ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಮನುಷ್ಯ ನಿರ್ಮಿತವಲ್ಲ: ವಿಜ್ಞಾನಿ ಐಚೆಟ್ಟೀರ ಮಾಚಯ್ಯ

Update: 2018-10-13 12:34 GMT

ಮಡಿಕೇರಿ, ಅ.13: ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ವಿಕೋಪ ಮನುಷ್ಯ ನಿರ್ಮಿತವೆನ್ನುವುದು ತಪ್ಪು. ಇದು ನೂರಾರು ವರ್ಷಗಳಿಗೊಮ್ಮೆ ಸಂಭವಿಸುವ ಪ್ರಾಕೃತಿಕ ವಿಕೋಪವೆಂದು ನ್ಯೂಜಿಲೆಂಡ್‍ನಲ್ಲಿರುವ ಜಿಲ್ಲೆಯವರೇ ಆದ ಭೂ ವಿಜ್ಞಾನಿ ಐಚೆಟ್ಟೀರ ಮಾಚಯ್ಯ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ನಗರದ ಬಾಲಭವನದ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆಯಿಂದ ಆಯೋಜಿತ ‘ಪ್ರಾಕೃತಿಕ ವಿಕೋಪದ ವಾಸ್ತವಗಳು-ಮುಂದಿನ ಹೆಜ್ಜೆಗಳು’ ವಿಷಯದ ಕುರಿತ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂಗಾರಿನ ಅವಧಿಯಲ್ಲಿ ಸುರಿದ ಮಳೆಗೆ ಪುಷ್ಪಗಿರಿ ತಪ್ಪಲಿನಲ್ಲಿ ಸಂಭವಿಸಿರುವ ಗುಡ್ಡ ಕುಸಿತದಂತಹ ವಿಕೋಪದಲ್ಲಿ ಒಂದು ಸಣ್ಣ ಪಾಲು ಮನುಷ್ಯನ ಸ್ವಯಂಕೃತ ಅಪರಾಧಗಳಿಂದ ಸಂಭವಿಸಿರಬಹುದಾದರು, ಒಟ್ಟಾಗಿ ಇದೊಂದು ಪ್ರಾಕೃತಿಕ ವಿಕೋಪವೆಂದು ಸ್ಪಷ್ಟಪಡಿಸಿದರು.

ಮುನ್ನೆಚ್ಚರಿಕೆ ಕ್ರಮ ನಡೆಯಬೇಕಿತ್ತು: ಜಿಲ್ಲೆಯ ಬ್ರಹ್ಮಗಿರಿ ತಪ್ಪಲಿನಲ್ಲಿ ವಾರ್ಷಿಕ ಸರಾಸರಿ 300 ಇಂಚು ಮಳೆಯಾಗುವುದು ಸಾಮಾನ್ಯವಾಗಿರುವುದರಿಂದ ಆ ವ್ಯಾಪ್ತಿಯಲ್ಲಿನ ಭೂಮಿ ಸ್ಥಿರತೆಯನ್ನು ಪಡೆದುಕೊಂಡಿದ್ದು, ಕಾವೇರಿ ನದಿಯೂ ತನ್ನ ಹರಿವಿನ ಸ್ಪಷ್ಟ ಹಾದಿಯನ್ನು ಕಂಡು ಕೊಂಡಿದೆ. ಆದರೆ, ಪುಷ್ಪಗಿರಿ ತಪ್ಪಲಿನ ಎಲ್ಲ ಭಾಗಗಳಲ್ಲಿ ಈ ಬಾರಿ ಸರಾಸರಿಯನ್ನು ಮೀರಿ 300 ಇಂಚಿನಷ್ಟು ಮಳೆ ಸುರಿದಿರುವುದು ಪ್ರಾಕೃತಿಕ ವಿಕೋಪಕ್ಕೆ ಪ್ರಮುಖ ಕಾರಣವೆಂದು ಸ್ಪಷ್ಟಪಡಿಸಿದರು.

ಮುಂಗಾರಿನ ಅವಧಿಯಲ್ಲಿ ಇಂತಹ ಭಾರೀ ಮಳೆಯಾದ ಸಂದರ್ಭ ಆಡಳಿತ ವ್ಯವಸ್ಥೆ ಸಂಭವನೀಯ ಅಪಾಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲವೆಂದು ಅಭಿಪ್ರಾಯಿಸಿ, ಇಂತಹ ವಿಕೋಪಗಳ ಬಗ್ಗೆ ತಜ್ಞರ ತಂಡದ ಸಲಹೆಯನ್ನು ಪಡೆದು ಮುಂಜಾಗ್ರತೆ ವಹಿಸುವುದು ಅವಶ್ಯವಿತ್ತೆಂದು ತಿಳಿಸಿದರು.

ಮತ್ತೆ ಗುಡ್ಡ ಕುಸಿತದ ಸಂಭಾವ್ಯತೆ: ಪ್ರಸಕ್ತ ಸಾಲಿನಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ ಮುಂದಿನ ಸಾಲಿನಲ್ಲಿ ಸಾಧಾರಣ ವಾರ್ಷಿಕ 150 ರಷ್ಟು ಮಳೆಯಾದರು, ಒಂದಷ್ಟು ಗುಡ್ಡ ಕುಸಿತ, ಮಣ್ಣು ಕೊಚ್ಚಿ ಹೋಗುವ ಪ್ರಕ್ರಿಯೆಗಳು ನಡೆಯುವ ಸಾಧ್ಯತೆಗಳು ಇರುತ್ತದೆಂದು ಐಚೆಟ್ಟೀರ ಮಾಚಯ್ಯ ತಿಳಿಸಿದರು.

ಅರ್ಥರಹಿತ ವಾದ: ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪ ಮರಗಳ ಕಡಿತದಿಂದ, ಪ್ರವಾಸೋದ್ಯಮದಿಂದ ಉಂಟಾಗಿದೆ ಎನ್ನುವುದು ಅರ್ಥರಹಿತ ವಾದವೆಂದು ದೃಢವಾಗಿ ನುಡಿದ ಅವರು, ಪ್ರವಾಸೋದ್ಯಮವೆನ್ನುವುದು ಎಲ್ಲಾ ಕಡೆಯೂ ನಡೆಯುತ್ತಿದೆ. ಹೀಗಿರುವಾದ ಗುಡ್ಡ ಕುಸಿತದಂತಹ ವಿಕೋಪ ಕೇವಲ ಒಂದು ಭಾಗಗಕ್ಕಷ್ಟೆ ಯಾಕೆ ಸೀಮಿತವಾಯಿತೆಂದು ಪ್ರಶ್ನಿಸಿದರು.

ಪರಿಸರವನ್ನು ಸುಸ್ಥಿತಿಯಲ್ಲಿಡಲು ಅರಣ್ಯ ಸಂಪತ್ತು ಅವಶ್ಯಕತೆ  ಇದೆ. ಆದರೆ, ಕೇವಲ ಮರಗಳನ್ನು ಕಡಿಯುವುದರಿಂದ, ಹೈಟೆನ್ಶನ್ ಮಾರ್ಗ ನಿರ್ಮಾಣದಿಂದ ವಿಕೋಪ ಸಂಭವಿಸಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮಾರ್ಗಗಳು ಬೇಡವೆನ್ನುವುದರಲ್ಲಿ ಅರ್ಥವಿಲ್ಲ. ಮೊಟ್ಟಮೊದಲು ನಾವು ಅಭಿವೃದ್ಧಿಯನ್ನು ಕಂಡು ಕೊಳ್ಳುವುದು ಅವಶ್ಯ. ಯಾರು ಅಭಿವೃದ್ಧಿ ಬೇಡವೆನ್ನುತ್ತಾರೋ ಅವರು ‘ಕಾಡು ಜನರಂತೆ’ ಶಾಂತಿಯಿಂದ ಇರಬಹುದು ಎಂದು ಮಾರ್ಮಿಕವಾಗಿ ನುಡಿದು, ಅಷ್ಟರಲ್ಲೆ ಆ ಕಾಡು ಜನರು ಅಭಿವೃದ್ಧಿ ಹೊಂದಿರುತ್ತಾರೆಂದು ಅರ್ಥಗರ್ಭಿತವಾಗಿ ನುಡಿದರು.

ಅಸಮರ್ಪಕ ವಾದ: ಮರಗಳನ್ನು ಕಡಿಯುವುದನ್ನು ವಿರೋಧಿಸುವ ಮಂದಿ ಅದರಿಂದ ಮಾತ್ರ ಆಮ್ಲಜನಕ ಉತ್ಪತ್ತಿಯಾಗುತ್ತದೆಂದು ಬಿಂಬಿಸುತ್ತಾರೆ ಮತ್ತು ಮಳೆಯ ಪ್ರಮಾಣ ಕುಂಠಿತಗೊಳ್ಳುತ್ತದೆಂದು ವಾದಿಸುತ್ತಾರೆ. ಆದರೆ, ನಮ್ಮ ಪರಿಸರಕ್ಕೆ ಶೇ.70 ರಷ್ಟು ಆಮ್ಲಜನಕ ಸಮುದ್ರದಲ್ಲಿರುವ ಮೈಕ್ರೋಸ್ಕೋಪಿಕ್ ಪ್ಲಾಂಕ್ಟನ್ಸ್ ಮೂಲಕ ಆಮ್ಲಜನಕ ದೊರಕುತ್ತದಾದರೆ, ಶೇ.28 ರಷ್ಟು ಮರಗಳಿಂದ ದೊರಕುತ್ತದೆಂದು ವಿವರಗಳನ್ನು ನೀಡಿ, ಕೊಡಗಿನಲ್ಲಿ ಕಳೆದ 150 ವರ್ಷಗಳಲ್ಲಿ ಕಾಫಿ ತೋಟ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆಗಾಗಿ ಮರಗಳನ್ನು ತೆಗೆಯಲಾಗಿದ್ದರೂ ಮಳೆಯ ಪ್ರಮಾಣವನ್ನು ಗಮನಿಸಿದಲ್ಲಿ ಬಹುದೊಡ್ಡ ವ್ಯತ್ಯಾಸಗಳು ಕಾಣಲಾರದು. ಒಂದೆರಡು ವರ್ಷ ಮಳೆ ಕಡಿಮೆಯಾದರೆ, ಮತ್ತೆ ಜಾಸ್ತಿ ಹೀಗೆ ಸರಾಸರಿ ಮಳೆಯನ್ನು ಕಾಣುತ್ತಿದ್ದೇವೆಂದು ವಿವರಿಸಿದರು.

ಹೆದರಿಸುವ ಪ್ರಯತ್ನ: ಕೊಡಗಿನಲ್ಲಿ ಕಾವೇರಿ ಹುಟ್ಟಿ ಹರಿಯುತ್ತಿರುವ ಹಿನ್ನೆಲೆಯಲ್ಲಿ, ಈ ನದಿಯ ಸಂರಕ್ಷಣೆಯ ನಿಟ್ಟಿನಲ್ಲಿ, ಜನರಲ್ಲಿ ಮರಗಳ ಹನನದಿಂದ ಪ್ರಾಕೃತಿಕ ವಿಕೋಪ, ಮಳೆಯಲ್ಲಿ ಏರುಪೇರಾಗುತ್ತದೆ ಮೊದಲಾದ ವಾದಗಳನ್ನು ಮಂಡಿಸಿ ಹೆದರಿಸುವ ಪ್ರಯತ್ನ ನಡೆಯುತ್ತಿದೆಯಷ್ಟೆ ಎಂದು ಐಚೆಟ್ಟೀರ ಮಾಚಯ್ಯ ಅನಿಸಿಕೆ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ, ಕೊಡಗಿನ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾದವರು ಮಾಡಿರುವ ವರದಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮಾನವನ ಹಸ್ತಕ್ಷೇಪ, ಹೈಟೆನ್ಶನ್ ಮಾರ್ಗ ನಿರ್ಮಾಣ, ಮರಗಳನ್ನು ಕಡಿಯುವುದರಿಂದ ಪ್ರಾಕೃತಿಕ ವಿಕೋಪ ಸಂಭವಿಸಿದೆ ಎನ್ನುವುದು ವೈಜ್ಞಾನಿಕ ತಳಹದಿಯದಲ್ಲ. ಇದನ್ನು ಅರಿತವರು ಮೌನವಾಗಿರುವುದೆ ಸಮಸ್ಯೆಯಾಗಿದೆ. ಆದರು, ಅರ್ಧ ಸತ್ಯವನ್ನು ಪ್ರತಿಪಾದಿಸುವವರ ವಿರುದ್ಧ ತಾತ್ತ್ವಿಕ ವಿರೋಧವನ್ನು ನಾವು ವ್ಯಕ್ತಪಡಿಸಿಕೊಂಡು ಬಂದಿರುವುದಾಗಿ ತಿಳಿಸಿದರು.

ಜಿಪಂ ಮಾಜಿ ಸದಸ್ಯ ವಿ.ಪಿ. ಶಶಿಧರ್ ಸಂವಾದಕ್ಕೆ ಚಾಲನೆ ನೀಡಿದರು. ಇದರಲ್ಲಿ ಹಿರಿಯ ಚಿಂತನ, ಮಾಜಿ ಎಂಎಲ್‍ಸಿ ಎ.ಕೆ. ಸುಬ್ಬಯ್ಯ ಸೇರಿದಂತೆ ಹಲ ಪ್ರಮುಖರು ಪಾಲ್ಗೊಂಡಿದ್ದರು. ವೇದಿಕೆಯ ಪ್ರಮುಖರಾದ ಬಿ.ಎನ್.ಮನು ಶೆಣೈ ಸ್ವಾಗತಿಸಿ, ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News