ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ ಫಿನ್ ಲ್ಯಾಂಡ್ ರಾಯಭಾರಿ

Update: 2018-10-04 13:45 GMT

ಬೆಂಗಳೂರು, ಅ.4: ಫಿನ್ ಲ್ಯಾಂಡ್ ರಾಯಭಾರಿಗಳಾದ ನೀನಾ ವಾಸ್ಕುನ್ಲಾಹತಿ ಅವರು ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.

ಕಳೆದ ಸಾಲಿನಲ್ಲಿ ಫಿನ್ ಲ್ಯಾಂಡ್ ಮತ್ತು ಕರ್ನಾಟಕದ ಮಧ್ಯೆ ಆಗಿದ್ದ ಒಪ್ಪಂದದಿಂದ ಸಾಕಷ್ಟು ಪ್ರಗತಿಯಾಗಿದ್ದು, ಈ ಒಪ್ಪಂದವನ್ನು ಕೈಗಾರಿಕೆ, ಶಿಕ್ಷಣ ಮತ್ತು ಇಂಧನ ಕ್ಷೇತ್ರಗಳನ್ನು ಒಳಗೊಂಡಂತೆ ಮತ್ತಷ್ಟು ವಿಸ್ತೃತಗೊಳಿಸಿ ಮುಂದುವರೆಸಲು ಫಿನ್ ಲ್ಯಾಂಡ್ ಉತ್ಸುಕವಾಗಿದೆ ಎಂದು ನೀನಾ ವಾಸ್ಕುನ್ಲಾಹತಿ ತಿಳಿಸಿದರು. ನವೆಂಬರ್ ನಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಫಿನ್ ಲ್ಯಾಂಡ್ ನ ವ್ಯವಹಾರ ಮತ್ತು ಅಂತರರಾಷ್ಟ್ರೀಯ ಸಹಕಾರ ಸಚಿವರು ಭಾಗವಹಿಸಲಿದ್ದಾರೆ ಎಂದರು.

ಬೆಂಗಳೂರಿನಲ್ಲಿ 5ಜಿ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿರುವ ಫಿನ್ ಲ್ಯಾಂಡ್ ನ ನೋಕಿಯಾ ಕಂಪನಿ, ಸ್ಟಾರ್ಟ್ಅಪ್ ಗಳಿಗೆ ಹೊಸ ತಂತ್ರಜ್ಞಾನದ ನೆರವು ಮತ್ತು ತರಬೇತಿಯನ್ನು ನೀಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. 

ಕರ್ನಾಟಕದೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಇತರೆ ಕ್ಷೇತ್ರಗಳಿಗೂ ವಿಸ್ತರಿಸಲು ಫಿನ್ ಲ್ಯಾಂಡ್ ತೋರಿಸಿರುವ ಆಸಕ್ತಿಯನ್ನು ಸ್ವಾಗತಿಸಿದ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಕರ್ನಾಟಕ ಸರ್ಕಾರ ಸಿದ್ಧವಿದೆ ಎಂದರು. ಈ ನಡೆ ಎರಡೂ ಪ್ರಾಂತ್ಯಗಳ ನಡುವಿನ ಸಾಮರಸ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಕಾರ್ಯದರ್ಶಿ ಡಾ. ಸೆಲ್ವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News