ದಲಿತರಿಗೆ ನಿರ್ಣಾಯಕ ಹಂತದ ಹುದ್ದೆ ನೀಡುವಲ್ಲಿ ಎಲ್ಲಾ ಸರ್ಕಾರಗಳಿಂದ ದ್ರೋಹ: ಪ್ರೊ.ರವಿವರ್ಮ ಕುಮಾರ್

Update: 2018-09-30 14:55 GMT

ಮೈಸೂರು,ಸೆ.30: ದಲಿತರಿಗೆ ನಿರ್ಣಾಯಕ ಹಂತದ ಹುದ್ದೆಗಳನ್ನು ನೀಡುವಲ್ಲಿ ಎಲ್ಲಾ ಸರಕಾರಗಳು ದ್ರೋಹ ಮಾಡಿವೆ ಎಂದು ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಆರೋಪಿಸಿದರು.

ದಲಿತ ಸಂಘರ್ಷ ಸಮಿತಿ ವತಿಯಿಂದ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ರವಿವಾರ ಆಯೋಜಿಸಿದ್ದ “ದಲಿತ ಅಸ್ಮಿತೆ, ಅಭಿವ್ಯಕ್ತಿ, ದೌರ್ಜನ್ಯ, ಮೀಸಲಾತಿ-ಪ್ರಸ್ತುತ ಸವಾಲುಗಳು” ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಬಡ್ತಿ ಮೀಸಲಾತಿಯಲ್ಲಿ ಕೆನೆಪದರ ತತ್ವದಿಂದಾಗಿ ಅರ್ಹ ದಲಿತರನ್ನು ಹೊರಗಿಡುವ ಗಂಭೀರ ಲೋಪ ನಡೆದಿದೆ. ಎಸ್ಸಿ-ಎಸ್ಟಿ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ನೀಡುವಾಗ ಅವರ ಪೈಕಿ ಮುಂದುವರಿದವರನ್ನು ಹೊರಗಿಡುವ “ಕೆನೆಪದರ ತತ್ವ” ಸುಪ್ರೀಂ ಕೋರ್ಟ್‍ನ ತೀರ್ಪು ಲೋಪದಿಂದ ಕೂಡಿದೆ. ಇದು ಮೀಸಲಾತಿ ಉದ್ದೇಶವನ್ನೇ ಕಡೆಗಣಿಸಿದೆ. ಇದರಿಂದ ದಲಿತರು ಮೇಲ್ವರ್ಗದವರೊಂದಿಗೆ ಸ್ಪರ್ಧೆ ಮಾಡಲಾಗುವುದಿಲ್ಲ ಎಂದು ವಿಶ್ಲೇಷಿಸಿದರು.

60 ವರ್ಷ ಮೀಸಲಾತಿ ಸೌಲಭ್ಯ ಜಾರಿಯಲ್ಲಿದ್ದರೂ ದಲಿತರ ಪರಿಸ್ಥಿತಿ ಬದಲಾಗಿಲ್ಲ. ನಿರ್ಣಾಯಕ ಹಂತದ ಹುದ್ದೆಗಳನ್ನು ಏರಲು ಈಗಲೂ ಸಾಧ್ಯವಾಗಿಲ್ಲ. ರಾಜ್ಯದ ವಿವಿಧ ಇಲಾಖೆಗಳ ಮುಖ್ಯಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಹೆಚ್ಚುವರಿ ಕಾಯದರ್ಶಿ ಹುದ್ದೆಗಳಲ್ಲಿ ದಲಿತರಿಲ್ಲ. ಹೀಗಿರುವಾಗ ದಲಿತರ ಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ ಎಂಬ ಅಂಶವನ್ನು ಸುಪ್ರೀಂಕೋರ್ಟ್ ಗಮನಿಸಿಲ್ಲ. ಏಕೆಂದರೆ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳಲ್ಲಿ ಯಾರೂ ದಲಿತರು ಇರಿಲಿಲ್ಲ. ಹೀಗಾಗಿ ಈ ತೀರ್ಪಿನಲ್ಲಿ ದಲಿತ ಅಸ್ಮಿತೆ ಪ್ರದರ್ಶನವಾಗಲಿಲ್ಲ. ಜೊತೆಗೆ, ಉದ್ಯೋಗ, ಹಸಿವು ನಿವಾರಣೆಯೇ ಮೀಸಲಾತಿ ಉದ್ದೇಶವಲ್ಲ, ಎಲ್ಲಾ ಕ್ಷೇತ್ರದಲ್ಲೂ ದಲಿತರ ಪ್ರಾತಿನಿಧ್ಯ ಇರಬೇಕೆನ್ನುವುದು ಮೀಸಲಾತಿ ಆಶಯ. ಇದನ್ನು ಸುಪ್ರೀಂ ಕೋರ್ಟ್ ಕಡೆಗಣಿಸಿದೆ ಎಂದು ಹೇಳಿದರು.

ಬಡ್ತಿ ಮೀಸಲು, ವ್ಯಭಿಚಾರ ಅಪರಾಧವಲ್ಲ. ಶಬರಿಮಲೆಗೆ ಮಹಿಳೆಯ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇಂತಹ ಬಹಳಷ್ಟು ತೀರ್ಪುಗಳು ಶೀಘ್ರವೇ ಬರಲಿವೆ. ಈ ಪೈಕಿ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮೀಸಲಾತಿ ರದ್ದು ಪಡಿಸಬೇಕೆಂಬ ಅರ್ಜಿ ವಿಚಾರಣೆಯೂ ನಡೆಯುತ್ತಿದೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರ್ಕಾರವು ವಾದ ಮಂಡಿಸಲು ನ್ಯಾಯವಾದಿಯನ್ನೇ ನೇಮಿಸಿಲ್ಲ. ಇದು ಅದರ ಹುನ್ನಾರಕ್ಕೆ ಕೈಗನ್ನಡಿ ಎಂದು ಹೇಳಿದರು.

ದಲಿತರಲ್ಲಿ ಎಡಗೈ ಮತ್ತು ಬಲಗೈ ವಿಷಯದ ಸಮಸ್ಯೆಗೆ ಸಂವಿಧಾನ ತಿದ್ದುಪಡಿಯಿಂದಲೆ ಮಾತ್ರ ಪರಿಹಾರ ಸಾಧ್ಯ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಏನು ಮಾಡಲಾಗಲ್ಲ. ಆದರೆ, ಸಂಸತ್‍ನಲ್ಲಿ ಈ ಕುರಿತು ಚರ್ಚೆಯೇ ಆಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಸ್ವಚ್ಛ ಭಾರತ್ ಯೋಜನೆಗೆ ಗಾಂಧೀಜಿ ಭಾವಚಿತ್ರ ಬಳಸಿಕೊಳ್ಳಲಾಗಿದೆ. ಆದರೆ, ಕೇಂದ್ರ ಸರ್ಕಾರ ಬಜೆಟ್, ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಗಾಂಧಿ ಚಿಂತನೆ ಇಲ್ಲ. ಮನ್‍ಕೀ ಬಾತ್ ಕಾರ್ಯಕ್ರಮದಲ್ಲಿ ಮೋದಿ ಉತ್ಸಾಹ, ಉನ್ಮಾದದಿಂದ ಪ್ರಸ್ತುತ ಪಡಿಸುತ್ತಾರೆ. ಆದರೆ, ದಲಿತರ ವಿಚಾರವನ್ನು ಮಾತನಾಡಲ್ಲ ಎಂದು ಕಿಡಿಕಾರಿದರು.

ನಂತರ 'ದಲಿತ ಪದ ನಿಷೇಧ ಮತ್ತು ದೌರ್ಜನ್ಯ ತಡೆ ಕಾಯ್ದೆ ನ್ಯಾಯಾಲಯಗಳ ವ್ಯತಿರಿಕ್ತ ತೀರ್ಪು' ಕುರಿತು ಮಾತನಾಡಿದ ವಿಚಾರವಾದಿ ಡಾ.ಬಂಜಗೆರೆ ಜಯಪ್ರಕಾಶ್, ದಲಿತ ಪದ ಕುರಿತು ಬಿಜೆಪಿಗೆ ಅಸಹನೆ ಇದೆ. ಕೇಂದ್ರ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಈ ಪದವನ್ನು  ಬಳಕೆಗೆ ನಿರ್ಬಂಧಿಸಿದೆ ಎಂದರು.

ದಲಿತ ಎಂಬುದು ಜಾತಿ, ಇತಿಹಾಸದ ಮೂಲವಲ್ಲ. ಜಾತಿ ವ್ಯವಸ್ಥೆ ನಿರಾಕರಣೆ ಮಾಡಿ ಅದಕ್ಕೆ ಸವಾಲು ಹಾಕಿ ಸಮಾನತೆ ಪರ ಹೋರಾಟಕ್ಕೆ ನಾಂದಿ ಹಾಡಿದ ಸ್ವಾಭಿಮಾನದ ಪದ. ಶಬ್ದಕೋಶದಲ್ಲಿ ಈ ಪದ ಹಿಂದಯೂ ಇತ್ತು. ಇದು ಸ್ವಾಭಿಮಾನ ಮತ್ತು ಐಕ್ಯತೆಯ ರೂಪಕ. ಜಾತಿ ಅವಮಾನದ ಸೂಚಕ. ಆದರೆ, ದಲಿತರೆಂದರೆ ಅವಮಾನವಾಗಲ್ಲ. ಜತೆಗೆ, ಈ ಹೆಸರು ಬಂದರೆ ಡಾ.ಅಂಬೇಡ್ಕರ್ ಮುಂಚೂಣಿಗೆ ಬರುತ್ತಾರೆ. ದಲಿತ ಎಂದರೆ ಯಾರು ಬೇಕಾದರೂ, ಎಲ್ಲಾ ಜಾತಿಗಳನ್ನೂ ಸೇರಿಸಿಕೊಳ್ಳಬಹುದು. ಇದುವೇ ಸಂಘ ಪರಿವಾರಕ್ಕೆ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದ ಸದ್ದು ಅಡಗಿಸುವುದು ಬಿಜೆಪಿಯ ಮುಖ್ಯ ಉದ್ದೇಶ. 'ಸಂವಿಧಾನವನ್ನು ಬಸಲಿಸಲು ನಾವು ಬಂದಿದ್ದೇವೆ' ಎಂದು ಸಚಿವ ಅನಂತಕುಮಾರ್ ಹೆಗಡೆ ಬಾಯಲ್ಲಿ ಹೇಳಿಸಲಾಗುತ್ತಿದೆ. ಸಂವಿಧಾನದ ಪ್ರತಿ ಸುಡಲಾಗುತ್ತಿದೆ. ಈ ಕುರಿತು ದಲಿತರಿಂದ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂದು ತಿಳಿದುಕೊಳ್ಳಲು ಹೀಗೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದೊಂದೇ ಸ್ಯಾಂಪಲ್‍ಗಳನ್ನು ಹರಿಬಿಡಲಾಗುತ್ತಿದೆ. ದಲಿತರು ಈ ಹುನ್ನಾರವನ್ನು ಅರಿತು ಹೋರಾಟಕ್ಕೆ ಅಣಿಯಾಗಬೇಕು ಎಂದರು.

ಬಳಿಕ “ಸಾಮಾಜಿಕ ಹೋರಾಟಗಾರರ ಬಂಧನ: ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ' ಕುರಿತು ಮಾತನಾಡಿದ ದಸಂಸ ಹಿರಿಯ ಹೋರಾಟಗಾರ ಇಂದೂಧರ ಹೊನ್ನಾಪುರ, ಯಾವ ಭರವಸೆಗಳೂ ಈಡೇರದ ಕಾರಣಕ್ಕೆ ಕೇಂದ್ರ ಸರ್ಕಾರ ವಿರುದ್ಧ ಜನರು ಭ್ರಮನಿರಸನಗೊಂಡಿದ್ದಾರೆ. ಇದರಿಂದ ಅದು ಹತಾಶಗೊಂಡಿದೆ. ಜನಮನಸ್ಸಿನ ದಿಕ್ಕು ಬದಲಿಸಲು ನಗರ ನಕ್ಸಲ್ ಹೆಸರಿನಲ್ಲಿ ಪ್ರಗತಿಪರ ಹೋರಾಟಗಾರರನ್ನು ಬಂಧಿಸಿದೆ ಎಂದರು.

'ಬಡ್ತಿ ಮೀಸಲಾತಿ ಆಡಳಿತಾತ್ಮಕ ವೈಫಲ್ಯ: ಸಾಮಾಜಿಕ ನ್ಯಾಯದ ನಿರಾಕರಣೆ' ಕುರಿತು ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಮುಖಂಡರಾದ ಪ್ರೊ.ಎಚ್.ಎಂ.ರುದ್ರಸ್ವಾಮಿ, ಎಚ್.ಸಿ.ಸಿದ್ದಲಿಂಗಯ್ಯ, ಮರಿಯಪ್ಪ ಹಳ್ಳಿ, ಮಲ್ಲಹಳ್ಳಿ ನಾರಾಯಣ, ಆಲಗೋಡು ಶಿವಕುಮಾರ್ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News