84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸರ್ಕಾರದ ಸಂಪೂರ್ಣ ಸಹಕಾರ: ಸಚಿವ ಆರ್.ವಿ.ದೇಶಪಾಂಡೆ

Update: 2018-10-17 17:05 GMT

ಧಾರವಾಡ,ಅ.17: ಧಾರವಾಡದಲ್ಲಿ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲು ಸರಕಾರ ಎಲ್ಲ ನೆರವು ನೀಡಲಿದೆ. ಸಾಂಸ್ಕೃತಿಕ, ವಿದ್ಯಾ ನಗರಿ ಎಂಬ ಖ್ಯಾತಿ ಹೊಂದಿರುವ ಧಾರವಾಡದಲ್ಲಿ ಸರ್ವ ಕಲೆ, ಕಾರ್ಯಕ್ರಮಗಳ ಅರ್ಥಪೂರ್ಣ ಅನಾವರಣವಾಗಬೇಕು ಎಂದು ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಜಿಪಂ ಸಭಾಂಗಣದಲ್ಲಿ ಇಂದು ಸಂಜೆ ಏರ್ಪಡಿಸಲಾಗಿದ್ದ ಅಖಿಲ ಭಾರತ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಹಿಂದೆ ನಡೆದ ಸಮ್ಮೇಳನಗಳ ಆಯೋಜಕರಿಂದ ಮಾಹಿತಿ ಪಡೆದು ಯಾವ ಯಾವ ಸಮಿತಿಗಳ ರಚನೆಯಾಗಬೇಕು, ಎಷ್ಟು ಅನುದಾನ ಬೇಕು ಎಂಬುದರ ಕುರಿತು ಹಿರಿಯ ಸಾಹಿತಿಗಳು, ಕಸಾಪ ಪದಾಧಿಕಾರಿಗಳು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಒಂದು ವಾರದಲ್ಲಿ ಸಭೆ ನಡೆಸಿ ನೀಲನಕ್ಷೆ ತಯಾರಿಸಬೇಕು‌. ಸಭೆಯಲ್ಲಿ ಒಳ್ಳೆಯ ಸಲಹೆಗಳು ವ್ಯಕ್ತವಾಗಿವೆ. ಸಮ್ಮೇಳನ ಡಿಸೆಂಬರ್ ಅಥವಾ 2019 ರ ಜನವರಿಯಲ್ಲಿ ಆಯೋಜಿಸಬೇಕು ಎನ್ನುವದನ್ನು ಎಲ್ಲರ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ಪುನರ್ ಪರಿಶೀಲಿಸಿ, ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಹಮ್ಮಿಕೊಳ್ಳಬೇಕು. ದಿನಾಂಕ ನಿಗದಿ ಮಾಡುವಾಗ ಜಿಲ್ಲಾಡಳಿತಕ್ಕೆ ಬೇಕಾಗುವ ಸಿದ್ಧತಾ ಸಮಯ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ಸರಕಾರ ಕಸಾಪಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಅವಳಿನಗರದಲ್ಲಿ ಐದನೇ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ  ನಡೆಯುತ್ತಿರುವದು ಸಂತಸದ ಸಂಗತಿಯಾಗಿದೆ. ಸಮ್ಮೇಳನ ಆಯೋಜನೆಗೆ ಸರಕಾರದಿಂದ 12 ಕೋಟಿ ರೂ‌.ಗಳ ನೆರವಿನ ಅಗತ್ಯವಿದೆ ಎಂದರು.

ವರಕವಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ‌.ಹಿರೇಮಠ ಮಾತನಾಡಿ, ವಿದ್ಯಾನಗರಿಯಾಗಿರುವ ಧಾರವಾಡದಲ್ಲಿ ವ್ಯಾಸಂಗ ಮಾಡಿದ ಅಸಂಖ್ಯ ಕನ್ನಡಿಗರು ನಾಡಿನಾದ್ಯಂತ ಇದ್ದಾರೆ. ಅವರೆಲ್ಲ ಪ್ರೀತಿಯಿಂದ ಬರುತ್ತಾರೆ. ಸುಮಾರು ಒಂದು ಲಕ್ಷ ಜನ ಸಮ್ಮೇಳನಕ್ಕೆ ಬರುವ ನಿರೀಕ್ಷೆ ಇದೆ ಎಂದರು.

ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಎಲ್ಲ ಸಮಿತಿಗಳು ಹಾಗೂ ವೇದಿಕೆಗಳಲ್ಲಿ ಪರಿಶಿಷ್ಟರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿ, ಸಾಮಾಜಿಕ ನ್ಯಾಯ ಪಾಲಿಸಬೇಕು ಎಂದರು. ಹಿರಿಯ ಸಾಹಿತಿ ಡಾ.ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಧಾರವಾಡ ಸಮ್ಮೇಳನದಲ್ಲಿ ಸ್ಥಳೀಯ ಸಾಹಿತಿಗಳು, ಕಲಾವಿದರಿಗೆ ಪ್ರಥಮ ಆದ್ಯತೆಯಡಿ ಅವಕಾಶಗಳನ್ನು ನೀಡಬೇಕು ಎಂದರು. ಪರಿಸರವಾದಿ ಶಂಕರ ಕುಂಬಿ ಮಾತನಾಡಿ, ಯಾವುದೇ ರೀತಿಯ ಪ್ಲಾಸ್ಟಿಕ್, ಪಟಾಕಿಗಳನ್ನು ಬಳಸದೇ ಮಾದರಿ ಸಮ್ಮೇಳನವಾಗಿ ಆಚರಿಸಬೇಕು ಎಂದರು.

ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆ ಸಮಯ ನೋಡಿಕೊಂಡು ಸಮಯ, ದಿನಾಂಕ ನಿಗದಿ ಮಾಡಬೇಕು. ಅವಸರದಲ್ಲಿ ಸಮ್ಮೇಳನ ಆಗಬಾರದು. ಅರ್ಥಪೂರ್ಣವಾಗಿ ಆಚರಿಸಬೇಕು. ಈ ರಾಜ್ಯ ರಚನೆಯಾಗಿ 6 ದಶಕಗಳು ಪೂರ್ಣವಾಗಿವೆ. ಉತ್ತರ ಕರ್ನಾಟಕದಲ್ಲಿ ಜನಪದ ಅಕಾಡೆಮಿ ಸ್ಥಾಪನೆಯಾಗಬೇಕು. ಇಲ್ಲಿ ಸಮರ್ಥ ಕಲಾವಿದರಿದ್ದಾರೆ, ಅವರಿಗೆ ಉತ್ತಮ ಅವಕಾಶಗಳು ಸಿಗಬೇಕು. ಕರಾವಳಿ ಕರ್ನಾಟಕದಲ್ಲಿ ಅಭಿವೃದ್ಧಿ ಆಗಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟ, ಉಪಹಾರ ಚೆನ್ನಾಗಿ ಕೊಡಬೇಕು. ಆದರೆ ಅದೇ ಮುಖ್ಯವಾಗಬಾರದು. ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡುವ ಅಗತ್ಯವಿಲ್ಲ. ಇಂಗ್ಲಿಷ್ ವ್ಯಾಮೋಹ ಕಳೆದು, ದೇಶೀಯ ಭಾಷೆಗಳಿಗೆ ಮನ್ನಣೆ ಸಿಗುವಂತಹ ಕಾರ್ಯಕ್ರಮಗಳು ಅನುಷ್ಠಾನ ಗೊಳ್ಳಬೇಕು ಎಂದರು.

ಡಾ.ವಿಶ್ವನಾಥ ಚಿಂತಾಮಣಿ, ಮಹದೇವ ದೊಡ್ಡಮನಿ, ಮೋಹನ ನಾಗಮ್ಮನವರ, ಶಿವಸೋಮಣ್ಣ, ಕಲಬುರ್ಗಿ ಕೇಂದ್ರೀಯ ವಿವಿ ಕುಲಪತಿ ಡಾ.ಹೆಚ್.ಎಂ‌.ಮಹೇಶ್ವರಯ್ಯ, ಡಾ.ಶಾಂತಾ ಇಮ್ರಾಪೂರ, ಡಾ.ರಾಜೇಶ್ವರಿ ಮಹೇಶ್ವರಯ್ಯ, ಪ್ರಕಾಶ ಉಡಕೇರಿ ಮತ್ತಿತರರು ತಮ್ಮ ಸಲಹೆಗಳನ್ನು ನೀಡಿದರು.

ಸಂಸದ ಪ್ರಹ್ಲಾದ್ ಜೋಷಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ‌.ಎನ್‌.ನಾಗರಾಜ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News