ಕೊಡಗು ಮಳೆಹಾನಿ: ಶಾಶ್ವತ ಪುನರ್ವಸತಿ ಕಲ್ಪಿಸಲು ಆಗ್ರಹಿಸಿ ಸಿಎನ್‍ಸಿ ಧರಣಿ

Update: 2018-09-21 11:28 GMT

ಮಡಿಕೇರಿ, ಸೆ.21: ಅತಿವೃಷ್ಟಿಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದು ಹಾಗೂ ಹಾನಿಗೆ ಒಳಗಾದ ಪ್ರದೇಶಗಳ ಪುನರ್ನಿರ್ಮಾಣಕ್ಕೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.

ಮಹಾಮಳೆಯಿಂದ ಹಾನಿಗೀಡಾದಪ್ರದೇಶಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೊಡಗಿನ 7 ನಾಡುಗಳ ಸಂತ್ರಸ್ತರಿಗೆ ಸೂಕ್ತ ಪುನರ್ ವಸತಿ ಕಲ್ಪಿಸಲು ಮತ್ತು ಪರಿಹಾರವನ್ನು ಘೋಷಿಸಲು 30 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. 

ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಾರ್ಯ ಪೂರ್ಣಗೊಳ್ಳುವವರೆಗೆ 10 ವರ್ಷಗಳ ಕಾಲ ಅವರ ಜೀವನ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾಥ ಪ್ರಜ್ಞೆ ಕಾಡದಂತೆ ಭರವಸೆ ಮೂಡಿಸುವ ಸಲುವಾಗಿ, ಸಂತ್ರಸ್ತರು ಬಾಡಿಗೆ ಮನೆ ಪಡೆದುಕೊಂಡು ವಾಸಿಸಲು ಆ ಮನೆಯ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಆರ್ಥಿಕ ಸಹಾಯದ ವಿಶೇಷ ಪ್ಯಾಕೇಜ್‍ನ ವ್ಯವಸ್ಥೆ ಮಾಡಬೇಕು. ಪುನರ್ವಸತಿಯನ್ನು ಅದೇ ಸ್ಥಳದಲ್ಲಿ ಮಾಡಬೇಕು. ಅದಕ್ಕಾಗಿ ಅವರು ಗೌರವಪೂರ್ಣ ಬದುಕು ಕಟ್ಟಿಕೊಳ್ಳಲು, 30 ಸಾವಿರ ಕೋಟಿ ಆರ್ಥಿಕ ಪ್ಯಾಕೇಜನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಬೇಕು ಎನ್ನುವ ಬೇಡಿಕೆಯನ್ನು ಈಡೇರಿಸುವಂತೆ ನಾಚಪ್ಪ ಒತ್ತಾಯಿಸಿದರು.

ಕೊಡಗಿನ ಏಳು ನಾಡುಗಳಲ್ಲುಂಟಾದ ಪ್ರಾಕೃತಿಕ ವಿಕೋಪದ ಸಂತ್ರಸ್ತ ನಿರಾಶ್ರಿತರ ಶಾಶ್ವತ ಪುನರ್ವಸತಿಗಾಗಿ ವಿಶೇಷ ವಿಪತ್ತು ನಿರ್ವಹಣಾ ಮಂತ್ರಾಲಯವನ್ನು ಸ್ಥಾಪಿಸಿ ಮಂತ್ರಿಯೊಬ್ಬರನ್ನು ನೇಮಿಸಬೇಕು. ಕೊಡಗಿನ ಪ್ರಾಕೃತಿಕ ವಿಕೋಪವನ್ನು ಅಂತಾರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಬೇಕು. ಆ ಮೂಲಕ ನಿರಾಶ್ರಿತರಿಗೆ ಸಮರೋಪಾದಿಯಲ್ಲಿ ಶಾಸನಬದ್ಧ ಪುನರ್ವಸತಿ ಕಲ್ಪಿಸಲು ಸಿದ್ಧತೆ ಮತ್ತು ಬದ್ಧತೆ ತೋರಬೇಕು. ಪ್ರಾಕೃತಿಕ ವಿಕೋಪಕ್ಕೆ ಕೊಡಗಿನ ಹೃದಯ ಭಾಗದಲ್ಲಿ ನಿರ್ಮಿಸಿರುವ ಹಾರಂಗಿ ಜಲಾಶಯವೇ ಕಾರಣವಾಗಿದ್ದು, ಪ್ರಸಕ್ತ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಆಯಾ ಪ್ರದೇಶಗಳಲ್ಲೇ ಪುನರ್ವಸತಿ ಕಲ್ಪಿಸುವ ಮುನ್ನ ಜಲಾಶಯವನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.   

ಅತಿವೃಷ್ಟಿಯಿಂದ ಸಮಗ್ರ ಕೊಡಗು ಸಂಕಷ್ಟಕ್ಕೆ ಸಿಲುಕಿದೆ, ಕೊಡಗು ಅಕ್ಷರಶಃ ಕೊಚ್ಚಿ ಹೋಗಿದೆಯೆಂದು ಕೆಲವು ಮಾಧ್ಯಮಗಳು ಸುದ್ಧಿ ಬಿತ್ತರಿಸಿದ್ದು, ಇದನ್ನು ಬಳಸಿಕೊಂಡ ಕೆಲವು ಬಹುದೊಡ್ಡ ಮಾಫಿಯ ಜಾಲ ಜನರನ್ನು ವಂಚಿಸಿದೆ. ನೈಜ ದುರಂತವನ್ನು ಮರೆಮಾಚಿ ಸಂತ್ರಸ್ತರಿಗೆ ಪರಿಹಾರ ತಲುಪದಂತೆ ಮಾಡಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಎನ್.ಯು.ನಾಚಪ್ಪ ಸರ್ಕಾರವನ್ನು ಆಗ್ರಹಿಸಿದರು.

ಪುನರ್ವಸತಿ ಕಾರ್ಯ ಆಗುವವರೆಗೆ, ಸಂತ್ರಸ್ತರು, ತಮ್ಮ ಮಕ್ಕಳ ವಿದ್ಯಾರ್ಜನೆ ಮತ್ತು ತಮ್ಮ ಅಳಿದುಳಿದ ಸ್ಥಳಗಳನ್ನು ಜೋಪಾನಮಾಡಿ ಅಭಿವೃದ್ಧಿಪಡಿಸಲು ಆರ್ಥಿಕ ಸಹಾಯ ನೀಡಬೇಕು ಮತ್ತು ಅವರ ಮಕ್ಕಳಿಗೆ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿಸಿಕೊಡಬೇಕು.
ಕೆಲವು ಪರಿಹಾರ ಕೇಂದ್ರಗಳಲ್ಲಿ ವಲಸಿಗರು ಹಾಗೂ ರೊಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿದ್ದು, ಅತಿವೃಷ್ಟಿ ಹಾನಿ ನೆಪದಲ್ಲಿ ನೈಜ ಸಂತ್ರಸ್ತರ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ವಂಚನೆಯ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ನಾಚಪ್ಪ ಆಗ್ರಹಿಸಿದರು.

ಸಿಎನ್‍ಸಿ ಸಂಘಟನೆಯ ಪ್ರಮುಖರು ಹಾಗೂ ಸಂತ್ರಸ್ತ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News