ಹನೂರಿನಲ್ಲಿ ಧಾರಕಾರ ಮಳೆ: ಸೇತುವೆ ಮೇಲೆಯೇ ಹರಿದ ನೀರು
ಹನೂರು,ಅ.17: ತಾಲೂಕಿನ ಒಡೆಯರಪಾಳ್ಯ ಹಾಗೂ ಪಿಜಿಪಾಳ್ಯ ಗ್ರಾಮಗಳ ಸುತ್ತಮುತ್ತಲಿನ ಕಾಡಂಚಿನ ಪ್ರದೇಶಗಳಲ್ಲಿ ಬುಧವಾರ ಸುರಿದ ಧಾರಕಾರ ಮಳೆಗೆ ಕೊಳ್ಳೇಗಾಲದಿಂದ -ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಆಂಡಿಪಾಳ್ಯ ಸಮೀಪ ಜಡೇಸ್ವಾಮಿಹಳ್ಳದ ಸೇತುವೆಯ ಮೇಲ್ಭಾಗದಲ್ಲೇ ನೀರು ಹರಿದಿದ್ದಲ್ಲದೆ, ಸಮೀಪದ ಜಮೀನುಗಳಿಗೆ ನೀರು ನುಗ್ಗಿದೆ.
ಇದರಿಂದಾಗಿ ನೆರೆಯ ತಮಿಳುನಾಡಿನ ಕಡೆ ಸಂಚರಿಸಬೇಕಾದ ವಾಹನ ಸವಾರರು, ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸುಮಾರು 2-3 ತಾಸು ಹಳ್ಳದ ದಡಗಳಲ್ಲಿ ನಿಲ್ಲಬೇಕಾಯಿತು.
ತಾಲೂಕಿನ್ಯಾದಂತ ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಕ್ಷೇತ್ರ ವ್ಯಾಪ್ತಿಯ ಕೆರೆ ಕಟ್ಟೆಗಳು, ಜಲಾಶಯಗಳು ತುಂಬಿದೆ. ಹನೂರು ಸಮೀಪದ ಬಂಡಳ್ಳಿ ಶಾಗ್ಯ, ಹಲಗಾಪುರ, ಚಂಗವಾಡಿ, ಮಣಗಳ್ಳಿ ಚಿಂಚಳ್ಳಿ ಇನ್ನಿತರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಅನೇಕ ಹಳ್ಳಗಳ ಸೇತುವೆಯ ಮೇಲ್ಬಾಗದಲ್ಲಿಯೇ ನೀರು ಹರಿದಿದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಹರಸಾಹಸ ಪಟ್ಟರು.