ತುಮಕೂರು: ಸರಣಿ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ನಾಲ್ವರಿಗೆ ಗಂಭೀರ ಗಾಯ

Update: 2018-11-11 14:47 GMT

ತುಮಕೂರು,ನ.11: ಅತೀವೇಗ ಹಾಗೂ ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿ ಎರಡು ವಾಹನಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿ ಇಬ್ಬರು ಸ್ಧಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಸಂದ್ರ ಬಳಿ ನಡೆದಿದೆ.

ನಗರ ಸಮೀಪದ ಮಲ್ಲಸಂದ್ರ ಗ್ರಾಮದ ಬಳಿ ನಡೆದಿರುವ ಈ ಅಪಘಾತದಲ್ಲಿ ಟಾಟಾ ಏಸ್ ಚಾಲಕ ಮಲ್ಲಿಕಾರ್ಜುನ್(30) ಹಾಗೂ ಮತ್ತೊಂದು ಕಾರಿನಲ್ಲಿದ್ದ ಮಾಯಮ್ಮ (26) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಘಟನೆ ವಿವಿರ: ದಾವಣಗೆರೆಯಿಂದ ಲಗೇಜು ತುಂಬಿಕೊಂಡು ಮಲ್ಲಸಂದ್ರದ ಬಳಿ ಹೋಗುತ್ತಿದ್ದ ಟಾಟಾ ಏಸ್ ಹಾಗೂ ಮದುವೆಗೆಂದು ಬೆಂಗಳೂರಿನ ಮಲ್ಲೇಶ್ವರಂ ನಿಂದ ಬರುತ್ತಿದ್ದ ಎಕ್ಸ್ ಯುವಿ ಕಾರಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ನಂತರ ಟಾಟಾ ಏಸ್ ಗೂ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿಯೇ ಮಲ್ಲಿಕಾರ್ಜುನ್ ಮತ್ತು ಮಾಯಮ್ಮ ಸಾವನ್ನಪ್ಪಿದ್ದಾರೆ.

ಈ ಅಪಘಾತದಿಂದ ಕಾರಿನಲ್ಲಿದ್ದ ಮಹೇಶ್ (45) ಗೀತಾ (35) ಅವರ ಪುತ್ರ 7 ವರ್ಷದ ಭುವನ್, ನರೇಂದ್ರ ಕುಮಾರ್ (36) ನರಸಿಂಹಯ್ಯ (58) ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಅಪಘಾತದ ಗಾಯಾಳುಗಳನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತವಾದ ಕೂಡಲೇ ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಧಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಿಂದಾಗಿ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಂಚಾರ ಅಸ್ತವ್ಯಸ್ಥವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News