ಮೈಸೂರು: ಮಹಿಳೆ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

Update: 2018-11-16 16:53 GMT

ಮೈಸೂರು,ನ.16: ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ, ತನ್ನ ಮೇಲೆ ನಂಬಿಕೆ ಇರಿಸಿದ್ದ ಮಹಿಳೆಯೋರ್ವರನ್ನು ಕೊಲೆಗೈದಿದ್ದ ವ್ಯಕ್ತಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.

ಕಾವೇರಿ ನಗರದ ನಿವಾಸಿ ಪಿ.ಶ್ರೀನಿವಾಸ್ (28)ಎಂಬಾತ ಜಯಮ್ಮ ಎಂಬವರ ಬಳಿ ಸಾಲ ಪಡೆದುಕೊಂಡಿದ್ದ. ಇತರರಿಗೆ ನೀಡಿದ ಸಾಲ ವಸೂಲಾತಿಗೆ ಜಯಮ್ಮ ಶ್ರೀನಿವಾಸನನ್ನೇ ನಂಬಿ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಜಯಮ್ಮ ತಾನು ನೀಡಿದ್ದ ಸಾಲವನ್ನು ವಾಪಸ್ ಮಾಡುವಂತೆ ಕೇಳಿದ್ದರು. ಸಾಲ ಮರುಪಾವತಿಸಲು ಹಣವಿಲ್ಲದ ಕಾರಣ ಕೊಲೆಗೆ ಸಂಚು ರೂಪಿಸಿದ್ದ. ಫೆಬ್ರವರಿ10, 2013ರಂದು ರಾತ್ರಿ ಜಯಮ್ಮನನ್ನು ಆಕೆಯಿಂದ ಸಾಲ ಪಡೆದಿದ್ದ ಮಂಜು ಎಂಬಾತನ ಮನೆಗೆ ಆಟೋದಲ್ಲಿ ಸಾಲ ವಸೂಲಾತಿಗೆಂದು ಕರೆದೊಯ್ದಿದ್ದು, ಮೇಟಗಳ್ಳಿ ಪೊಲೀಸ್ ಠಾಣೆಯ ರಿಂಗ್ ರಸ್ತೆಯ ಮೋರಿ ಬಳಿ ಜಯಮ್ಮನನ್ನು ಆಟೋದಿಂದ ಕೆಳಗಿಳಿಸಿ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದ ಎನ್ನಲಾಗಿದೆ.

ಬಳಿಕ ಅವರ 2 ಚಿನ್ನದ ಬಳೆ, ಚೈನ್ ದೋಚಿ ಮೃತದೇಹವನ್ನು ಮೋರಿಗೆ ಹಾಕಿ ಒಡವೆಯನ್ನು ಬೆಲವತ್ತ ಗ್ರಾಮದ ಪ್ರವೀಣ್ ಎಂಬವರ ಬಳಿ ಗಿರವಿಗೆ ಇರಿಸಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮೇಟಗಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News