ಯಡಿಯೂರಪ್ಪ ವಾಮ ಮಾರ್ಗದಿಂದ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ: ಸಿದ್ದರಾಮಯ್ಯ

Update: 2018-11-11 13:52 GMT

ಚಿಕ್ಕಮಗಳೂರು, ನ.11: ತಪ್ಪು ಮಾಡಿದವರಿಗೆ ಕಾನೂನು ಖಂಡಿತಾ ಶಿಕ್ಷೆ ಕೊಡುತ್ತದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನಾರ್ದನ ರೆಡ್ಡಿಯ ನ್ಯಾಯಾಂಗ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರಿಗೆ ಕಾನೂನು ಶಿಕ್ಷೆ ನೀಡುತ್ತದೆ. ನ್ಯಾಯಾಂಗ ತನ್ನ ಕೆಲಸ ಮಾಡಿದೆ ಎಂದರು.

ಜೆಡಿಎಸ್-ಕಾಂಗ್ರೆಸ್ ಮುಖಂಡರು ಕಚ್ಚಾಡುತ್ತಿದ್ದಾರೆ, ಮೈತ್ರಿ ಸರಕಾರ ಶೀಘ್ರ ಬೀಳಲಿದೆ, ಸರಕಾರ ಬಿದ್ದರೆ ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೆ. ಚುನಾವಣೆಯಲ್ಲಿ ಅವರು ಪಡೆದಿರುವುದೇ 104 ಸ್ಥಾನ. ಬಹುಮತ ಇಲ್ಲದೇ ಸಿಎಂ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ವಾಮಮಾರ್ಗದಿಂದ ಸಿಎಂ ಆಗಲು ಕನಸು ಕಾಣುತ್ತಿದ್ದಾರೆಂದು ಕುಟುಕಿದರು. 

ಯಡಿಯೂರಪ್ಪ ಅವರು ಮಲಗಿದಾಗಲೆಲ್ಲ ವಿಧಾನಸೌಧದ 3ನೇ ಮಹಡಿ ಕಣ್ಣಿಗೆ ಬೀಳುತ್ತದೆ. ಯಾವುದೇ ಮನುಷ್ಯ ಒಂದು ವಿಚಾರದಲ್ಲಿ ಬಹಳ ಆಸೆಪಟ್ಟರೆ ಅವರಿಗೆ ಈ ರೀತಿ ಆಗುತ್ತದೆ ಎಂದು ವ್ಯಂಗ್ಯವಾಡಿದ ಅವರು, ಬಹುಮತಕ್ಕೆ 113 ಸ್ಥಾನ ಬೇಕು. ಅವರಿಗೆ ಸಿಕ್ಕಿರುವುದು 104 ಸ್ಥಾನ. ಹೀಗಿರುವಾಗ ಅವರು ಹೇಗೆ ಮುಖ್ಯಮಂತ್ರಿ ಆಗುತ್ತಾರೆ? ನೀವು ಹೇಗೆ ಮುಖ್ಯಮಂತ್ರಿ ಆಗುತ್ತೀರಾ ಎಂದು ಅವರನ್ನೇ ಕೇಳಿ, ನನ್ನನ್ನು ಕೇಳಿದರೆ ಏನು ಹೇಳಲಿ ಎಂದರು.

ಸರಕಾರ ಇನ್ನೂ ಟೇಕಾಫ್ ಆಗಿಲ್ಲ, ಮೈತ್ರಿ ಸರಕಾರ ಕೋಮಾ ಸ್ಥಿತಿಯಲ್ಲಿದ್ದು, ಸರಕಾರ ಟಿಪ್ಪು ಸುಲ್ತಾನ್ ಜಯಂತಿಯತ್ತ ಗಮನಹರಿಸುತ್ತಿದೆ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಟಿಪ್ಪು ಜಯಂತಿಯನ್ನು ಇದೇ ಮೊದಲ ಬಾರಿ ಆಚರಿಸುತ್ತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಆಚರಿಸಲಾಗುತ್ತಿದೆ. ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ. ಆಧಾರ ರಹಿತವಾಗಿ ಮಾತನಾಡುತ್ತಾರೆ ಎಂದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆ ಇಲ್ಲದಿದ್ದರೆ ಉಪ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆಲ್ಲಲು ಸಾಧ್ಯವಿತ್ತೆ ? ಬಳ್ಳಾರಿಯಲ್ಲಿ ದಾಖಲೆಯ ಗೆಲುವು ಸಾಧಿಸಿದ್ದೇವೆ. ಶಿವಮೊಗ್ಗದಲ್ಲಿ ಕಳೆದ ಬಾರಿ ಯಡಿಯೂರಪ್ಪ ಮೂರೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಆ ಅಂತರ 50 ಸಾವಿರಕ್ಕೆ ಇಳಿದಿದೆ. ಸಮನ್ವಯತೆ ಇಲ್ಲದಿದ್ದರೆ ಇಂತಹ ಫಲಿತಾಂಶ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News