ಶಿಕ್ಷಣವಂತರಾಗಿ ದೇಶದ ಐಕ್ಯತೆಗೆ ದುಡಿಯೋಣ: ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನಾವರ್

Update: 2018-09-19 12:47 GMT

ತುಮಕೂರು,ಸೆ.19: ಸಮಾಜಕ್ಕೆ ನಮ್ಮ ಅವಶ್ಯಕತೆ ಇಲ್ಲದಿದ್ದರೂ, ನಮಗೆ ಸಮಾಜದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಶಿಕ್ಷಣವಂತರಾಗಿ ಭಾರತದ ಸಮಗ್ರತೆ, ಐಕ್ಯತೆ ಮತ್ತು ಅಭಿವೃದ್ದಿಗಾಗಿ ಒಗ್ಗೂಡಿ ದುಡಿಯೋಣ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನಾವರ್ ತಿಳಿಸಿದ್ದಾರೆ.

ನಗರದಲ್ಲಿ ಎಸ್.ಐ.ಓ(ಸ್ಟೂಡೆಂಟ್ ಇಸ್ಲಾಮಿಕ ಆರ್ಗನೈಜೇಷನ್) ತುಮಕೂರು ಜಿಲ್ಲಾ ಘಟಕ ಆಯೋಜಿಸಿದ್ದ 16ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಸಮಾಜದಲ್ಲಿ ಎಲ್ಲರಂತೆ ಬದುಕುಬೇಕಾದರೆ ಔಪಚಾರಿಕ ಶಿಕ್ಷಣದ ಅಗತ್ಯವಿದೆ. ನೀವು ವೃತ್ತಿಪರ, ಸಾಮಾನ್ಯ ಯಾವುದೇ ಶಿಕ್ಷಣ ಪಡೆಯಿರಿ, ಚಿಂತೆಯಿಲ್ಲ. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ರೂಢಸಿಕೊಂಡು ದೇಶದ ಉತ್ತಮ ಪ್ರಜೆಗಳಾಗೋಣ ಎಂದರು.

ವೃತ್ತಿ ಶಿಕ್ಷಣ ಪಡೆಯುವುದರಿಂದ ಕೇವಲ ಇಂಜಿನಿಯರಿಂಗ್, ಮೆಡಿಕಲ್ ವೃತ್ತಿಯನ್ನು ಮಾತ್ರ ಕೈಗೊಳ್ಳಲು ಸಾಧ್ಯ. ಆದರೆ ಸಾಮಾನ್ಯ ಶಿಕ್ಷಣ ಪಡೆಯುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಆಡಳಿತ ಸೇವೆಯಲ್ಲಿ ಕೆಲಸ ಮಾಡಬಹುದಾಗಿದೆ. ಬಿ ಕಾಂ, ಬಿ.ಎಸ್ಸಿ ಇನ್ನಿತರ ಕೋರ್ಸುಗಳಿಗೆ ಹಲವು ಅವಕಾಶಗಳು ಲಭ್ಯವಾಗಲಿದೆ. ನಿಮ್ಮ ಮುಂದಿರುವ ಅವಕಾಶ ಗಳನ್ನು ಸದುಪಯೋಗ ಪಡಿಸಿಕೊಳ್ಳಲು ನೀವೆಲ್ಲರೂ ತಯಾರಾಗಬೇಕೆಂದು ಮುಬೀನ್ ಮುನಾವರ್ ನುಡಿದರು.

ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಧಾಮಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬುದ್ದಿವಂತಿಕೆಯ ಜೊತೆಗೆ ಕೌಶಲ್ಯ ಭರಿತರ ಅಗತ್ಯವೂ ಇದೆ. ವಿಜ್ಞಾನ, ತಂತ್ರಜ್ಞಾನದ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ. ಇವುಗಳನ್ನು ಪಡೆದುಕೊಳ್ಳಲು ನೀವೆಲ್ಲರೂ ಸಿದ್ದರಾಗಬೇಕಾಗಿದೆ. ಮುಸ್ಲಿಮರು ಧಾರ್ಮಿಕವಾಗಿ ಯಾವುದೇ ಶಿಕ್ಷಣ ಪಡೆದರೂ, ಔಪಚಾರಿಕ ಶಿಕ್ಷಣ ಪಡೆಯದಿದ್ದರೆ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳನ್ನು ಪಡೆಯಲು ಅಸಾಧ್ಯ. ಆದ್ದರಿಂದ ಎಂತಹದ್ದೇ ಸಂದರ್ಭ ಬಂದರೂ ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಬಡತನ, ಅಜ್ಞಾನ ದಿಂದ ಶಿಕ್ಷಣದಲ್ಲಿ ಅಲ್ಪಸಂಖ್ಯಾತರು ಹಿಂದುಳಿದಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಂತಹ ಸಾಮಾಜಿಕ ಪಿಡುಗಿನಿಂದ ಹೊರಬರಲು ಶಿಕ್ಷಣವೇ ಮಾರ್ಗ ಎಂಬುದನ್ನು ಯಾರು ಮರೆಯಬಾರದು ಎಂದರು.

ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಜೇಷನ್ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವ ಮೂಲಕ ಅವರಲ್ಲಿ ಹೊಸ ಉತ್ಸಾಹ ತುಂಬಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದರ ಜೊತೆಗೆ ಸಮುದಾಯದಲ್ಲಿ ಅರಿವು ಮೂಡಿಸಿ ಸರಕಾರಿ ಸವಲತ್ತುಗಳ ಬಳಕೆಗೆ ಸಹಕಾರ ನೀಡಬೇಕಾಗಿದೆ. ಸರಕಾರಇಂದು ಎಲ್ಲಾ ವಿದ್ಯಾರ್ಥಿ ವೇತನಗಳನ್ನು ಅನ್‍ಲೈನ ಮೂಲಕ ವಿತರಿಸುತ್ತಿದೆ. ಬೇರೆ ಸಮುದಾಯದ ಶಾಲೆಗಳಲ್ಲಿ ಶೇ70ಕ್ಕಿಂತ ಹೆಚ್ಚು ಮಕ್ಕಳು ನೊಂದಾಯಿಸಿದ್ದರೆ,ಅಲ್ಪಸಂಖ್ಯಾತರ ಸಮುದಾಯದ,ಅದರಲ್ಲಿಯೂ ಮುಸ್ಲಿಂ ಮಕ್ಕಳ ನೊಂದಣಿ ತೀರ ಇಳಿಮುಖವಾಗಿದೆ.ಈ ಬಗ್ಗೆ ಎಸ್.ಐ.ಓ ಹೆಚ್ಚಿನ ನಿಗಾವಹಿಸಿದರೆ ಬಡಮಕ್ಕಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಐ.ಓ ಜಿಲ್ಲಾಧ್ಯಕ್ಷ ಇನಾಮುಲ್ಲಾ ಖಾನ್ ಮಾತನಾಡಿ, ಎಸ್.ಐ.ಓ ಕಳೆದ 30 ವರ್ಷಗಳಿಂದ ವಿದ್ಯಾರ್ಥಿ,ಯುವಜನರ ಸರ್ವತೋಮುಖ ಬೆಳವಣಿಗೆಗೆ ದುಡಿಯುತ್ತಿದೆ. ಸಮಾನತೆ, ಸಹನೆ, ಪ್ರೀತಿ ತುಂಬಿದ, ಭಯ ಮುಕ್ತ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆಯಿಂದ ದುಡಿಯುತ್ತಿದ್ದು, ಇದಕ್ಕಾಗಿ ಜಾತಿ, ಮತ, ಪಂಥ ಮೀರಿ ಯುವಜನರನ್ನು ಒಗ್ಗೂಡಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಮಾಆತೆ ಇಸ್ಲಾಮಿ ಹಿಂದ್‍ನ ತುಮಕೂರು ಅಧ್ಯಕ್ಷ ಹನೀಫ್‍ವುಲ್ಲಾ, ಮಾಜಿ ಶಾಸಕ ಎಸ್.ಶಪಿ ಅಹಮದ್, ಮುಕರಂ ಸೈಯಿದ್,ವೆಲ್‍ಫೇರ್ ಪಾರ್ಟಿ ಅಫ್ ಇಂಡಿಯಾದ ತಾಜುದ್ದೀನ್ ಷರೀಫ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 2017-18ನೇ ಸಾಲಿನ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.75ಕ್ಕಿಂತಲೂ ಹೆಚ್ಚು ಅಂಕ ಪಡೆದ ಎಲ್ಲಾ ಸಮುದಾಯದ ಮಕ್ಕಳಿಗೆ ಸರ್ಟಿಪಿಕೇಟ್ ಮತ್ತು ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News