ವಿಜಯಪುರ: ಟ್ರಕ್-ಜೀಪ್ ನಡುವೆ ಭೀಕರ ಅಪಘಾತ; ಚಾಲಕ ಸೇರಿ ಆರು ಕೂಲಿ ಕಾರ್ಮಿಕರು ಮೃತ್ಯು

Update: 2018-11-21 12:32 GMT

ವಿಜಯಪುರ, ನ. 21: ಇಲ್ಲಿನ ವಿಜಯಪುರ-ಹುಬ್ಬಳ್ಳಿ ರಾಜ್ಯ ಹೆದ್ದಾರಿ-218ರಲ್ಲಿ ಬುಧವಾರ ಬೆಳಗಿನ ಜಾವ ಟ್ರಕ್ ಹಾಗೂ ಬೊಲೆರೋ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಜೀಪ್ ಚಾಲಕ ಸೇರಿದಂತೆ ಆರು ಮಂದಿ ಕೂಲಿ ಕಾರ್ಮಿಕರು ಮೃತಪಟ್ಟ ದುರ್ಘಟನೆ ಬಬಲೇಶ್ವರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಜೀಪ್ ಚಾಲಕ ವಿಕಾಸ್ ವಿಲಾಸ್, ಮುಸ್ತಫಾ ಇಸಾಕ್ ಮಂಗರುಳ, ಗಜಾನನ ಫಿರಾಜಿ ಡೋನೆ, ತೌಫಿಕ್ ಸೈಯದ್, ಅಬ್ಬಾಸ್ ಅಬ್ದುಲ್ ಪಟೇಲ್ ಹಾಗೂ ಮೆಹಬೂಬ್ ನೂರ್‌ಸಾಬ್ ಎಂದು ಗುರುತಿಸಲಾಗಿದೆ. ಐದು ಮಂದಿ ಸ್ಥಳದಲ್ಲೆ ಮೃತಪಟ್ಟರೆ, ಮೆಹಬೂಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಜೀಪ್‌ನಲ್ಲಿ ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಮಹಾರಾಷ್ಟ್ರ ಮೂಲದವರು. ತಾಲೂಕಿನ ಹೊನಗನಹಳ್ಳಿ ಬಳಿ ಅಪಘಾತ ಸಂಭವಿಸಿದ್ದು, ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು, ಕೆಲಸ ಮುಗಿಸಿಕೊಂಡು ಜುಮನಾಳದಿಂದ ಹೊನಗನಹಳ್ಳಿಯತ್ತ ಜೀಪ್‌ನಲ್ಲಿ ತೆರಳುತ್ತಿದ್ದಾಗ, ಈ ಅವಘಡ ಸಂಭವಿಸಿದೆ.

ಟ್ರಕ್, ಬೊಲೆರೋ ಜೀಪ್‌ಗೆ ಢಿಕ್ಕಿ ಹೊಡೆದ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಅಪಘಾತದಲ್ಲಿ ಮೃತಪಟ್ಟ ಮೆಹಬೂಬ್ ನೂರ್‌ಸಾಬ್ ಒಂದು ವಾರದ ಹಿಂದೆಯಷ್ಟೇ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಈ ಸಂಬಂಧ ಬಬಲೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News