ಹೊಣೆಗಾರಿಕೆಯಿಂದ ಕೆಲಸ ಮಾಡಿದಲ್ಲಿ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯ: ಮರಿಸ್ವಾಮಿ.ವೈ

Update: 2018-11-14 18:16 GMT

ದಾವಣಗೆರೆ,ನ.14: ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಒಳಗೊಂಡು ಸಾಮೂಹಿಕ ಹೊಣೆಗಾರಿಕೆಯಿಂದ ಕೆಲಸ ಮಾಡಿದಲ್ಲಿ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಭಾರ ಅಧ್ಯಕ್ಷ ಮರಿಸ್ವಾಮಿ.ವೈ ಅಭಿಪ್ರಾಯಪಟ್ಟರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಸಾಮಾಜಿಕ ಪರಿವರ್ತನಾ ಜನಾಂದೋಲನ ಜಿಲ್ಲಾ ಸಮಿತಿ ದಾವಣಗೆರೆ, ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಪೀಪಲ್ ಸಂಸ್ಥೆ, ಡಾನ್ ಬಾಸ್ಕೋ, ಸ್ಪೂರ್ತಿ ಸಂಸ್ಥೆ ಹಾಗೂ ಚೈಲ್ಡ್‍ಲೈನ್ ನೋಡಲ್ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ನಗರದ ಬಾಲ ನ್ಯಾಯ ಮಂಡಳಿ ಕಚೇರಿಯಲ್ಲಿ ಮಕ್ಕಳ ಸ್ಥಿತಿಗತಿಗಳ ಕುರಿತು ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಒಂದು ಶಾಸನಬದ್ದ ಹಾಗೂ ಸ್ವಾಯತ್ತ ಸಂಸ್ಥೆಯಾಗಿದ್ದು, ನ್ಯಾಯಾಂಗದ ಅಧಿಕಾರ ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ ಮೂರು ಕಾಯ್ದೆಗಳಾದ ಶಿಕ್ಷಣ ಹಕ್ಕು ಕಾಯ್ದೆ 2009, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ(ಪೋಕ್ಸೊ) ಹಾಗೂ ಬಾಲ ನ್ಯಾಯ ಮಂಡಳಿ ಇವುಗಳ ಮೇಲ್ವಿಚಾರಣೆ ಆಯೋಗ ನೋಡಿಕೊಳ್ಳುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿಜಯ್‍ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 40,006 ಬಾಲಕರು, 38360 ಬಾಲಕಿಯರು ಸಾಮಾನ್ಯ ಅಪೌಷ್ಟಿಕತೆ, 5800 ಬಾಲಕರು ಮತ್ತು 5819 ಬಾಲಕಿಯರು ಸಾಧಾರಣ ಅಪೌಷ್ಟಿಕತೆಯಿಂದ ಹಾಗೂ 328 ಮಕ್ಕಳು ತೀವ್ರತರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ತೀವ್ರತರ ಮತ್ತು ಸಾಧಾರಣ ಅಪೌಷ್ಟಿಕೆ ಹೋಗಲಾಡಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ವತಿಯಿಂದ ಪ್ರತಿ ತಿಂಗಳು ತಪಾಸಣೆ ನಡೆಸಿ ಎನ್‍ಆರ್‍ಸಿ(ನ್ಯುಟ್ರಿಷನ್ ರಿಹ್ಯಾಬಿಲಿಟೇಷನ್ ಸೆಂಟರ್)ಗಳಲ್ಲಿ ಅಂತಹ ಮಕ್ಕಳನ್ನು 15 ದಿನ ಇರಿಸಿಕೊಂಡು ಪೌಷ್ಟಿಕ ಆಹಾರ ನೀಡಲಾಗುತ್ತದೆ. ಸಾಮಾನ್ಯವಾಗಿ ಬಡ ಕೂಲಿ ಕಾರ್ಮಿಕರ ಮಕ್ಕಳೇ ಇಲ್ಲಿ ದಾಖಲಾಗುವ ಕಾರಣ ಹಾಗೂ ಅವರು 15 ದಿನ ಇಲ್ಲಿ ನಿಲ್ಲುವುದು ಕಷ್ಟವಾಗುವುದರಿಂದ ನರೇಗಾ ಯೋಜನೆಯಡಿ ನೀಡುವಂತೆ ಆ ಪೋಷಕರಿಗೆ ದಿನಕ್ಕೆ ರೂ. 216 ದಿನಗೂಲಿ ನೀಡುವ ಮೂಲಕ ಅಪೌಷ್ಟಿಕತೆ ನೀಗಲು ಪ್ರೋತ್ಸಾಹಿಸಲಾಗುತ್ತಿದೆ. ಇನ್ನು ಮುಂದೆ ಪ್ರತಿ ತಿಂಗಳ 15ನೇ ತಾರೀಖಿನಂದು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲರಿಗೂ ಆರೋಗ್ಯ ತಪಾಸಣೆ, ಪ್ರತಿ ತಿಂಗಳ 9ನೇ ತಾರೀಖಿನಂದು ಗರ್ಭಿಣಿ-ಬಾಣಂತಿಯರಿಗೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.

ಅಧ್ಯಕ್ಷರು ಪ್ರತಿಕ್ರಿಯಿಸಿ, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ, ಮಹಿಳೆಯರಿಗೆ ಸರ್ಕಾರ ಎಷ್ಟು ಒಳ್ಳೆ ಕಾರ್ಯಕ್ರಮ ನೀಡಿದೆ. ಆದರೆ ಈ ಕಾರ್ಯಕ್ರಮದ ಪ್ರಚಾರವಾಗಿಲ್ಲ. ಜನರಿಗೆ ಇದರ ಅರಿವಿಲ್ಲ. ಆದ್ದರಿಂದ ಈ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಸಮಿತಿಯ ಶಿಫಾರಿಸಿನ ಮೇರೆಗೆ ಅಂಗನವಾಡಿಗಳಲ್ಲಿ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಎನ್‍ಆರ್‍ಸಿ, ಎನ್‍ಎಂಆರ್‍ಸಿ ಬಗ್ಗೆ ಗೋಡೆಬರಹ, ಭಿತ್ತಿಪತ್ರ ಸೇರಿದಂತೆ ಜನರಿಗೆ ತಿಳಿಯುವಂತೆ ಮಾಡಬೇಕೆಂದರು.

ಶಿಕ್ಷಣ ಇಲಾಖೆಯ ಸಹಾಯಕ ಯೋಜನಾ ಸಂಯೋಜನಾಧಿಕಾರಿ ಯೋಗೇಶ್ವರ್ ಮಾತನಾಡಿ, ಹಳೆಯ ವಿದ್ಯಾರ್ಥಿ ಸಂಘಗಳ ರಚನೆಗೆ ಒತ್ತು ನೀಡಲಾಗುವುದು. ಚೈಲ್ಡ್ ಹೆಲ್ಪ್‍ಲೈನ್, ಮಕ್ಕಳ ಕಲ್ಯಾಣ ಸಮಿತಿ ಸೇರಿದಂತೆ ಎನ್‍ಜಿಓ ಗಳನ್ನೊಳಗೊಂಡು ಮಕ್ಕಳ ಹಕ್ಕುಗಳ ರಕ್ಷಣಾ ನೀತಿ ಕುರಿತು ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ. ಎಲ್ಲ ಶಾಲೆಗಳಲ್ಲಿ 1098 ಸಹಾಯವಾಣಿ ಸಂಖ್ಯೆ ಬರೆಸಲು ಕ್ರಮ ವಹಿಸುವುದಾಗಿ ಸಭೆಗೆ ತಿಳಿಸಿದರು.

ಚೈಲ್ಡ್ ಹೆಲ್ಪ್‍ಲೈನ್‍ನ ಕೊಟ್ರೇಶ್ ಮಾತನಾಡಿ, ಪ್ರತಿ ಶಾಲೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಚೈಲ್ಡ್ ಹೆಲ್ಪ್‍ಲೈನ್ 1098 ನ್ನು ಬರೆಸಬೇಕು. ಎಲ್ಲಾ ಶಾಲಾ ವಾಹನಗಳ ಮೇಲೆ ಬರೆಸಬೇಕು ಹಾಗೂ ಹಾಸ್ಟೆಲ್‍ಗಳ ಆವರಣದಲ್ಲಿ ಚೈಲ್ಡ್ ಹೆಲ್ಪ್‍ಲೈನ್ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಮಾಹಿತಿ ಹಾಕಬೇಕೆಂದರು.

ಪೀಪಲ್ ಸಂಸ್ಥೆಯ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಮಾತನಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಹಾಗೂ ಮಹಿಳಾ ಪೊಲೀಸರು ಮಾತನಾಡಿ, ಪೊಕ್ಸೋ ಕಾಯ್ದೆಯಡಿ ಅತ್ಯಾಚಾರಕ್ಕೊಳಗಾದ ಮಕ್ಕಳನ್ನು ಆಸ್ಪತ್ರೆಗೆ ಮತ್ತು ಕೋರ್ಟಿಗೆ ಅಲೆದಾಡಿಸುವ ಸ್ಥಿತಿ ಬಂದಿದೆ. ರಾತ್ರಿ ಹೊತ್ತು ಬರುವ ಪ್ರಕರಣಗಳಿಗೆ ಮಹಿಳಾ ಚಿಕಿತ್ಸಾ ಘಟಕದಲ್ಲಿ ಆ ಹೆಣ್ಣು ಮಕ್ಕಳಿಗೆ ಅಗತ್ಯವಸ್ತು ಇರಿಸಬೇಕೆಂದರು. ಆಯೋಗ ಅಧ್ಯಕ್ಷರು ಪ್ರತಿಕ್ರಿಯಿಸಿ ಪೊಕ್ಸೊ ಪ್ರಕರಣಗಳಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ತ್ವರಿತಗತಿಯಲ್ಲಿ ಈ ಪ್ರಕರಣ ಇತ್ಯರ್ಥವಾಗಲು ಆರೋಗ್ಯ ಇಲಾಖೆ, ನ್ಯಾಯಾಂಗ ಇಲಾಖೆ ಸೇರಿದಂತೆ ಎಲ್ಲರು ಸಹಕರಿಸಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ್ ಎಂ ಕುಂಬಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಜಿಲ್ಲಾ ಪ. ವರ್ಗಗಳ ಕಲ್ಯಾಣಾಧಿಕಾರಿ ದೇವೇಂದ್ರಪ್ಪ, ಮಕ್ಕಳ ಕಲ್ಯಾಣ ಸಮಿತಿಯ ರಾಮಾನಾಯಕ್, ತಾಲೂಕು ವೈದ್ಯಾಧಿಕಾರಿ ಮಂಜುನಾಥ್ ಪಾಟೀಲ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News