ಪ.ಘಟ್ಟವನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸುವ ಯೋಜನೆ ತಿರಸ್ಕರಿಸಿದ ಕರ್ನಾಟಕ

Update: 2018-09-22 16:45 GMT

ಹೊಸದಿಲ್ಲಿ, ಸೆ.22: ಪಶ್ಚಿಮ ಘಟ್ಟಗಳನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸುವ ಕರಡು ಅಧಿಸೂಚನೆಯನ್ನು ಶೀಘ್ರವೇ ಕೇಂದ್ರ ಪರಿಸರ ಸಚಿವಾಲಯ ಹೊರಡಿಸಲಿದ್ದು , ಇದು ರಾಜ್ಯದ ಅರ್ಥವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ಹೊಸ ಅಧಿಸೂಚನೆಯನ್ನು ತಾನು ಒಪ್ಪುವುದಿಲ್ಲ ಎಂದು ಕರ್ನಾಟಕ ಸರಕಾರ ತಿಳಿಸಿದೆ.

2014ರಲ್ಲಿ ಹೊರಡಿಸಲಾಗಿದ್ದ ಕರಡುಸೂಚನೆಯ ಬಗ್ಗೆ ಕೇಂದ್ರ ಸರಕಾರ ಹಾಗೂ ಬಾಧಿತ ರಾಜ್ಯಗಳ ನಡುವೆ ಸಹಮತ ಮೂಡದ ಕಾರಣ ಅಧಿಸೂಚನೆಯನ್ನು ಕೈಬಿಡಲಾಗಿತ್ತು. ಕರ್ನಾಟಕ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಕೇರಳ, ಗುಜರಾತ್ ರಾಜ್ಯಗಳು ಈ ಅಧಿಸೂಚನೆಯ ವ್ಯಾಪ್ತಿಗೆ ಬರುತ್ತಿದ್ದು, ಇದಕ್ಕೆ ಉತ್ತರಿಸಲು 60 ದಿನಗಳ ಕಾಲಾವಧಿ ನೀಡಲಾಗಿದೆ. ಈ ಆರು ರಾಜ್ಯಗಳಲ್ಲಿ ಹರಡಿರುವ 56,825 ಕಿ.ಮೀ. ವ್ಯಾಪ್ತಿಯ ಪಶ್ಚಿಮ ಘಟ್ಟ ಶ್ರೇಣಿಯನ್ನು ಪರಿಸರ ಸೂಕ್ಷ್ಮ ವಲಯ(ಇಎಸ್‌ಎ) ಎಂದು ಅಧಿಸೂಚನೆಯಲ್ಲಿ ಘೋಷಿಸಲಾಗಿದೆ. ಅಧಿಸೂಚನೆಯನ್ನು ಮರು ಪ್ರಕಟಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಅಧಿಸೂಚನೆಗೆ ಕರ್ನಾಟಕದಿಂದ ತೀವ್ರ ವಿರೋಧ ಇರುವುದರಿಂದ ಆ ರಾಜ್ಯದೊಡನೆ ಮಾತುಕತೆ ನಡೆಸಲಾಗುವುದು ಎಂದು ಪರಿಸರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎ.ಕೆ.ಮೆಹ್ತಾ ತಿಳಿಸಿದ್ದಾರೆ.

ಪಶ್ಚಿಮ ಘಟ್ಟವನ್ನು ಇಎಸ್‌ಎ ಎಂದು ಘೋಷಿಸುವ ಅಧಿಸೂಚನೆ ರಾಜ್ಯದ ಅರ್ಥವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಅರಣ್ಯ ಸಂರಕ್ಷಣೆಯ ನಿಟ್ಟಿನಲ್ಲಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಯಂತಹ ಹಲವಾರು ಕಾಯ್ದೆಗಳಿರುವಾಗ ಇನ್ನೊಂದು ಕಾಯ್ದೆಯ ಅಗತ್ಯವೇನಿದೆ. ಈ ಅಧಿಸೂಚನೆಯ ಪ್ರಕಾರ ಕೆಂಪು ಪಟ್ಟಿಯಲ್ಲಿರುವ ಉದ್ದಿಮೆಗಳನ್ನು ಘಟ್ಟ ಪ್ರದೇಶದಲ್ಲಿ ನಿಷೇಧಿಸಲಾಗುವುದು. ಇದರಿಂದ ಹಲವರ ಜೀವನೋಪಾಯದ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಕರ್ನಾಟಕದ ಅರಣ್ಯ ಸಚಿವ ಶಂಕರ್ ಆರ್ ಹೇಳಿದ್ದಾರೆ.

ಕೀಟನಾಶಕ, ಪೆಟ್ರೊಕೆಮಿಕಲ್ಸ್, ಕಾಗದ, ಸಿಮೆಂಟ್ ಕಾರ್ಖಾನೆಗಳನ್ನು ಕೆಂಪು ವಿಭಾಗದಲ್ಲಿ ಸೇರಿಸಲಾಗಿದೆ. ಇಎಸ್‌ಎ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವುದು, ಹೊಸ ಥರ್ಮಲ್ ಪವರ್ ಯೋಜನೆಗಳ ಪ್ರಾರಂಭ, ಉಪನಗರಗಳ ಆರಂಭ, ಪ್ರದೇಶ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದನ್ನು ನಿಷೇಧಿಸಲಾಗುತ್ತದೆ. 2014ರಲ್ಲಿ ಪರಿಸರ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಗೆ ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳು ಆಕ್ಷೇಪಣೆ ಎತ್ತಿದ್ದವು. ಜುಲೈ ತಿಂಗಳಿನಲ್ಲಿ ಕೇರಳದಲ್ಲಿ ಸಂಭವಿಸಿದ ಭಾರೀ ಪ್ರವಾಹ ಸಮಸ್ಯೆಯ ಬಳಿಕ ಖ್ಯಾತ ಪರಿಸರವಾದಿ ಮಾಧವ ಗಾಡ್ಗೀಳ್ ಅವರು ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಧ್ವನಿ ಎತ್ತಿದ್ದರು. ಅರಣ್ಯನಾಶ, ಗಣಿಗಾರಿಕೆ, ಅರಣ್ಯಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣ ಮುಂತಾದ ಕಾರ್ಯಗಳು ನೆರೆ ಹಾವಳಿಗೆ ಮೂಲ ಕಾರಣಗಳು ಎಂದು ಗಾಡ್ಗೀಳ್ ಹೇಳಿದ್ದರು.

   ಕೇರಳ ಪ್ರವಾಹದ ಹಿನ್ನೆಲೆಯಲ್ಲಿ, ಇಎಸ್‌ಎ ಪ್ರದೇಶದ ವ್ಯಾಪ್ತಿಯನ್ನು ಕಿರಿದುಗೊಳಿಸಬಾರದು ಎಂದು ಸೆ.1ರಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ಪರಿಸರ ಸಚಿವಾಲಯಕ್ಕೆ ಸೂಚನೆ ನೀಡಿದೆ. ರಾಜ್ಯಗಳ ಪ್ರತಿಕ್ರಿಯೆ ಕೈಸೇರಿದ ಬಳಿಕ ಎನ್‌ಜಿಟಿಯನ್ನು ಸಂಪರ್ಕಿಸಲಾಗುವುದು ಎಂದು ಪರಿಸರ ಸಚಿವಾಲಯ ತಿಳಿಸಿದೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಶೇ.37ರಷ್ಟು ಪ್ರದೇಶವನ್ನು ಇಎಸ್‌ಎ ಎಂದು ಘೋಷಿಸಬೇಕೆಂದು ಶಿಫಾರಸು ಮಾಡಿತ್ತು. 2010ರಲ್ಲಿ ಗಾಡ್ಗೀಳ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಇದನ್ನು ವಿರೋಧಿಸಿದ್ದು, ಪಶ್ಚಿಮ ಘಟ್ಟದ ಶೇ.75ರಷ್ಟು ಪ್ರದೇಶವನ್ನು ಇಎಸ್‌ಎ ಎಂದು ಘೋಷಿಸಬೇಕೆಂದು ಸಲಹೆ ನೀಡಿತ್ತು. ಇಎಸ್‌ಎ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನ ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಬೇಕೆಂದು ಗಾಡ್ಗೀಳ್ ಸಮಿತಿ ಶಿಫಾರಸು ಮಾಡಿತ್ತು.

  ಇಎಸ್‌ಎ ಕುರಿತು ರಾಜ್ಯ ಸರಕಾರ ತನ್ನ ನಿಲುವನ್ನು ಬದಲಾಯಿಸುತ್ತದೆ ಎಂದು ನನಗನಿಸದು. 2014ರಲ್ಲಿ ರಾಜ್ಯ ಸರಕಾರ ಗಾಡ್ಗೀಳ್ ವರದಿಯನ್ನು ವಿರೋಧಿಸಿತ್ತು. ಆದರೆ ಕಳೆದ ತಿಂಗಳು ಕೇರಳದಲ್ಲಿ ಸಂಭವಿಸಿದ ನೆರೆಹಾವಳಿಯಿಂದ ವಯನಾಡ್ ಹಾಗೂ ಇಡುಕ್ಕಿ ನಗರಗಳಲ್ಲಿ ಸಂಭವಿಸಿರುವ ಭಾರೀ ವಿನಾಶವನ್ನು ಗಮನಿಸಿದರೆ, ಮಾಧವ ಗಾಡ್ಗೀಳ್ ಸಮಿತಿ ವರದಿ ಬಗ್ಗೆ ಮತ್ತೆ ಚರ್ಚೆ ನಡೆಯಬೇಕೆಂದು ನಾವು ಬಯಸುತ್ತೇವೆ ಎಂದು ಕೇರಳ ಮೂಲದ ಪರಿಸರವಾದಿ ಎನ್‌ಜಿಒ ಸಂಸ್ಥೆಯ ಆರ್.ಶ್ರೀಧರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News