ಪ್ರೀತಿಸಿ ವಿವಾಹವಾಗಿದ್ದ ನವದಂಪತಿ ನೇಣಿಗೆ ಶರಣು

Update: 2018-09-19 15:13 GMT

ಮಂಡ್ಯ, ಸೆ.19: ಕಳೆದ 20 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ಪ್ರೇಮಿಗಳು ಮರಣ ಪತ್ರ ಬರೆದಿಟ್ಟು ಒಂದೇ ಕುಣಿಕೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಳವಳ್ಳಿ ಪಟ್ಟಣದ ಸಮೀಪದಲ್ಲಿರುವ ಅಂಚೆದೊಡ್ಡಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೂಲತಃ ಮಂಡ್ಯ ತಾಲೂಕು ಹೆಬ್ಬಕವಾಡಿ ಗ್ರಾಮದ ವಾಸಿಗಳಾದ ಅಶ್ವಿನಿ(21) ಹಾಗೂ ನವೀನ್ (22) ಆತ್ಮಹತ್ಯೆ ಮಾಡಿಕೊಂಡವರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಕಳೆದ 20 ದಿನಗಳ ಹಿಂದೆಯಷ್ಟೇ ತಮ್ಮ ಮನೆಯವರನ್ನು ಒಪ್ಪಿಸಿ ಸಂಪ್ರದಾಯದಂತೆ ಮದುವೆಯಾಗಿದ್ದರು ಎನ್ನಲಾಗಿದೆ. 

ಕಳೆದ 3-4 ದಿನಗಳಿಂದ ನವೀನ್ ಅವರ ಅಜ್ಜಿ ಮನೆಯಾದ ಅಂಚೇದೊಡ್ಡಿ ಗ್ರಾಮದಲ್ಲಿ ಈ ನವಜೋಡಿ ಉಳಿದುಕೊಂಡಿದ್ದರು. ಮನೆಯವರೆಲ್ಲಾ  ಹೊರಹೋಗಿದ್ದ ಸಂದರ್ಭದಲ್ಲಿ ಇಬ್ಬರೂ ಒಂದೇ ಹಗ್ಗದಲ್ಲಿ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ ಸಾವಿಗೂ ಮುನ್ನ ಮರಣ ಪತ್ರವೊಂದನ್ನು ಬರೆದಿಟ್ಟಿರುವ ದಂಪತಿ, ತಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನಾವಿಬ್ಬರೂ ಆಸೆಯಿಂದ ಸಾವಿಗೆ ಶರಣಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ. 

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮಾಂತರ ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮರಣ ಪತ್ರದ ವಿವರ: ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವು ಆಸೆಯಿಂದ ಸಾವಿಗೆ ಶರಣಾಗುತ್ತಿದ್ದೇವೆ. ನಮ್ಮ ಆಸೆಯಂತೆ ನಮಗೆ ಮದುವೆ  ಮಾಡಿಕೊಟ್ಟಿದ್ದು, ಆದರೆ ಅದನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ಸಾಯುತ್ತಿದ್ದೇವೆ. ಅಶ್ವಿನಿ 20 ಸಾವಿರ ರೂ.ಗಳನ್ನು ಮಾತ್ರ ತಂದಿದ್ದಳು. ಅದನ್ನು ಅವರ ತಾಯಿಗೆ ತಿಳಿಸಿದ್ದೇನೆ. ನಮ್ಮ ಬಗ್ಗೆ ಯೋಚಿಸಬೇಡಿ. ಎಲ್ಲರೂ ಚೆನ್ನಾಗಿರಿ ಅದೇ ನಮ್ಮ ಕೊನೆಯ ಆಸೆ. ಅಣ್ಣಾ, ಅವ್ವನನ್ನು ಚೆನ್ನಾಗಿ ನೋಡಿಕೋ, ನಮ್ಮ ಸಾವಿಗೆ ಯಾರೂ ಕಾರಣರಲ್ಲ. ಇಂತಿ ನಿಮ್ಮ ಪ್ರೀತಿಯ ಮಗ ಮತ್ತು ಮಗಳು. ನವೀನ್ ಮತ್ತು ಅಶ್ವಿನಿ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News