ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Update: 2018-11-16 12:18 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ನ.16: ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಆಗಮಿಸಿದ್ದ ವ್ಯಕ್ತಿಯೋರ್ವರು ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕೆ ಹತಾಶೆಯಿಂದ ಡಿ.ಸಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. 

ನಗರದ ಸೂಳೇಬೈಲು ಬಡಾವಣೆಯ ನಿವಾಸಿ ಇಮ್ತಿಯಾಜ್ (50) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕ್ರಿಮಿನಾಶಕ ಸೇವಿಸುತ್ತಿದ್ದ ಇವರನ್ನು ತಕ್ಷಣವೇ ಕಚೇರಿಯ ಸಿಬ್ಬಂದಿಗಳು ಹಾಗೂ ಪೊಲೀಸರು ವಾಹನದ ಮೂಲಕ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಇಮ್ತಿಯಾಜ್ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಭೇಟಿಯಿತ್ತು ಆರೋಗ್ಯ ವಿಚಾರಿಸಿದ್ದಾರೆ.  

ಘಟನೆ ಹಿನ್ನೆಲೆ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅಹವಾಲು ತೋಡಿಕೊಳ್ಳಲು ಇಮ್ತಿಯಾಜ್‍ರವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದ ಅವರ ಕಚೇರಿ ಸಿಬ್ಬಂದಿಗಳು, ಸಭೆ ಪೂರ್ಣಗೊಂಡ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವಂತೆ ಹೇಳಿದ್ದರು. 

ಸುಮಾರು ಹೊತ್ತು ಕಳೆದರೂ ಡಿ.ಸಿ. ಭೇಟಿಯಾಗಲು ಸಾಧ್ಯವಾಗದಿದ್ದರಿಂದ ಬೇಸರಗೊಂಡ ಇಮ್ತಿಯಾಜ್, ಕ್ರಿಮಿನಾಶಕ ಸೇವನೆ ಮಾಡಲು ಮುಂದಾದರು. ತಕ್ಷಣವೇ ಕಚೇರಿ ಸಿಬ್ಬಂದಿಗಳು ಅವರನ್ನು ತಡೆದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತಂತೆ ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News