ಸರಣಿ ಬಾಂಬ್ ಸ್ಫೋಟ ಪ್ರಕರಣ: ವಿರಾಜಪೇಟೆಯಲ್ಲಿ ಆರೋಪಿ ಸಲೀಂ; ಕೇರಳದಲ್ಲಿ ತನಿಖೆ ಚುರುಕು

Update: 2018-10-22 12:40 GMT

ಮಡಿಕೇರಿ, ಅ.22: ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಸಲೀಂ ನನ್ನು ಅ.20 ರಂದು ವಿರಾಜಪೇಟೆಯ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿತ್ತು ಎಂದು ತಿಳಿದು ಬಂದಿದೆ. ಸ್ಥಳ ಮಹಜರು ನಡೆಸಲು ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಕರೆದೊಯ್ಯುವಾಗ ರಾತ್ರಿಯಾದ ಕಾರಣ ಭದ್ರತೆ ದೃಷ್ಟಿಯಿಂದ ಸಲೀಂ ನನ್ನು ವಿರಾಜಪೇಟೆ ಠಾಣೆಯಲ್ಲಿ ಇಡಲಾಯಿತು ಎಂದು ಹೇಳಲಾಗಿದೆ.  

ಕೇರಳ ಕಣ್ಣೂರು ತಾಲೂಕಿನ ಪಿಣರಾಯಿ ಗ್ರಾಮದ ನಿವಾಸಿ ಸಲೀಂ(41) ಎಂಬಾತನನ್ನು 15 ದಿನಗಳ ಹಿಂದೆ ಬೆಂಗಳೂರು ಸಿಸಿಬಿ ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಸಲೀಂ ಮೇಲಿದ್ದು, ಸಿಸಿಬಿ ಪೊಲೀಸರು ಈತನನ್ನು ಮಡಿವಾಳ ಪೊಲೀಸರ ವಶಕ್ಕೆ ನೀಡಿ, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 

ನಂತರ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರಿಂದ ನ್ಯಾಯಾಂಗ ಆರೋಪಿ ಸಲೀಂನನ್ನು ಮತ್ತೆ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ನಡೆಸಲು ಅವಕಾಶ ನೀಡಿತ್ತು.

ಈ ಹಿನ್ನಲೆಯಲ್ಲಿ ಸಲೀಂನನ್ನು ಸ್ಥಳ ಮಹಜರು ನಡೆಸಲು ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ಕರೆದೊಯ್ಯಲು ಪೊಲೀಸರು ನಿರ್ಧರಿಸಿದ್ದರು. ಆದರೆ ವಿರಾಜಪೇಟೆಗೆ ಆಗಮಿಸುವಾಗ ಕತ್ತಲಾದ ಹಿನ್ನಲೆಯಲ್ಲಿ ಆರೋಪಿ ಸಲೀಂನನ್ನು ಭದ್ರತಾ ದೃಷ್ಟಿಯಿಂದ ವಿರಾಜಪೇಟೆ ಠಾಣೆಯ ಲಾಕಪ್‍ನಲ್ಲಿ ಬಂಧಿಸಿಡಲಾಗಿತ್ತು. ಸಿಸಿಬಿ ಡಿವೈಎಸ್‍ಪಿ ಸುಬ್ರಮಣಿ, ಮನೋಜ್ ಕುಮಾರ್ ನೇತೃತ್ವದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಉಪ ನಿರೀಕ್ಷಕ ನಾರಾಯಣ ಗೌಡ ಮತ್ತು 15ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಪೊಲೀಸರು ಭದ್ರತಾ ವ್ಯವಸ್ಥೆ ಒದಗಿಸಿದ್ದರು.

ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಸಾರ್ವಜನಿಕರಿಗೂ ಠಾಣೆ ಪ್ರವೇಶ ನಿಷೇಧಿಸಲಾಗಿತ್ತು. ಅ. 21ರ ಬೆಳಗ್ಗೆ ಆರೋಪಿಯನ್ನು ಕೇರಳಕ್ಕೆ ಕರೆದೊಯ್ದಿರುವ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News