ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ: ಆರ್.ವಿ.ದೇಶಪಾಂಡೆ

Update: 2018-10-19 14:39 GMT

ಧಾರವಾಡ, ಅ.19: ಧಾರವಾಡದಲ್ಲಿ ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲು ಸರಕಾರ ಎಲ್ಲ ನೆರವು ನೀಡಲಿದೆ. ಸಾಂಸ್ಕೃತಿಕ, ವಿದ್ಯಾನಗರಿ ಎಂಬ ಖ್ಯಾತಿ ಹೊಂದಿರುವ ಧಾರವಾಡದಲ್ಲಿ ಸರ್ವ ಕಲೆ, ಕಾರ್ಯಕ್ರಮಗಳು ಅರ್ಥಪೂರ್ಣ ಅನಾವರಣವಾಗಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಹಿಂದೆ ನಡೆದ ಸಮ್ಮೇಳನಗಳ ಆಯೋಜಕರಿಂದ ಮಾಹಿತಿ ಪಡೆದು ಯಾವ, ಯಾವ ಸಮಿತಿಗಳ ರಚನೆಯಾಗಬೇಕು, ಎಷ್ಟು ಅನುದಾನ ಬೇಕು ಎಂಬುದರ ಕುರಿತು ಹಿರಿಯ ಸಾಹಿತಿಗಳು, ಕಸಾಪ ಪದಾಧಿಕಾರಿಗಳು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಒಂದು ವಾರದಲ್ಲಿ ಸಭೆ ನಡೆಸಿ ನೀಲನಕ್ಷೆ ತಯಾರಿಸಬೇಕು ಎಂದು ಅವರು ಹೇಳಿದರು.

ಸಮ್ಮೇಳನ ಡಿಸೆಂಬರ್ ಅಥವಾ 2019ರ ಜನವರಿಯಲ್ಲಿ ಆಯೋಜಿಸಬೇಕು ಎನ್ನುವುದನ್ನು ಎಲ್ಲರ ಅಭಿಪ್ರಾಯ ಗಮನದಲ್ಲಿಟ್ಟುಕೊಂಡು ಪುನರ್ ಪರಿಶೀಲಿಸಿ, ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ಸಾಹಿತ್ಯ ಸಮ್ಮೆಳನವನ್ನು ಹಮ್ಮಿಕೊಳ್ಳಬೇಕು. ದಿನಾಂಕ ನಿಗದಿ ಮಾಡುವಾಗ ಜಿಲ್ಲಾಡಳಿತಕ್ಕೆ ಬೇಕಾಗುವ ಸಿದ್ಧತಾ ಸಮಯ ಲಕ್ಷ್ಯದಲ್ಲಿಟ್ಟುಕೊಳ್ಳಬೇಕು. ಸರಕಾರ ಕಸಾಪಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಅವರು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ಅವಳಿನಗರದಲ್ಲಿ ಐದನೇ ಬಾರಿಗೆ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಸಮ್ಮೇಳನ ಆಯೋಜನೆಗೆ ಸರಕಾರದಿಂದ 12 ಕೋಟಿ ರೂ.ಗಳ ನೆರವಿನ ಅಗತ್ಯದೆ ಎಂದರು.

ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಮಾತನಾಡಿ, ವಿದ್ಯಾರ್ಥಿಗಳ ಪರೀಕ್ಷೆ ಸಮಯ ನೋಡಿಕೊಂಡು ಅಖಿಲ ಭಾರತ 84ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯ, ದಿನಾಂಕ ನಿಗದಿ ಮಾಡಬೇಕು. ಅವಸರದಲ್ಲಿ ಸಮ್ಮೇಳನ ಆಗಬಾರದು. ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

ಈ ರಾಜ್ಯ ರಚನೆಯಾಗಿ 6 ದಶಕಗಳು ಪೂರ್ಣವಾಗಿವೆ. ಉತ್ತರ ಕರ್ನಾಟಕದಲ್ಲಿ ಜನಪದ ಅಕಾಡೆಮಿ ಸ್ಥಾಪನೆಯಾಗಬೇಕು. ಇಲ್ಲಿ ಸಮರ್ಥ ಕಲಾವಿದರಿದ್ದಾರೆ, ಅವರಿಗೆ ಉತ್ತಮ ಅವಕಾಶಗಳು ಸಿಗಬೇಕು. ಕರಾವಳಿ ಕರ್ನಾಟಕದಲ್ಲಿ ಅಭಿವೃದ್ಧಿ ಆಗಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟ, ಉಪಹಾರ ಚೆನ್ನಾಗಿ ಕೊಡಬೇಕು. ಆದರೆ ಅದೇ ಮುಖ್ಯವಾಗಬಾರದು ಎಂದು ಅವರು ಹೇಳಿದರು. ಗಣ್ಯವ್ಯಕ್ತಿಗಳಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಮಾಡುವ ಅಗತ್ಯವಿಲ್ಲ. ಇಂಗ್ಲಿಷ್ ವ್ಯಾಮೋಹ ಕಳೆದು, ದೇಶೀಯ ಭಾಷೆಗಳಿಗೆ ಮನ್ನಣೆ ಸಿಗುವಂತಹ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು ಎಂದು ಪಾಟೀಲ ಪುಟ್ಟಣ್ಣ ತಿಳಿಸಿದರು.

ವರಕವಿ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ಲಕ್ಷ್ಮಣ ಬಕ್ಕಾಯಿ, ಸಾಹಿತಿ ಡಾ.ಮಾಲತಿ ಪಟ್ಟಣಶೆಟ್ಟಿ, ಪರಿಸರವಾದಿ ಶಂಕರ ಕುಂಬಿ, ಕಲಬುರ್ಗಿ ಕೇಂದ್ರೀಯ ಕುಲಪತಿ ಡಾ.ಎಚ್.ಎಂ. ಮಹೇಶ್ವರಯ್ಯ ಸೇರಿದಂತೆ ಇನ್ನಿತರರು ತಮ್ಮ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಸಂಸದ ಪ್ರಹ್ಲಾದ್ ಜೋಶಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ದೀಪಾ ಚೋಳನ್, ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News