ಕುಶಾಲನಗರ ಮೀಸಲು ಅರಣ್ಯದಲ್ಲಿ ಜಿಂಕೆ ಬೇಟೆ: ಮೂವರ ಬಂಧನ
Update: 2018-10-22 11:15 GMT
ಮಡಿಕೇರಿ, ಅ.22 : ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಅವರೆಗುಂದ ಹಾಡಿಯ ನಿವಾಸಿಗಳಾದ ರಮೇಶ್, ಚಂದ್ರ, ವೆಂಕಟೇಶ ಕುಶಾಲನಗರ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡುತ್ತಿದ್ದರು. ಈ ಸಂದರ್ಭ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯಾಧಿಕಾರಿ ಅರುಣ್ ಮಾರ್ಗದರ್ಶನದಲ್ಲಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಗೂಳಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಜಿಂಕೆಯ ಮಾಂಸ ಹಾಗೂ ಚರ್ಮ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ಕೆ.ಎಂ. ಚರಣ್, ಅರಣ್ಯ ವೀಕ್ಷಕ ಅಶೋಕ ಮೇಲಿನಮನಿ ಹಾಗೂ ಅರಣ್ಯ ಕಳ್ಳ ಬೇಟೆ ಶಿಬಿರದ ಸಿಬ್ಬಂದಿಗಳಾದ ಪ್ರವೀಣ್, ರಾಜೇಶ್, ಚಂದ್ರ, ರಾಜಪ್ಪ, ರಾಚ, ದಿಲೀಪ್ ಪಾಲ್ಗೊಂಡಿದ್ದರು.