ಹೆಚ್ಡಿಕೆ ಜನ್ಮದಿನ ಪ್ರಯುಕ್ತ 70 ಲಕ್ಷ ಮೌಲ್ಯದ ಕ್ರೀಡಾ ಸಾಮಾಗ್ರಿ ವಿತರಣೆ: ಶಾಸಕ ಡಿ.ಸಿ ಗೌರಿಶಂಕರ್
ತುಮಕೂರು,ನ.17: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನ್ಮದಿನದಂದು 70 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವುದಾಗಿ ಗ್ರಾಮಾಂತರ ಶಾಸಕ ಡಿಸಿ ಗೌರಿಶಂಕರ್ ತಿಳಿಸಿದ್ದಾರೆ.
ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಗೂಳೂರು ಜಿಲ್ಲಾ ಪಂ. ವ್ಯಾಪ್ತಿಯ ಅರೆಯೂರು, ದೊಮ್ಮನಕುಪ್ಪೆ ಗೊಲ್ಲರಹಟ್ಟಿ, ರೈತರ ಪಾಳ್ಯ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ, ಹರಳೂರು, ಗುಡಿಪಾಲಸಂದ್ರ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಗೂಳಹರಿ ವೆಕೆ ಪಾಲಸಂದ್ರ, ಕಿತ್ತಗಾನಹಳ್ಳಿ, ಕರಡಿಗೆರೆ ಕಾವಲ್ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ, ದೊಮ್ಮನಕುಪ್ಪೆ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಮುಂದಿನ ತಿಂಗಳು ಡಿ.16 ರಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಜನ್ಮದಿನವಿದ್ದು, ಅಂದು ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಹಾಗು ನಾನು ವೈಯಕ್ತಿಕವಾಗಿ ದೇಣಿಗೆ ಹಾಕಿ ಗ್ರಾಮಾಂತರ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಿಗೆ 70 ಲಕ್ಷ ಮೌಲ್ಯದ ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲು ನಿರ್ಧರಿಸಿರುವುದಾಗಿ ತಿಳಿಸಿದರು
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜಾರಿಗೆ ತಂದ ಸೈಕಲ್ ವಿತರರಿಸುವ ಯೋಜನೆ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯವೂ ಲಭಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣದಿಂದ ವಂಚಿತವಾಗುತ್ತಿದ್ದ ಲಕ್ಷಾಂತರ ಮಕ್ಕಳಿಗೆ ಈ ಯೋಜನೆ ದಾರಿ ದೀಪವಾಗಿದೆ ಎಂದು ಸ್ಮರಿಸಿದರು.
ಜಿಲ್ಲೆಯ ಫಲಿತಾಂಶಕ್ಕೆ ಹೋಲಿಸಿದರೆ ಗ್ರಾಮಾಂತರ ಕ್ಷೇತ್ರದ ಸರ್ಕಾರಿ ಶಾಲೆಗಳು ಪಲಿತಾಂಶದಲ್ಲಿ ಮುಂಚೂಣಿಯಲ್ಲಿವೆ. ಇನ್ನು ಮುಂದೆ ಸರ್ಕಾರಿ ಶಾಲೆಯಲ್ಲಿ ಕಲಿತು ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆಯುವ ವಿಧ್ಯಾರ್ಥಿಗಳಿಗೆ ವೈಯಕ್ತಿಕವಾಗಿ 25,000 ಪ್ರೋತ್ಸಾಹಧನ, ಇತರ ಭಾಷೆಗಳಲ್ಲಿ 100 ಕ್ಕೆ100 ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 5000 ಪ್ರೋತ್ಸಾಹ ಧನ ನೀಡುವುದಾಗಿ ಇದೇ ವೇಳೆ ಘೋಷಿಸಿದರು
ಇದೇ ವೇಳೆ ಗೂಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಜಿಲ್ಲಾ ಯುವಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯ್ ಕುಮಾರ್, ತಾಲೂಕು ಯುವಘಟಕದ ಅಧ್ಯಕ್ಷ ಸುವರ್ಣ ಗಿರಿಕುಮಾರ್, ಹರಳೂರು ರುದ್ರೇಶ್, ತಾಲೂಕು ಎಸ್.ಸಿ ಘಟಕದ ಅಧ್ಯಕ್ಷ ಹರಳೂರು ಸುರೇಶ್, ಹರಳೂರು ಗ್ರಾಮ ಪಂ. ಸದಸ್ಯೆ ಶಾಂತಕುಮಾರಿ, ಅಪಾರ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.