'ಗಜ' ಚಂಡಮಾರುತ ಎಫೆಕ್ಟ್: ಶಿವಮೊಗ್ಗದ ಹಲವೆಡೆ ಮೋಡ ಕವಿದ ವಾತಾವರಣ
Update: 2018-11-17 17:45 GMT
ಶಿವಮೊಗ್ಗ, ನ.17: ಕಳೆದೆರೆಡು ದಿನಗಳಿಂದ ತಮಿಳುನಾಡು ಹಾಗೂ ಪುದುಚೇರಿಯ ಕರಾವಳಿ ತೀರದಲ್ಲಿ ಅಬ್ಬರಿತ್ತಿರುವ, ಅಪಾರ ಪ್ರಮಾಣದ ಆಸ್ತಿಪಾಸ್ತಿ-ಸೋವುನೋವಿಗೆ ಕಾರಣವಾಗಿರುವ 'ಗಜ' ಚಂಡಮಾರುತದ ಎಫೆಕ್ಟ್ ಶಿವಮೊಗ್ಗ ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿದೆ. ತಾಪಮಾನದ ಪ್ರಮಾಣದಲ್ಲಿ ದಿಢೀರ್ ಕುಸಿತ ಉಂಟಾಗಿದೆ. ಜೊತೆಗೆ ಚಳಿಯ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ.
ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಕಣ್ಮರೆಯಾಗಿದೆ. ಚಳಿ ಹಾಗೂ ಬಿಸಿಲಿನ ತೀವ್ರತೆ ಹೆಚ್ಚಾಗಿತ್ತು. ಆದರೆ 'ಗಜ' ಚಂಡಮಾರುತದ ಕಾರಣದಿಂದ, ಕಳೆದೆರೆಡು ದಿನಗಳಿಂದ ಜಿಲ್ಲೆಯ ಹಲವೆಡೆ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಪ್ರಸ್ತುತ ಜಿಲ್ಲೆಯಾದ್ಯಂತ ಬತ್ತ ಹಾಗೂ ಮೆಕ್ಕೆಜೋಳ ಕಟಾವು ಕಾರ್ಯ ಬಿರುಸುನಿಂದ ನಡೆಯುತ್ತಿದೆ. ಹಲವೆಡೆ ಮಳೆ ಮೋಡಗಳು ದಟ್ಟೈಸಿ, ಮಳೆಯಾಗುವ ಮುನ್ಸೂಚನೆ ನೀಡುತ್ತಿರುವುದು ಬೆಳೆ ಕಟಾವು ಕಾರ್ಯದಲ್ಲಿ ತೊಡಗಿರುವ ರೈತರಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ.