿ ಅಲ್ಲ. ಬದಲಿಗೆ ಅವರ ಶುದ್ಧ ಅಧಿಕಾರದಾಹ ಮಾತ್ರ. ಯಾಕೆಂದರೆ ಕಳೆದ ಬಾರಿ ಅಂದರೆ 2014ರಲ್ಲಿ ಲೋಕಸಭಾ ಚುನಾವಣೆಯ ಜೊತೆಗೇನೇ ತೆಲಂಗಾಣ ವಿಧಾನಸಭೆಗೂ ಚುನಾವಣೆ ನಡೆದಿತ್ತು. ರಾಷ್ಟ್ರದಾದ್ಯಂತ ಬಿರುಗಾಳಿಯಂತೆ ಎದ್ದಿದ್ದ, ಭಾಜಪದ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರ ಅಲೆಯ ನಡುವೆಯೂ ಟಿಆರ್‌ಎಸ್ ತೊಂಬತ್ತು ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿದಿತ್ತು. ಮೋದಿ ಪರವಾದ ಅಲೆ ತೆಲಂಗಾಣದ ಮತದಾರರ ಮೇಲೆ ಯಾವುದೇ ಪ್ರಭಾವವನ್ನೂ ಬೀರಿರಲಿಲ್ಲ. ಇದಕ್ಕೆ ಕಾರಣ ಆಂಧ್ರಪ್ರದೇಶ ರಾಜ್ಯದಿಂದ ವಿಭಜಿತವಾಗಿ ಸ್ವತಂತ್ರರಾಜ್ಯ ತೆಲಂಗಾಣವನ್ನು ಪಡೆಯಲು ಚಂದ್ರಶೇಖರ್ ರಾವ್ ಅವರ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಂಚೂಣಿಯಲ್ಲಿ ನಿಂತು ಹೋರಾಟಮಾಡಿದ್ದಾಗಿತ್ತು. ಈ ಟಿಆರ್‌ಎಸ್‌ನ ಮುಖಂಡರಾಗಿದ್ದ ಚಂದ್ರಶೇಖರ್‌ರಾವ್ ತೆಲಂಗಾಣದ ಜನತೆಯ ದೃಷ್ಟಿಯಲ್ಲಿ ಅದರಲ್ಲೂ ಅಲ್ಲಿನ ಯುವ ಮತದಾರರ ದೃಷ್ಟಿಯಲ್ಲಿ ಸ್ವಾತಂತ್ರ ಹೋರಾಟಗಾರನ ಉನ್ನತ ಸ್ಥಾನ ಪಡೆದಿದ್ದರು. ಹೊಸ ರಾಜ್ಯವೊಂದರ ಉದಯಕ್ಕೆ ಕಾರಣವಾಗಿದ್ದ ಟಿಆರ್‌ಎಸ್‌ಪಕ್ಷವನ್ನು ಬೆಂಬಲಿಸುವುದು ತಮ್ಮ ಆದ್ಯ ಕರ್ತವ್ಯವೆಂದು ಭಾವಿಸಿದ ತೆಲಂಗಾಣದ ಜನತೆ ಹಿಂದೆ ಮುಂದೆ ನೋಡದೆ ಅದಕ್ಕೆ ಮತ ಚಲಾಯಿಸಿ ಅಭೂತಪೂರ್ವ ಗೆಲುವನ್ನು ಕರುಣಿಸಿದ್ದರು.

ಆದರೆ ಈ ನಾಲ್ಕು ವರ್ಷಗಳಲ್ಲಿ ಗೋದಾವರಿಯಲ್ಲಿ ಸಾಕಷ್ಟು ನೀರು ಹರಿದಿದೆ. ರಾವ್ ಅವರ ಮಗ ತಾರಕ್ ರಾಮರಾವ್ ಸೇರಿದಂತೆ ಅವರ ಕುಟುಂಬದ ಹಲವು ಸದಸ್ಯರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಮಗ ರಾಮರಾವ್ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದಾರೆ. ಮಗಳು ಕವಿತಾ ನಿಜಾಮಾಬಾದ್‌ನ ಸಂಸತ್ ಸದಸ್ಯೆಯಾಗಿದ್ದಾರೆ. ಸಹೋದರನ ಮಗ ಹರೀಶ್ ರಾವ್ ನೀರಾವರಿ ಸಚಿವರಾಗಿದ್ದಾರೆ. ಹೀಗೆ ರಾವ್ ಅವರ ಕುಟುಂಬದ ಬಹಳಷ್ಟು ಸದಸ್ಯರು ಒಂದಲ್ಲ ಒಂದು ರಾಜಕೀಯ ಸ್ಥಾನದಲ್ಲಿ ಆಸೀನರಾಗಿದ್ದು ಅವರ ಪಕ್ಷದ ಇತರ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಅವರ ಪುತ್ರ ತಾರಕ್ ರಾಮರಾವ್ ಡಿಫ್ಯಾಕ್ಟೊ ಮುಖ್ಯಮಂತ್ರಿಯಂತೆ ಅಧಿಕಾರ ಚಲಾಯಿಸುತ್ತಿದ್ದು ರಾವ್ ಅವರ ಉತ್ತರಾಧಿಕಾರಿಯೆಂದು ಬಿಂಬಿಸಲ್ಪಡುತ್ತಿದ್ದಾರೆ. ಇದರ ಜೊತೆಗೆ 2014ರ ರಾವ್ ಅವರ ಜನಪ್ರಿಯತೆಯ ಗ್ರಾಫ್ ಇಳಿಯುತ್ತಿದೆ. 2014ರ ನಂತರ ದಿನೇ ದಿನೇ ದುರ್ಬಲಗೊಳ್ಳುತ್ತಿರುವ ಕಾಂಗ್ರೆಸ್‌ನ ಸ್ಥಾನವನ್ನು ತುಂಬಲು ಭಾಜಪ ಶಕ್ತಿ ಮೀರಿ ಪ್ರಯತ್ನಿಸುತ್ತ ತನ್ನ ಕಬಂದಬಾಹುಗಳನ್ನು ತೆಲಂಗಾಣದಾದ್ಯಂತ ಚಾಚುತ್ತಿದೆ. ಈ ಎಲ್ಲ ಕಾರಣಗಳಿಂದ ಆತಂಕಕ್ಕೀಡಾಗಿರುವ ರಾವ್ 2019ರ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆಯ ಚುನಾವಣೆ ನಡೆದಿದ್ದೇ ಆದಲ್ಲಿ ಮೋದಿಯವರ ಜನಪ್ರಿಯತೆ ತೆಲಂಗಾಣದಲ್ಲಿಯೂ ಪ್ರಭಾವ ಬೀರಿ ತಮಗೆ ಸೋಲಾಗಬಹುದೆಂಬ ಭೀತಿ ಅವರನ್ನು ಕಾಡುತ್ತಿದೆ. ನಿಗದಿಯಂತೆ ಚುನಾವಣೆಗಳು ನಡೆದಿದ್ದೇ ಆದಲ್ಲಿ ಭಾಜಪಕ್ಕೆ ಅನುಕೂಲವಾಗಬಹುದೆಂದು ಊಹಿಸಿರುವ ರಾವ್ ಲೋಕಸಭೆಗೂ ಮುನ್ನವೇ ಚುನಾವಣೆ ನಡೆಸಿ ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಇರಾದೆಯಿಂದ ಈ ಸೆಪ್ಟಂಬರ್ ತಿಂಗಳಲ್ಲಿಯೇ ವಿಧಾನಸಭೆ ವಿಸರ್ಜಿಸಿದ್ದಾರೆ.

ಇನ್ನು ಪ್ರಸಕ್ತ ಸನ್ನಿವೇಶದಲ್ಲಿ ರಾವ್ ಅವರ ರಾಜಕೀಯದ ದಿಕ್ಕು ಯಾವ ಕಡೆಗಿದೆಯೆಂದು ಊಹಿಸುವುದು ಕಷ್ಟದ ಕೆಲಸವಾಗಿದೆ. ತೀರಾ ಮೊನ್ನೆಮೊನ್ನೆಯವರೆಗೂ ಕಾಂಗ್ರೆಸ್ ಮತ್ತು ಭಾಜಪಗಳಿಗೆ ಪರ್ಯಾಯವಾದ ತೃತೀಯ ರಂಗವೊಂದನ್ನು ಸ್ಥಾಪಿಸುವ ಮಾತಾಡುತ್ತಿದ್ದ ರಾವ್ ತೃತೀಯ ರಂಗವೊಂದರ ರಚನೆಯ ಕುರಿತಾಗಿ ಕುಮಾರಿ ಮಮತಾ ಬ್ಯಾನರ್ಜಿ, ಮತ್ತು ಮಾಜಿ ಪ್ರಧಾನಮಂತ್ರಿಗಳಾದ ದೇವೇಗೌಡರ ಜೊತೆಗೂ ಕೆಲವು ಸುತ್ತಿನ ಮಾತುಕತೆಗಳನ್ನು ಆಡಿದ್ದರು. ನೆರೆಯ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ತೆಲುಗುದೇಶಂನ ಚಂದ್ರಬಾಬು ನಾಯ್ಡುರವರು ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ತನಕವೂ ತೃತೀಯ ರಂಗವೊಂದರ ಸ್ಥಾಪನೆಗೆ ಅತೀವ ಉತ್ಸಾಹದಿಂದ ಮಾತಾಡುತ್ತಿದ್ದ ರಾವ್, ಯಾವಾಗ ಚಂದ್ರಬಾಬು ನಾಯ್ಡು ಎನ್‌ಡಿಎ ತೊರೆದು ಹೊರಬಂದರೋ ಆಗಿನಿಂದ ತೃತೀಯ ರಂಗದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಮುಂದಿನ ಚುನಾವಣೆಯ ಹೊತ್ತಿಗೆ ಭಾಜಪ ಮತ್ತು ತೆಲುಗುದೇಶಂ ಪಕ್ಷಗಳ ಮೈತ್ರಿ ತಮಗೆ ತೊಡಕಾಗಬಹುದೆಂದು ನಂಬಿದ್ದ ರಾವ್ ಅವರಿಗೆ ನಾಯ್ಡುರವರ ನಡೆಯಿಂದ ಸ್ವಲ್ಪಆತಂಕ ಕಡಿಮೆಯಾಗಿದ್ದು, ತಾನೇಕೆ ಭಾಜಪದ ಜೊತೆಗೇನೇ ಮೈತ್ರಿ ಮಾಡಿಕೊಂಡು ನಿರಾಳವಾಗಿ ಮುಂದಿನ ಚುನಾವಣೆ ಎದುರಿಸಬಾರದೆಂಬ ಚಿಂತನೆಯೂ ಅವರೊಳಗೆ ಮೊಳೆತಿರುವಂತಿದೆ.

ವಿಧಾನಸಭೆಯ ಚುನಾವಣೆಯಲ್ಲಿ ತನಗೆ ಬೆಂಬಲ ನೀಡಿದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಾನು ಭಾಜಪಕ್ಕೆ ಬೆಂಬಲ ನೀಡುವುದರಲ್ಲಿ ತಪ್ಪೇನಿದೆ ಎನ್ನುವಂತಹ ಒಂದು ಕಾರ್ಯತಂತ್ರವೂ ಅವರ ಈ ದಿಢೀರ್ ವಿಧಾನಸಭೆ ವಿಸರ್ಜನೆಯ ಹಿಂದೆ ಅಡಗಿರುವಂತಿದೆ. ಒಟ್ಟಿನಲ್ಲಿ ರಾವ್ ಅವರಿಗೆ ಮುಂದಿನ ವಿಧಾನಸಭೆಯ ಚುನಾವಣೆಯನ್ನು ಗೆಲ್ಲಬೇಕಿದೆ ಮತ್ತು ತಮ್ಮ ಪುತ್ರ ತಾರಕ್ ರಾಮರಾವ್ ಅವರ ರಾಜಕೀಯ ಭವಿಷ್ಯವನ್ನು ಸುಗಮಗೊಳಿಸಿಕೊಡುವ ಆಲೋಚನೆಯೂ ಇದೆ. ಆದರಿದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಯೆಂಬುದನ್ನೂ ನೋಡಬೇಕಾಗುತ್ತದೆ. ಯಾಕೆಂದರೆ ಕಳೆದ ಚುನಾವಣೆಯಲ್ಲಿ ಹದಿಮೂರು ಸ್ಥಾನ ಗಳಿಸಿ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ಗೆ ತೆಲಂಗಾಣದಲ್ಲಿ ಬೇರು ಮಟ್ಟದ ಸಂಘಟನೆಯಿದೆ.

ಎಐಎಂಐಎಂ ಸಹ ಸದೃಢವಾಗಿದ್ದು, ಅಷ್ಟು ಸುಲಭಕ್ಕೆ ಟಿಆರ್‌ಎಸ್‌ಗೆ ಜಯ ಕಷ್ಟವೆಂದು ಹೇಳಬಹುದು. ಇನ್ನು ರಾವ್ ನಂಬಿಕೊಂಡಿರುವ ಭಾಜಪ ತೆಲಂಗಾಣದಲ್ಲಿ ಕೇವಲ ಮೂರು ಸ್ಥಾನಗಳನ್ನು ಹೊಂದಿದ್ದು, ಟಿಆರ್‌ಎಸ್‌ನಿಂದ ಭಾಜಪಕ್ಕೆ ಲಾಭವಾಗಬಹುದೇ ಹೊರತು ಭಾಜಪದಿಂದ ರಾವ್ ಅವರಿಗೆ ಹೆಚ್ಚಿನ ಲಾಭವೇನು ದೊರೆಯಲಾರದು. ಅಷ್ಟಲ್ಲದೆ 2014ರಲ್ಲಿ ಪ್ರತ್ಯೇಕ ರಾಜ್ಯವಾದ ಸಂಭ್ರಮದ ದಿನಗಳು ಹಳೆಯದಾಗಿವೆ. ಜನತೆಯ ಆ ಸಂಭ್ರಮಗಳು ದಿನನಿತ್ಯದ ಸಮಸ್ಯೆಗಳಲ್ಲಿ ಬಣ್ಣ ಕಳೆದುಕೊಂಡಿದ್ದು, ಕಳೆದ ಬಾರಿಯ ಹಾಗೆ ಜನ ಕಣ್ಣು ಮುಚ್ಚಿಕೊಂಡು ಟಿಆರ್‌ಎಸ್‌ಗೆ ಮತ ಹಾಕುವ ಸ್ಥಿತಿಯಲ್ಲಿ ಇಲ್ಲ. ಇವೆಲ್ಲವನ್ನು ಮನಗಂಡಿರುವ ರಾವ್ ರಾಜಕೀಯ ಜೂಜಾಟಕ್ಕಿಳಿದು ಅವಧಿಗೆ ಮುನ್ನವೇ ಚುನಾವಣೆಗೆ ಹೋಗುವ ಹೆಜ್ಜೆ ಇಟ್ಟಿದ್ದಾರೆ
ಅವರ ಈ ಹೆಜ್ಜೆ ಅವರನ್ನು ಅಧಿಕಾರದತ್ತ ಕರೆದೊಯ್ಯುತ್ತದೆಯೇ ಎನ್ನುವುದನ್ನು ಕಾಲವೇ ಹೇಳಬೇಕಿದೆ. 

Similar News