ತುಮಕೂರು ಜಿಪಂ ಮಾಸಿಕ ಕೆಡಿಪಿ ಸಭೆ: ಬರ ಎದುರಿಸಲು ಸಿದ್ಧರಾಗಲು ಅಧಿಕಾರಿಗಳಿಗೆ ಸಿಇಓ ಸೂಚನೆ

Update: 2018-09-18 14:12 GMT

ತುಮಕೂರು,ಸೆ.18: ಜಿಲ್ಲೆಯ 9 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು, ಕುಡಿಯುವ ನೀರು, ಮೇವು ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲಿ 7.08 ಲಕ್ಷ ಜಾನುವಾರುಗಳಿವೆ. ಸದ್ಯ ಜಿಲ್ಲೆಯಲ್ಲಿ 5,24,748 ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಈ ಮೇವು ಮುಂದಿನ 21 ವಾರಗಳಿಗೆ ಸಾಕಾಗುತ್ತದೆ ಎಂದು ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಪ್ರಕಾಶ್ ಮಾಹಿತಿ ನೀಡಿದರು. 

ರೈತರಿಗೆ ಮೇವು ಮಿನಿಕಿಟ್‍ಗಳನ್ನು ವಿತರಿಸಿ, ಅವರ ಮೂಲಕ ಮೇವು ಬೆಳೆಸಲು ಜಿಲ್ಲೆಗೆ 2.20 ಲಕ್ಷ ಮೇವು ಮಿನಿಕಿಟ್‍ಗಳ ಅಗತ್ಯವಿದೆ. ಈ ಮೇವು ಕಿಟ್‍ಗಳನ್ನು ಒದಗಿಸುವಂತೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಬರದ ತೀವ್ರತೆ ಜಾಸ್ತಿಯಾದರೆ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಆರಂಭಿಸಲು ಸ್ಥಳ ಪರಿಶೀಲಿಸುವಂತೆ ತಾಲೂಕು ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು. 

ಪಶುಪಾಲನಾ ಇಲಾಖೆಯು ನೀಡಿರುವ ಮಾಹಿತಿಯಂತೆ ಬರುವ ಫೆಬ್ರವರಿಯವರೆಗೆ ಈಗ ಲಭ್ಯವಿರುವ ಮೇವು ಸಾಕಾಗುತ್ತದೆ. ಆನಂತರ ಮೇವಿನ ಸಮಸ್ಯೆ ಉಲ್ಬಣವಾಗಬಹುದು. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದು. ಆದುದರಿಂದ ಎಲ್ಲಾ ಇಲಾಖೆಗಳು ಮುಂಜಾಗ್ರತಾ ಸಿದ್ಧತೆ ಮಾಡಿಕೊಳ್ಳಬೇಕು. ಈ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳಿಂದ ದಿನಾಂಕ ಪಡೆದು ಸಭೆಯನ್ನು ಕರೆಯಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು. 

ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ 64 ಹಳ್ಳಿಗಳು, ಗುಬ್ಬಿ-125, ಕುಣಿಗಲ್-21, ಕೊರಟಗೆರೆ-38, ಮಧುಗಿರಿ-30, ತಿಪಟೂರು-38, ತುಮಕೂರು-71, ತುರುವೇಕೆರೆ-128, ಪಾವಗಡ-82, ಶಿರಾ-30 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 627 ಹಳ್ಳಿಗಳಲ್ಲಿ ಕುಡಿಯುವ ನೀರು ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಶೀಘ್ರವೇ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚೆನ್ನವೀರಸ್ವಾಮಿ ಅವರು ಸಭೆಗೆ ತಿಳಿಸಿದರು. 

ತುಮಕೂರು ಜಿಲ್ಲೆಯಲ್ಲಿ 2015-16 ಹಾಗೂ 2016-17ನೇ ಸಾಲಿನಲ್ಲಿ ಒಟ್ಟು 450 ಅಂಗನವಾಡಿ ಕಟ್ಟಡಗಳು ಮಂಜೂರಾಗಿದ್ದವು. ಕೆಲವು ಕಾರಣಗಳಿಂದಾಗಿ 136 ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಇದೀಗ ತೀವ್ರ ವೇಗ ನೀಡಿದ್ದು, ನವೆಂಬರ್ 14 ರೊಳಗೆ ಕನಿಷ್ಠ 100 ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಿಇಓ ಅವರು ತಿಳಿಸಿದರು. 

ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಮೂಲಕ ಅನುಷ್ಟಾನಗೊಳ್ಳುವ ಪಾಲಿಹೌಸ್‍ಗಳ ನಿರ್ಮಾಣಕ್ಕೆ ಒಂದು ತಾಲೂಕಿನಲ್ಲಿ ಫಲಾನುಭವಿಗಳು ಲಭ್ಯವಾಗದಿದ್ದರೆ, ಮತ್ತೊಂದು ತಾಲೂಕಿನ ಫಲಾನುಭವಿಗೆ ಈ ಆರ್ಥಿಕ ನೆರವನ್ನು ವರ್ಗಾಯಿಸಿ ನೀಡಿ, ಯಾವುದೇ ಕಾರಣಕ್ಕೂ ಹಣ ನಷ್ಟವಾಗದಂತೆ ನೋಡಿಕೊಳ್ಳಿ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು. 

ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಸರಿಯಾಗಿ ಕೊರೆದಿಲ್ಲ. ಈ ತಿಂಗಳ ಅಂತ್ಯದೊಳಗೆ ಬಾಕಿಯಿರುವ ಕೊಳವೆ ಬಾವಿಗಳನ್ನು ಕೊರೆಸಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ನಿಗಮಗಳ ಜಿಲ್ಲಾ ವ್ಯವಸ್ಥಾಪಕರುಗಳಿಗೆ ಸೂಚಿಸಿದರು. ತಾಲೂಕು ಮಟ್ಟದಲ್ಲಿ ಜರುಗುವ ಸರಕಾರಿ ಕಾರ್ಯಕ್ರಮಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಶಿಷ್ಠಾಚಾರ ಪ್ರಕಾರ ಆಹ್ವಾನಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ, ತಾಲೂಕು ಮಟ್ಟದ, ಗ್ರಾಮ ಮಟ್ಟದ ಕಾರ್ಯಕ್ರಮಗಳಿಗೆ ಸ್ಥಳೀಯ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸಬೇಕು. ಅಲ್ಲದೆ ಆಹ್ವಾನ ಪತ್ರಿಕೆಯನ್ನು ಸಂಬಂಧಿಸಿದ ತಾಲೂಕುಗಳ ತಹಶೀಲ್ದಾರ್ ಗಳಿಂದ ಶಿಷ್ಟಾಚಾರದಂತೆ ಅನುಮೋದನೆ ಪಡೆಯಬೇಕು.ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೂಕ್ತ ನಿಗಾವಹಿಸುವಂತೆ ಸೂಚಿಸಿದರು. 

ಕೇಂದ್ರ ಹಾಗೂ ಅಂತರರಾಜ್ಯಗಳಿಗೆ ನಡೆಸುವ ಪತ್ರ ವ್ಯವಹಾರಗಳನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಸರಕಾರದ ಎಲ್ಲಾ ಇಲಾಖೆಗಳ ಕಡತಗಳು, ಪತ್ರ ವ್ಯವಹಾರಗಳು ಕನ್ನಡದಲ್ಲಿ ನಡೆಯುತ್ತಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ ಅವರು ಸಭೆಗೆ ತಿಳಿಸಿದರು. 

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ನವ್ಯಬಾಬು, ಅಕ್ಕಮಹಾದೇವಿ, ಉಪಕಾರ್ಯದರ್ಶಿಗಳಾದ ಪ್ರಕಾಶ್, ಮಾಂಕಾಳಪ್ಪ, ಯೋಜನಾಧಿಕಾರಿ ಬಾಲರಾಜ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ದಿನೇಶ್, ಕೃಷಿಕ ಸಮಾಜದ ಲೋಕೇಶ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News