ಶೃಂಗೇರಿ: ಪ್ರವಾಸ ಬಂದಿದ್ದ ಶಾಲಾ ವಿದ್ಯಾರ್ಥಿ ನೀರುಪಾಲು
ಚಿಕ್ಕಮಗಳೂರು, ನ.5: ಪ್ರವಾಸಕ್ಕೆ ಬಂದಿದ್ದ ಶಾಲಾ ವಿದ್ಯಾರ್ಥಿಯೋರ್ವ ತುಂಗಾನದಿಯಲ್ಲಿ ಸ್ನಾನಕ್ಕಿಳಿದಿದ್ದ ವೇಳೆ ನದಿ ಆಳದ ಅರಿವಿಲ್ಲದೇ ಮುಳುಗಿ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ಸೋಮವಾರ ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಸಾತನೂರಿನ ಪ್ರಿಯದರ್ಶಿನಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ತರುಣ್ ಗೌಡ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಕನಕಪುರದಿಂದ ಶೃಂಗೇರಿಗೆ ಪ್ರವಾಸಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಸ್ನಾನ ಮಾಡಿ ದೇವಾಲಯಕ್ಕೆ ತೆರಳುವ ಉದ್ದೇಶದಿಂದ ಸೋಮವಾರ ಮಧಾಹ್ನ ಸ್ನಾನಕ್ಕೆಂದು ಸಹ ವಿದ್ಯಾರ್ಥಿಗಳೊಂದಿಗೆ ನೀರಿಗೆ ಧುಮುಕ್ಕಿದ್ದ ಎನ್ನಲಾಗಿದ್ದು, ಈ ವೇಳೆ ಈಜುತ್ತಾ ನದಿ ರಭಸವಾಗ ಹರಿಯುತ್ತಿದ್ದ ಕಡೆ ಹೋದಾಗ ನದಿ ನೀರಿಗೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದಾನೆಂದು ತಿಳಿದು ಬಂದಿದೆ.
ವಿದ್ಯಾರ್ಥಿಯ ಮೃತದೇಹ ಸಂಜೆಯಾದರೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದ್ದು, ಮೃತದೇಹಕ್ಕಾಗಿ ಶಿಕ್ಷಕರು ಹಾಗೂ ಸ್ಥಳೀಯ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.