ಮೋದಿ ಎದುರು ಬಿಜೆಪಿ ನಾಯಕರು ನಾಯಿ ಮರಿಗಳಂತೆ ಬಾಲ ಮುದುರಿಕೊಂಡಿರುತ್ತಾರೆ: ಸಿದ್ದರಾಮಯ್ಯ

Update: 2018-10-26 14:06 GMT

ಜಮಖಂಡಿ, ಅ. 26: ಸಿದ್ದು ನ್ಯಾಮಗೌಡ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಶುಕ್ರವಾರ ಕ್ಷೇತ್ರದ ಚಿಕ್ಕಲಕಿ ಗ್ರಾಮದಲ್ಲಿ ಆನಂದ್ ನ್ಯಾಮಗೌಡ ಪರ ಪ್ರಚಾರ ನಡೆಸಿದ ಸಿದ್ದರಾಮಯ್ಯ, ಸಿದ್ದು ನ್ಯಾಮಗೌಡ ಅವರನ್ನ ಗೆಲ್ಲಿಸಿದ್ದೀರಿ. ಆದರೆ, ಅವರ ನಮ್ಮೊಂದಿಗೆ ಬಹಳ ದಿನ ಉಳಿಯಲಿಲ್ಲ. ಇದೀಗ ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ ಅವರ ಪುತ್ರ ಸ್ಪರ್ಧಿಸಿದ್ದಾರೆ. ಅವರಿಗೆ ನೀವೆಲ್ಲರೂ ಆಶೀರ್ವಾದ ಮಾಡಬೇಕು ಎಂದು ಕೋರಿದರು.

ನಾನು ಮತ್ತೆ ಆನಂದ್ ನ್ಯಾಮಗೌಡ ಗೆದ್ದ ಮೇಲೆ ನಿಮಗೆ ಧನ್ಯವಾದ ಹೇಳಲು ಕ್ಷೇತ್ರಕ್ಕೆ ಬರುತ್ತೇನೆ. ಆದರೆ, ಒಂದು ಷರತ್ತು, ಆನಂದ್ ನ್ಯಾಮಗೌಡ ಅವರಿಗೆ ನಿಮ್ಮ ಗ್ರಾಮದಿಂದಲೇ ಒಂದು ಸಾವಿರ ಹೆಚ್ಚಿನ ಮತ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಸುಳ್ಳುಗಾರ: ಬಿಜೆಪಿ ನಾಯಕರು ಉತ್ತರ ಕುಮಾರನ ಹಾಗೆ. ಮೋದಿ ಮುಂದೆ ಇವರೆಲ್ಲ ನಾಯಿಮರಿಗಳ ರೀತಿ ಬಾಲಮುದುರಿಕೊಂಡಿರುತ್ತಾರೆ. ಪೆಟ್ರೋಲ್ ಬೆಲೆ ಕಡಿಮೆಯಾದರೂ ಬೆಲೆ ಇಳಿಕೆ ಮಾಡದ ಪ್ರಧಾನಿ ಮೋದಿ, ರೈತರ ಸಾಲಮನ್ನಾ ಬಗ್ಗೆಯೂ ತುಟಿ ಬಿಚ್ಚುತ್ತಿಲ್ಲ. ಹೀಗಾಗಿ ಅವರೊಬ್ಬ ಮಹಾನ್ ಸುಳ್ಳುಗಾರ ಎಂದು ವಾಗ್ದಾಳಿ ನಡೆಸಿದರು.

ಜಮಖಂಡಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಆನಂದ್ ನ್ಯಾಮಗೌಡ ಅಯ್ಕೆಯಾದರೆ ಹೆರಕಲಮಟ್ಟಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದಲ್ಲದೆ, ಸಿದ್ದು ನ್ಯಾಮಗೌಡರ ರೀತಿಯಲ್ಲೇ ನೀರಾವರಿಗೆ ವಿಶೇಷ ಆದ್ಯತೆ ನೀಡಲಿದ್ದೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News