ಹರ್ಯಾಣ: ಬಿಜೆಪಿ ಬಂಡಾಯ ಸಂಸದನ ಕಾರಿನ ಮೇಲೆ ದಾಳಿ
Update: 2018-10-04 14:47 GMT
ಚಂಡಿಗಡ,ಅ.4: ಕುರುಕ್ಷೇತ್ರದ ಬಂಡುಕೋರ ಬಿಜೆಪಿ ಸಂಸದ ರಾಜಕುಮಾರ ಸೈನಿ ಅವರು ಬುಧವಾರ ಸಂಜೆ ಪಲ್ವಾಲ್ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಕಾರನ್ನು ತಡೆಗಟ್ಟಿದ ಗುಂಪೊಂದು ದಾಳಿ ನಡೆಸಿದ್ದು,ಸಂಸದರು ಮತ್ತು ಅವರ ಜೊತೆಯಲ್ಲಿದ್ದವರು ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದರು.
ಕಾರಿನ ಸೈಡ್ ಮಿರರ್ಗೆ ಹಾನಿಯಾಗಿದೆ. ಸಂಸದರ ಬೆಂಗಾವಲಿಗಿದ್ದ ಪೊಲೀಸರು ಅವರನ್ನು ಸುರಕ್ಷಿತವಾಗಿ ಸಾಗಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 30ಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪಲ್ವಾಲ್ ಎಸ್ಪಿ ವಾಸೀಂ ಅಕ್ರಂ ತಿಳಿಸಿದರು.
ಕಾರಿನತ್ತ ಸಣ್ಣ ಕಲ್ಲುಗಳನ್ನು ತೂರಲಾಗಿತ್ತು.ದಾಳಿಯು ಪೂರ್ವಯೋಜಿತ ವಾಗಿರುವಂತಿದೆ ಎಂದು ಸೈನಿಯವರ ಸಹಾಯಕರೋರ್ವರು ತಿಳಿಸಿದರು.
ತಿಂಗಳ ಹಿಂದೆ ಹೊಸ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ್ದ ಸೈನಿ,ತನ್ನ ಪಕ್ಷವು ಮುಂದಿನ ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದ್ದರು.