ಹೀಗೊಂದು ಸಂವಿಧಾನದ ಸರಳ ಓದು....

Update: 2018-10-15 18:33 GMT

ದೇಶದ ಸಂವಿಧಾನ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ದಿನಗಳು ಇವು. ಸಂವಿಧಾನ ಪರ ಮತ್ತು ವಿರೋಧ ಧ್ವನಿಗಳಾಗಿ ದೇಶ ಒಡೆಯುತ್ತಿದೆ. ಸಂವಿಧಾನದ ಹಕ್ಕುಗಳನ್ನು ಬಳಸಿಕೊಂಡೇ ಸಂವಿಧಾನ ವಿರೋಧಿ ನಿಲುವುಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಂವಿಧಾನಪರವಾಗಿರುವ ಜನರು ಹೆಚ್ಚು ಹೆಚ್ಚು ಜಾಗೃತರಾಗಬೇಕಾಗಿದೆ. ಸಂವಿಧಾನವನ್ನು ಉಳಿಸಲು ಬೀದಿಗಿಳಿಯಬೇಕಾಗಿದೆ. ಸಂವಿಧಾನ ಉಳಿದರೆ, ನಮ್ಮ ಉಳಿವು ಎನ್ನುವುದನ್ನು ಶ್ರೀಸಾಮಾನ್ಯರಿಗೆ ಅರ್ಥೈಸಬೇಕಾಗಿದೆ. ಆದರೆ ಇದೇ ಸಂದರ್ಭದಲ್ಲಿ, ಸಂವಿಧಾನ ಪರವಾಗಿ ಧ್ವನಿಯೆತ್ತುತ್ತಿರುವವರಿಗೂ ನಮ್ಮ ಸಂವಿಧಾನದ ಒಳಗೆ ಏನಿದೆ ಎನ್ನುವುದರ ಸ್ಪಷ್ಟ ಅರಿವಿಲ್ಲ. ಸಂವಿಧಾನ ಆಶಯಗಳ ಕುರಿತಂತೆ ಸರಳವಾಗಿ ಮಾತನಾಡುತ್ತೇವೆಯೇ ಹೊರತು, ಸಂವಿಧಾನವನ್ನು ವಿವರವಾಗಿ ಓದುವುದು, ತಿಳಿದುಕೊಳ್ಳುವುದು ನಮ್ಮ ಕೆಲಸವಲ್ಲ, ಅದು ನ್ಯಾಯಾಲಯದ ಕೆಲಸ ಮತ್ತು ಕಾನೂನು ವಿದ್ಯಾರ್ಥಿಗಳ ಕೆಲಸ ಎಂದು ನಂಬಿದ ದೊಡ್ಡ ವರ್ಗವಿದೆ. ವಿದ್ಯಾರ್ಥಿಯಾಗಿ ಸಂವಿಧಾನದ ಕುರಿತಂತೆ ಪ್ರಾಥಮಿಕ ವಿಷಯಗಳನ್ನು ಕಲಿಯುತ್ತೇವಾದರೂ, ಸಂವಿಧಾನದ ಕುರಿತ ಆಸಕ್ತಿಯಿಂದಲ್ಲ, ಬದಲಿಗೆ, ಅಂಕಗಳನ್ನು ಪಡೆಯುವ ಉದ್ದೇಶದಿಂದ. ಇಂದು ಸಂವಿಧಾನ ಹೇಳುವ ಸರಳ ವಿಷಯಗಳನ್ನು ಯುವಜನರಿಗೆ ತಲುಪಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸಹಯಾನ ಮತ್ತು ಸಮುದಾಯ ಹೊರತಂದಿರುವ ‘ಸಂವಿಧಾನ ಓದು-ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ’ ಒಂದು ಒಳ್ಳೆಯ ಪ್ರಯತ್ನ ವಾಗಿದೆ. ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ ಅವರು ಈ ಕೈಪಿಡಿಯನ್ನು ರಚಿಸಿದ್ದಾರೆ.
  ನಮ್ಮ ದೇಶದ ಸಂವಿಧಾನದ ಅರ್ಥ, ಅದು ರಚನೆಯಾದ ಬಗೆ, ಸಂವಿಧಾನದ ಅಗತ್ಯತೆ, ಅದರ ಸಾಮರ್ಥ್ಯ, ಸಾಧ್ಯತೆ ನಮ್ಮ ಕರ್ತವ್ಯ, ಹಾಗೂ ಸಂವಿಧಾನವು ಎದುರಿಸುತ್ತಿರುವ ಸವಾಲುಗಳ ಕುರಿತು ಸರಳ ಭಾಷೆಯಲ್ಲಿ ಈ ಕೈ ಪಿಡಿಯಲ್ಲಿ ವಿವರಿಸಲಾಗಿದೆ. ಈ ಪುಸ್ತಕದಲ್ಲಿ ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತೆಗಳ ಬಗ್ಗೆ ಯಾವುದೇ ಗೊಂದಲವಿಲ್ಲದ ಸ್ಪಷ್ಟ ವ್ಯಾಖ್ಯಾನವಿದೆ. ಅಪವ್ಯಾಖ್ಯಾನಗಳಿಂದ ಹಾದಿ ತಪ್ಪಿಸುವ ತಜ್ಞತಂಡಕ್ಕೆ ತಕ್ಕ ಉತ್ತರವೆಂಬಂತೆ ಈ ವ್ಯಾಖ್ಯಾನ ಮೂಡಿ ಬಂದಿದೆ. ಸಂವಿಧಾನದ ಆಶಯಗಳ ಅನಾವರಣ ಮತ್ತು ವಿಶ್ಲೇಷಣೆಯನ್ನು ಸಮರ್ಥ ಸರಳ ವಿಧಾನದಲ್ಲಿ ನಿರ್ವಹಿಸಿದ್ದಾರೆ. ‘‘....ನಮ್ಮ ದೇಶದ ಎದೆಯ ದನಿಯೇ ನಮ್ಮ ಸಂವಿಧಾನ ಎಂದಾದರೆ, ಈ ಎದೆಯ ದನಿಯ ಒಳದನಿ ಈ ಪುಸ್ತಕ’’ ಎಂದು ಬರಗೂರು ಅಭಿಪ್ರಾಯ ಪಡುತ್ತಾರೆ. ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗಳು, ಸಂವಿಧಾನದ ಉಗಮ, ಭಾರತ ದೇಶದ ಸ್ವರೂಪ, ಸ್ವಾತಂತ್ರ ಹೋರಾಟ, ಭಾರತದ ಸಂವಿಧಾನ ರಚನೆ, ಸಂವಿಧಾನದ ಒಳಗಿರುವ ವಿಷಯಗಳು, ಸಂವಿಧಾನದ ಮೂಲತತ್ವಗಳು, ತಿದ್ದುಪಡಿಗಳು, ಗಣರಾಜ್ಯ ಭಾರತದ ಸಾಧನೆಗಳು, ಸಂವಿಧಾನದ ಮುಂದಿರುವ ಸವಾಲುಗಳು...ಹೀಗೆ ಹಲವು ನೆಲೆಗಳಲ್ಲಿ ಸಂವಿಧಾನದ ಸ್ವರೂಪವನ್ನು ನಮಗೆ ಈ ಕೈ ಪಿಡಿ ಅರ್ಥ ಮಾಡಿಸಲು ಪ್ರಯತ್ನಿಸುತ್ತದೆ. 92 ಪುಟಗಳ ಈ ಕೃತಿಯ ಮುಖಬೆಲೆ 30 ರೂಪಾಯಿ. ಆಸಕ್ತರು 94487 29359 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.

 

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News