ಕೊಳ್ಳೇಗಾಲ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಕೊಳ್ಳೇಗಾಲ,ಅ.9: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಮಧುನವಹಳ್ಳಿ ಗ್ರಾಮದ ಮಾದಶೆಟ್ಟಿ ಮಗ ಕೆಂಪೀರಶೆಟ್ಟಿ (55) ಬಂಧಿತ ಆರೋಪಿ. ಆರೋಪಿಯಿಂದ 1 ಲಕ್ಷ ಮೌಲ್ಯದ 3.3 ಕೆಜಿ ಒಣಗಿದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ತನ್ನ ಮನೆಯಲ್ಲಿ ಅಕ್ರಮವಾಗಿ ಒಣಗಿದ್ದ ಗಾಂಜಾವನ್ನು ಇಟ್ಟಿರುವುದಾಗಿ ಬಂದ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತ ಮಾದೇಶ್, ಉಪ ಆಯುಕ್ತ ಎ.ಎಲ್.ನಾಗೇಶ್ ಹಾಗೂ ಅಬಕಾರಿ ಅಧೀಕ್ಷಕ ನಾಗೇಶ್ಕುಮಾರ್.ಡಿ.ರವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಗಂಗಾಧ್ ಹೆಚ್.ಮುದೆಣ್ಣವರ್ ಹಾಗೂ ನಿರೀಕ್ಷಕರಾದ ಎ.ಎ.ಮುಜಾರ, ಕೆ.ವಿ.ಲೋಹಿತ್ ಹಾಗೂ ತಂಡದೊಂದಿಗೆ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿಯಲ್ಲಿ ಅಬಕಾರಿ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಪ್ರದೀಪ್, ರಮೇಶ್, ವಾಹನ ಚಾಲಕರಾದ ವೀರತಪ್ಪ, ಮಹೇಶ್, ಆನಂದ್, ನವೀನ್, ಮೋಹನ್ ಇದ್ದರು.