ಶಿವಮೊಗ್ಗ: ವ್ಯಕ್ತಿಯ ಹತ್ಯೆ ಪ್ರಕರಣ; ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

Update: 2018-10-10 12:00 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಅ. 10: ಪತಿಯ ಹತ್ಯೆ ನಡೆಸಿದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಇಲ್ಲಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. 

ತೀರ್ಥಹಳ್ಳಿ ತಾಲೂಕಿನ ಯೋಗಿಮಳಲಿ ಗ್ರಾಮದ ಸುನೀತಾ ಹಾಗೂ ಪ್ರಿಯಕರ ಮಂಜುನಾಥ್ ಶಿಕ್ಷೆಗೊಳಗಾದವರೆಂದು ಗುರುತಿಸಲಾಗಿದೆ. ಚಂದ್ರಶೇಖರ ಕೊಲೆಗೀಡಾದ ಪತಿ ಎಂದು ಗುರುತಿಸಲಾಗಿದೆ. ವಿಚಾರಣೆಯ ವೇಳೆ ಆಪಾದಿತರ ವಿರುದ್ಧದ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಎ. ಹರೀಶ್‍ರವರು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 

ಘಟನೆ ಹಿನ್ನೆಲೆ: 2014 ನೇ ಸೆಪ್ಟೆಂಬರ್ ನಲ್ಲಿ ಪ್ರಿಯಕರ ಮಂಜುನಾಥ್ ಜೊತೆ ಸೇರಿಕೊಂಡ ಸುನೀತಾ, ಪತಿ ಚಂದ್ರಶೇಖರ್ ಕೊಲೆ ಮಾಡಿ ಶವವನ್ನು ಮನೆಯ ಹಿಂಭಾಗದಲ್ಲಿರುವ ಜಮೀನಿನಲ್ಲಿ ಹೂತು ಹಾಕಿದ್ದರು. 

ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇವರಿಬ್ಬರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಜೊತೆಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಕೂಡ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜೆ. ಶಾಂತರಾಜ್ ಅವರು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News