ಬೆಂಗಳೂರು: ತಾಳಿ ಕಟ್ಟುವ ವೇಳೆ ಹಾಜರಾದ ಪ್ರಿಯಕರ; ಮುರಿದು ಬಿದ್ದ ಮದುವೆ

Update: 2018-11-18 17:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.18: ಪ್ರೀತಿಸುತ್ತಿದ್ದ ಹುಡುಗಿಯ ವಿವಾಹ ಮತ್ತೊಬ್ಬನೊಂದಿಗೆ ನಡೆಯುತ್ತಿದ್ದಾಗ, ಪ್ರಿಯಕರನೊಬ್ಬ ಕಲ್ಯಾಣ ಮಂಟಪಕ್ಕೆ ದಿಢೀರ್ ಹಾಜರಾದ ಕಾರಣ, ಗದ್ದಲ, ಗಲಾಟೆ ಉಂಟಾದ ಘಟನೆ ಇಲ್ಲಿನ ಬೆಂಗಳೂರಿನ ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

ಸಂಜು ಮತ್ತು ಪದ್ಮಪ್ರಿಯ ಎಂಬುವರು ಫೇಸ್‌ಬುಕ್‌ನ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಪದ್ಮಪ್ರಿಯಾಳ ಮನೆಯವರು ರಂಗನಾಥ್ ಎಂಬುವರೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಅದರಂತೆ ನೆಲಮಂಗಲದ ಪ್ರತಿಷ್ಠಿತ ಕಲ್ಯಾಣ ಮಂಟಪದಲ್ಲಿ ವಿವಾಹ ನಡೆಯುತ್ತಿತ್ತು.

ರವಿವಾರ ಬೆಳಗ್ಗೆ ವರ ಪದ್ಮಪ್ರಿಯಳ ಕೊರಳಿಗೆ ತಾಳಿ ಕಟ್ಟುವ ವೇಳೆ ದಿಢೀರನೆ ಸಂಜು ಭೇಟಿ ಕೊಟ್ಟಿದ್ದು, ವಧು ತನ್ನ ಪ್ರಿಯಕರನನ್ನು ನೋಡಿ ತಾನು ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ ಎನ್ನಲಾಗಿದೆ.

ಇದರಿಂದಾಗಿ ಕೆಲಕಾಲ ಗೊಂದಲ ಸೃಷ್ಟಿಯಾಗಿದ್ದಲ್ಲದೆ, ವರ ಮತ್ತು ವಧುವಿನ ಕಡೆಯವರಲ್ಲಿ ಭಾರೀ ವಾಗ್ವಾದ, ಮಾತಿನ ಚಕಮಕಿ ನಡೆದು ಕೊನೆಗೆ ಮದುವೆ ಮುರಿದು ಬಿದ್ದಿದೆ ಎಂದು ತಿಳಿದುಬಂದಿದೆ.

ಕಳೆದ ನಾಲ್ಕು ವರ್ಷಗಳಿಂದ ಈ ಇಬ್ಬರು ಪ್ರೀತಿಸುತ್ತಿದ್ದವಳು. ಈಗ ಮತ್ತೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆ ಎಂದು ನೊಂದಿದ್ದ ಸಂಜು ಮದುವೆಯ ಹಿಂದಿನ ದಿನವೇ ಕಲ್ಯಾಣ ಮಂಟಪದಲ್ಲಿ ಬೀಡು ಬಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಈ ಸಂಬಂಧ ನೆಲಮಂಗಲ ಠಾಣಾ ಪೊಲೀಸರು, ಸ್ಥಳಕ್ಕೆ ಧಾವಿಸಿ ಸಂಜುನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News