ಉಪಚುನಾವಣೆಯಲ್ಲಿ ಐದು ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳಿಗೆ ಗೆಲುವು: ಪ್ರಜ್ವಲ್ ರೇವಣ್ಣ ವಿಶ್ವಾಸ
ಬೆಂಗಳೂರು ಅ.18: ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಐದು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಲಿದ್ದಾರೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಿಕ್ರಂ ಆಸ್ಪತ್ರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅ. 25ರ ನಂತರ ಶಿವಮೊಗ್ಗ, ರಾಮನಗರ, ಮಂಡ್ಯದಲ್ಲಿ ಪ್ರಚಾರ ಮಾಡುತ್ತೇವೆ. ಪಕ್ಷದ ಗೆಲುವಿಗೆ ನಾಯಕರು, ಎಚ್.ಡಿ.ದೇವೇಗೌಡರು, ಸಿಎಂ ಕುಮಾರಸ್ವಾಮಿ ಅಗತ್ಯ ತಂತ್ರ ರೂಪಿಸಿದ್ದಾರೆ ಎಂದರು.
ನಾನು ಬಳ್ಳಾರಿ ಪ್ರಚಾರಕ್ಕೆ ಹೋಗುವುದಿಲ್ಲ. ಬಳ್ಳಾರಿ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ. ಈ ಮೂರು ಕ್ಷೇತ್ರದಲ್ಲಿ ನನಗೆ ಪ್ರಚಾರ ಮಾಡಲು ಹೇಳಿದ್ದಾರೆ. ಹೋಗುತ್ತೇನೆ ಅಷ್ಟೆ. 5 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ರಾಜ್ಯದ ಜನ ನಮ್ಮನ್ನು ಗುರುತಿಸಿದ್ದಾರೆ. ಸಮ್ಮಿಶ್ರ ಸರಕಾರದ ಕೆಲಸಕ್ಕೆ ಜನರ ಬೆಂಬಲ ಇದೆ ಎಂದು ತಿಳಿಸಿದರು.