ರೈತ ನಾಯಕರು-ಪೊಲೀಸರ ನಡುವಿನ ಸಂಧಾನ ಸಭೆ ಯಶಸ್ವಿ: ಬಂಧನಕ್ಕೊಳಗಾಗಿದ್ದ ರೈತರ ಬಿಡುಗಡೆ
Update: 2018-11-18 14:25 GMT
ಬೆಳಗಾವಿ, ನ.18: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತರ ವಿರುದ್ಧ ಹೂಡಲಾಗಿದ್ದ ಜಾಮೀನು ರಹಿತ ಮೊಕದ್ದಮೆ ವಾಪಸ್ ಪಡೆದು, ವಶದಲ್ಲಿದ್ದ ರೈತರನ್ನು ಹಿರೇಬಾಗೇವಾಡಿ ಠಾಣಾ ಪೊಲೀಸರು ಬಿಡುಗಡೆ ಮಾಡಿದರು.
ಪ್ರತಿಭಟನಾನಿರತ ರೈತರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ರೈತರು, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಮಾಯಿಸಿ, ಬಂಧನಕ್ಕೊಳಗಾದ ರೈತರನ್ನು ಈ ಕೂಡಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ರಾಜಿ ಸಂಧಾನ ನಡೆಸಿ ಬಂಧಿತ ರೈತರನ್ನು ಬಿಡುಗಡೆಗೊಳಿಸಲಾಯಿತು. ರೈತರ ತಮ್ಮ ಸಮಸ್ಯೆಗಳನ್ನು ಸರಕಾರದೊಂದಿಗೆ ಕಾನೂನಾತ್ಮಕವಾಗಿ ಚರ್ಚಿಸಿ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ಜಿಲ್ಲೆಯ ಹಲವು ರೈತ ಮುಖಂಡರು ಭಾಗಿಯಾಗಿದ್ದರು.