ವ್ಯಸನಮುಕ್ತ ಸಮಾಜದಿಂದ ಮಾತ್ರ ನೆಮ್ಮದಿಯ ಬದುಕು: ನ್ಯಾ.ಈಶಪ್ಪಭೂತೆ

Update: 2018-10-10 16:33 GMT

ಧಾರವಾಡ, ಅ.10: ನಿತ್ಯ ಜೀವನದಲ್ಲಿ ಎದುರಾಗುವ ಸಮಸ್ಯೆಗಳ ಸುಳಿಯಿಂದ ಪಾರಾಗಲು ಅನೇಕರು ದುಶ್ಚಟಗಳ ಬೆನ್ನುಬಿದ್ದು, ವ್ಯಸನಿಗಳಾಗುತ್ತಾರೆ. ಇದರಿಂದಾಗಿ ತಮ್ಮ ಮಾನಸಿಕ ಆರೋಗ್ಯ ಮತ್ತು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ. ವ್ಯಸನಮುಕ್ತ ಸಮಾಜ ರೂಪಿಸಲು ಪ್ರತಿ ಕ್ಷೇತ್ರದ ತಜ್ಞರು ಕೈಜೋಡಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಈಶಪ್ಪಭೂತೆ ಕರೆ ನೀಡಿದ್ದಾರೆ.

ಬುಧವಾರ ನಗರದ ಡಿಮ್ಯಾನ್ಸ್ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹಳಷ್ಟು ಜನರು ಬದುಕಿನಲ್ಲಿ ಎದುರಾಗುವ ಸಮಸ್ಯೆಗಳ ನೆಪವೊಡ್ಡಿ, ಪರಿಹಾರ ಕಾಣದೆ ತಾತ್ಕಾಲಿಕ ಬಿಡುವಿಗಾಗಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳ ಮೊರೆ ಹೋಗುತ್ತಾರೆ. ಇದರಿಂದ ಅವರ ಜೀವನವೇ ಹಾಳಾಗುತ್ತದೆ. ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿ ಕುಟುಂಬ ಮತ್ತು ಸಮಾಜದ ನೆಮ್ಮದಿಗೆ ಭಂಗ ತರುತ್ತಾರೆ ಎಂದು ಅವರು ಹೇಳಿದರು.

ಇಂದಿನ ಯುವಕರು ವ್ಯಸನಗಳಿಂದಾಗಿ ತಮ್ಮ ಕರ್ತವ್ಯ ಮರೆಯುತ್ತಿದ್ದಾರೆ. ಅವರಿಗೆ ಉತ್ತಮ ಮಾರ್ಗದರ್ಶನ, ಆಪ್ತಸಮಾಲೋಚನೆಯ ಅಗತ್ಯವಿದೆ. ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರಗಳು ಯುವಕರ ವ್ಯಕ್ತಿತ್ವದಲ್ಲಿ ಮೂಡಿ ಬರುವಂತೆ ಜಾಗೃತಿ ವಹಿಸಬೇಕು. ಸದಾಕಾಲ ಸಕಾರಾತ್ಮಕ ಚಿಂತನೆ ಮಾಡುವಂತೆ ಯುವ ಸಮೂಹವನ್ನು ಬೆಳೆಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ವ್ಯಕ್ತಿಗಳ ಮಾನಸಿಕ ಅಸ್ವಸ್ಥತೆ, ಖಿನ್ನತೆ, ಅನಾರೋಗ್ಯಗಳಿಂದಾಗಿ ಅಭಿವೃದ್ಧಿಯೂ ಕುಂಠಿತವಾಗುತ್ತದೆ. ಇದರಿಂದಾಗಿ ಸಮಯ, ಸಂಪನ್ಮೂಲಗಳೂ ವ್ಯರ್ಥವಾಗುತ್ತವೆ. ಆದುದರಿಂದ, ಶಾಲಾ ಹಂತದಿಂದಲೇ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಸದೃಢತೆ ಬೆಳೆದು ಬರುವಂತೆ ನೀತಿಪಾಠ ರೂಢಿಸಬೇಕು. ಈ ನಿಟ್ಟಿನಲ್ಲಿ ಪಾಲಕರ, ಶಿಕ್ಷಕರ, ಸಮಾಜ ಮತ್ತು ವೈದ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಈಶಪ್ಪ ಭೂತೆ ಹೇಳಿದರು.

ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಗಿರಿಧರ ಕುಕನೂರ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಧಾರವಾಡ ಘಟಕದ ಅಧ್ಯಕ್ಷ ಡಾ.ವಿ.ಡಿ. ಕರ್ಪೂರಮಠ, ಮಾನಸಿಕ ಆರೋಗ್ಯ ಜಿಲ್ಲಾ ಕಾರ್ಯಾಕ್ರಮ ಅಧಿಕಾರಿ ಡಾ.ಶಶಿ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಮಾನಸಿಕ ಆರೋಗ್ಯ ತಜ್ಞ ಡಾ.ಶಿವಶಂಕರ ಪೋಳ ವೇದಿಕೆಯಲ್ಲಿದ್ದರು.

ವಿಶ್ವಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧಾವಿಜೇತ ಶಾಲಾಮಕ್ಕಳಿಗೆ ಜಿಲ್ಲಾ ನ್ಯಾಯಾಧೀಶರು ಬಹುಮಾನ ವಿತರಿಸಿದರು. ಪ್ರಸಕ್ತ ಸಾಲಿನ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಘೋಷ ವಾಕ್ಯವಾಗಿರುವ ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ ಮತ್ತು ಯುವಜನಾಂಗ ಕುರಿತು ವಿವಿಧ ಆರೋಗ್ಯ ತಜ್ಞ ವೈದ್ಯರು ವಿಶೇಷ ಉಪನ್ಯಾಸ ನೀಡಿದರು. ಡಿಮ್ಯಾನ್ಸ್ ನಿರ್ದೇಶಕ ಡಾ.ಮಹೇಶ ದೇಸಾಯಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News