ಬಾಗಲಕೋಟೆ: ಬೆಂಕಿಗೀಡಾದ ಟ್ರ್ಯಾಕ್ಟರನ್ನು ಕೆರೆಗೆ ಇಳಿಸಿ ಗ್ರಾಮವನ್ನೇ ರಕ್ಷಿಸಿದ ಚಾಲಕ
ಬಾಗಲಕೋಟೆ, ನ.16: ಬಾಗಲಕೋಟೆ ಜಿಲ್ಲೆಯ ಜಮ್ಮನಕಟ್ಟಿ ಗ್ರಾಮದ ರೈತನೊಬ್ಬನ ಸಮಯಪ್ರಜ್ಞೆ ಗ್ರಾಮದ ಹಲವಾರು ಮನೆಗಳು ಬೆಂಕಿಗಾಹುತಿಯಾಗುವುದನ್ನು ತಡೆದಿದೆಯಲ್ಲದೆ ರಾತ್ರಿ ಬೆಳಗಾಗುವುದರೊಳಗಾಗಿ ಆ ರೈತ ಹೀರೋ ಆಗಿ ಬಿಟ್ಟಿದ್ದಾರೆ. ತಾನು ಚಲಾಯಿಸುತ್ತಿದ್ದ ಹುಲ್ಲು ತುಂಬಿದ್ದ ಟ್ರ್ಯಾಕ್ಟರಿಗೆ ವಿದ್ಯುತ್ ತಂತಿ ತಾಗಿ ಬೆಂಕಿ ಹತ್ತಿಕೊಂಡಾಗ ಭಾರೀ ಧೈರ್ಯ ತೋರಿದ ರೈತ ಯಂಕಪ್ಪ (28) ಧೃತಿಗೆಡದೆ ವಾಹನವನ್ನು ನೇರವಾಗಿ ಗ್ರಾಮದ ಕೆರೆಯತ್ತ ಸಾಗಿಸಿ ವಾಹನವನ್ನು ಕೆರೆಗಿಳಿಸಿದ್ದಾರೆ.
“ನನ್ನ ಮುಂದೆ ಬೇರೆ ಆಯ್ಕೆಯಿರಲಿಲ್ಲ. ಸುತ್ತಮುತ್ತಲೆಲ್ಲಾ ಮನೆಗಳಿದ್ದವು, 20 ಅಡಿ ಎತ್ತರ ತನಕ ಟ್ರ್ಯಾಕ್ಟರಿನಲ್ಲಿ ಹುಲ್ಲು ಇತ್ತು. ಇಡೀ ಪ್ರದೇಶಕ್ಕೇ ಬೆಂಕಿ ವ್ಯಾಪಿಸುತ್ತಿತ್ತು” ಎಂದು ಯಂಕಪ್ಪ ಹೇಳುತ್ತಾರೆ. ನೀರು ಹಾಕಿ ಬೆಂಕಿ ನಂದಿಸಲು ವಿಫಲರಾದಾಗ ಕೆಲ ಗ್ರಾಮಸ್ಥರು ನೀಡಿದ ಸಲಹೆಯಂತೆ ವಾಹನವನ್ನು ಕೆರೆಯತ್ತ ಸಾಗಿಸಿದ್ದರು ಯಂಕಪ್ಪ. ವಾಹನ ಕೆರೆಗೆ ಇಳಿಯುತ್ತಿದ್ದಂತೆಯೇ ಆತ ಅದರಿಂದ ಹೊರಕ್ಕೆ ಜಿಗಿದಿದ್ದರು.