ತರೀಕೆರೆ: ಹಾಲು ಸಾಗಿಸುತ್ತಿದ್ದ ಟೆಂಪೋ ಅಪಘಾತ; ಕ್ಲೀನರ್ ಮೃತ್ಯು
ಚಿಕ್ಕಮಗಳೂರು, ಸೆ.18: ಹಾಲು ಸಾಗಿಸುತ್ತಿದ್ದ ಟೆಂಪೋವೊಂದರ ಚಕ್ರ ಒಡೆದು ಪಲ್ಟಿಯಾದ ಪರಿಣಾಮ ವಾಹನದಲ್ಲಿದ್ದ ಕ್ಲೀನರ್ ಮೃತಪಟ್ಟು ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಸಂಭವಿಸಿದೆ.
ಮಂಗಳವಾರ ಬೆಳಗ್ಗೆ ತಾಲೂಕಿನ ಅಜ್ಜಂಪುರದಿಂದ ಬಾರಂದೂರು ಕಡೆಗೆ ಆರೋಗ್ಯ ಹಾಲು ಕಂಪೆನಿಯ ಹಾಲು ತುಂಬಿಕೊಂಡು ಹೋಗುತ್ತಿದ್ದ ಟೆಂಪೋದ ಒಂದು ಚಕ್ರ ಲಕ್ಕವಳ್ಳಿ ಕ್ರಾಸ್ನಲ್ಲಿ ಒಡೆದು ಹೋಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪಿದ ವಾಹನ ರಸ್ತೆ ಪಕ್ಕದ ಹೊಂಡಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದ್ದು, ಈ ಅವಘಡದಲ್ಲಿ ವಾಹನದಲ್ಲಿದ್ದ ಕ್ಲೀನರ್ ಧರಣೇಶ್( 26) ತೀವ್ರವಾಗಿ ಗಾಯಗೊಂಡು ಭಾರೀ ರಕ್ತಸ್ರಾವವಾಗಿದೆ.
ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿ ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಇನ್ನು ಟೆಂಪೋ ಚಾಲಕ ಶಶಿ ಎಂಬಾತ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದು, ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.