ದಸರಾ ಸಂದರ್ಭದಲ್ಲಿ ರಾಜವಂಶಸ್ಥರಿಗೆ ನೀಡುವ ಗೌರವಧನ ಮುಂದುವರೆಯಲಿದೆ: ಸಚಿವ ಜಿ.ಟಿ.ದೇವೇಗೌಡ

Update: 2018-09-18 17:29 GMT

ಮೈಸೂರು,ಸೆ.18: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ರಾಜವಂಶಸ್ಥರಿಗೆ ನೀಡುವ ಗೌರವ ಧನ ಎಂದಿನಂತೆ ಮುಂದುವರಿಯಲಿದ್ದು, ಈ ಬಗ್ಗೆ ಯಾವುದೇ ವಿವಾದ ಸೃಷ್ಟಿಸಬಾರದು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಕ್ರಾಫರ್ಡ್ ಭವನದಲ್ಲಿ ಮಂಗಳವಾರ ರಾಜ್ಯದ ಎಲ್ಲಾ ಕುಲಪತಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜವಂಶಸ್ಥರು ಹೇಳಿರುವಂತೆ ಸರ್ಕಾರದಿಂದ ನಡೆಸುವುದು ನಾಡಹಬ್ಬವಾಗಿದ್ದು, ಇದು ಸಹ ರಾಜವಂಶಸ್ಥರ ಸಹಕಾರದಲ್ಲೇ ನಡೆಯುತ್ತಿದೆ. ನಾಡಹಬ್ಬ ದಸರಾ ಆಚರಣೆ ವಿಷಯದಲ್ಲಿ ಸರ್ಕಾರ ಹಾಗೂ ರಾಜವಂಶಸ್ಥರು ಒಟ್ಟಾಗಿ ಆಚರಣೆ ಮಾಡಲಿವೆ. ಹೀಗಾಗಿ ಯಾರು ಏನೇ ಹೇಳಿದರು ಹಿಂದಿನಿಂದ ನಡೆದು ಬಂದಿರುವ ಪದ್ಧತಿಯನ್ನು ಪಾಲನೆ ಮಾಡಲಿದ್ದು, ಗೌರವಧನ ನೀಡುವ ಪದ್ಧತಿಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ಈ ಬಗ್ಗೆ ಯಾರೊಬ್ಬರು ಯಾವುದೇ ವಿವಾದಗಳನ್ನು ಸೃಷ್ಟಿಸಬಾರದು ಎಂದರು.

ದಸರಾ ಕಾರ್ಯಕ್ರಮಗಳ ಪೋಸ್ಟರ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಮೈಸೂರು ಅರಸರ ಭಾವಚಿತ್ರಗಳನ್ನು ಬಳಸಲು ರಾಜವಂಶಸ್ಥರ ಅನುಮತಿ ಇಲ್ಲದೆ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಮೈಸೂರು ಸಂಸ್ಥಾನದ ಯಾವುದೇ ಅರಸರ ಭಾವಚಿತ್ರಗಳನ್ನು ಮುದ್ರಿಸಿಲ್ಲ. ಈ ಬಗ್ಗೆ ರಾಜವಂಶಸ್ಥರೊಂದಿಗೆ ಮಾತನಾಡಿ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವವಿದ್ಯಾನಿಲಯಗಳ ಮಾಹಿತಿ ಹಾಗೂ ಅಲ್ಲಿ ದೊರೆಕುವ ಸೌಲಭ್ಯ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. 

ಸಾರ್ವಜನಿಕರಲ್ಲಿ ಉನ್ನತ ಶಿಕ್ಷಣ ಇಲಾಖೆ ಹೇಗೆ ಕಾರ್ಯನಿರ್ವಹಿಸುವತ್ತಿದೆ ಎಂಬ ಮಾಹಿತಿ ಇಲ್ಲ. ಇಲಾಖೆ ವ್ಯಾಪ್ತಿಯ 19 ವಿವಿಗಳಲ್ಲಿ ಎಲ್ಲಾ ಕೋರ್ಸ್‍ಗಳಿಗೆ ಸಂಬಂಧಿಸಿದ ಮಾಹಿತಿ ನೀಡುವ ಮೂಲಕ ಜನರ ಹತ್ತಿರಕ್ಕೆ ಕೊಂಡೊಯ್ಯಲಾಗುವುದು. ರಾಜ್ಯ ವಿವಿಗಳಲ್ಲಿನ ಅಗತ್ಯವಿರುವ ಕೋರ್ಸ್, ಮೂಲ ಸೌಲಭ್ಯಗಳ ಸಮಗ್ರ ಮಾಹಿತಿ ಒಳಗೊಂಡ ಮೊಬೈಲ್ ಅಪ್ಲಿಕೇಷನ್ ರೂಪಿಸಲಾಗುತ್ತಿದ್ದು, ಮೊಬೈಲ್ ಅಪ್ಲಿಕೇಷನ್‍ನಿಂದ ಉನ್ನತ ಶಿಕ್ಷಣಕ್ಕಾಗಿ ದೇಶ, ವಿದೇಶ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಲು ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ. ಅ. 5ರೊಗಳಗೆ ಮೊಬೈಲ್ ಅಪ್ಲಿಕೇಷನ್ ಸಿದ್ಧವಾಗಲಿದೆ. ಇದರಿಂದ ಶೈಕ್ಷಣಿಕ ವಲಯಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News