ಮಡಿಕೇರಿ: ತಿಂಡಿ ಹಣ ಕೇಳಿದಕ್ಕೆ ಕ್ಯಾಂಟೀನ್ ನೌಕರರ ಮೇಲೆ ಗುಂಡಿನ ದಾಳಿ

Update: 2018-10-19 15:49 GMT

ಮಡಿಕೇರಿ, ಅ.19: ತಿಂಡಿ ಪಡೆದು ಹಣ ನೀಡದ್ದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಂಟೀನ್ ನೌಕರರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಗುರುವಾರ ರಾತ್ರಿ ಮಡಿಕೇರಿ ನಗರದಲ್ಲಿ ನಡೆದಿದೆ.

ರಾತ್ರಿ 10 ಗಂಟೆ ಸುಮಾರಿಗೆ ನಗರದ ಮಾರುಕಟ್ಟೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಲೋಕೇಶ್ ಮತ್ತು ಅಕ್ರಂ ಎಂಬವರು ಕ್ಯಾಂಟೀನ್ ನೌಕರರಾದ ರಿಯಾಜ್ (31) ಹಾಗೂ ಸಮೀಮ್ (24)ಎಂಬವರ ಮೇಲೆ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ.

ಎಗ್‍ರೋಲ್ ಪಡೆದ ಆರೋಪಿಗಳು ಗೋಬಿ ನೀಡುವಂತೆ ಕೇಳಿದಾಗ ಕ್ಯಾಂಟೀನ್ ಯುವಕರು ಹಣ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಅಲ್ಲಿಂದ ಹೊರ ಹೋಗಿ ಪಕ್ಕದಲ್ಲಿದ್ದ ಬಾರ್ ಕಿಟಕಿಯಿಂದ ಮೂರು ಬಾರಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ರಿಯಾಜ್ ತೊಡೆಗೆ ಮತ್ತು ಸಮೀಮ್ ಕಾಲಿಗೆ ಗಾಯವಾಗಿದ್ದು, ಅವರಿಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿಗಳಲ್ಲೊಬ್ಬರನ್ನು ಬಂಧಿಸಿರುವ ಪೊಲೀಸರು ಆತನಿಂದ ಗನ್ ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿ ಕ್ಯಾಮರಾ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಲೊಬ್ಬನಾದ ಲೋಕೇಶ್ ಒಂದು ತಿಂಗಳ ಹಿಂದೆ ಅಪರಿಚಿತರ ಮನೆಗೆ ಗುಂಡು ಹಾರಿಸಿ ಸೆರೆವಾಸ ಅನುಭವಿಸಿದ್ದನೆಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News