ಇನ್ನು ಮುಂದೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜೊತೆ ಶಿಕ್ಷಕರಿಗೂ ಅಂಕ !

Update: 2018-12-01 14:13 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.1: ಕಲಿಕೆಯ ಪ್ರಮಾಣ ಅಳೆಯುವಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಾಧನೆಯು ಒಂದಕ್ಕೊಂದು ಪೂರಕವಾಗಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಮೂರು ಮಾನದಂಡಗಳನ್ವಯ ಶಿಕ್ಷಕರಿಗೂ ಸಾಧನೆಯ ಅಂಕ ನಿಗದಿಪಡಿಸಿದೆ.

ಪ್ರಸಕ್ತ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಪರಾಮರ್ಶಿಸಿ, ಯಾವ ವಿಷಯಗಳಲ್ಲಿ ಎಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಅತ್ಯಂತ ಕಳಪೆ ಹಾಗೂ ಉತ್ತಮ ಪ್ರದರ್ಶನ ತೋರಿದ್ದಾರೆ ಎಂಬುದನ್ನು ಬೊಟ್ಟು ಮಾಡಿ ತೋರಿಸಲಾಗಿದೆ. 2019ರ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯಲಿರುವ ಎಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಫಲಿತಾಂಶದ ಸಾಧನೆ ಪತ್ರವನ್ನು ಪ್ರತಿ ಪ್ರೌಢಶಾಲೆಯ ಶಿಕ್ಷಕರಿಗೆ ಕಳುಹಿಸಿಕೊಡಲು ಮುಂದಾಗಿದೆ. ಹೀಗಾಗಿ, 2018ರ ಎಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವನ್ನು ಪರಾಮರ್ಶಿಸಿ, ಯಾವ ವಿಷಯಗಳಲ್ಲಿ ಎಷ್ಟು ಸಂಖ್ಯೆಯ ವಿದ್ಯಾರ್ಥಿಗಳು ಅತ್ಯಂತ ಕಳಪೆ ಹಾಗೂ ಉತ್ತಮ ಪ್ರದರ್ಶನ ತೋರಿದ್ದಾರೆ ಎಂಬುದನ್ನು ಬೊಟ್ಟು ಮಾಡಿ ತೋರಿಸಲಾಗಿದೆ.

ಉದಾಹರಣೆಗೆ ಮಂಡ್ಯ ನಗರದ ಖಾಸಗಿ ಶಾಲೆಯೊಂದರ 67 ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಕಳಪೆ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ವಯ 0-10ರ ಅಂಕಗಳ ಪ್ರಕಾರ, ಶಿಕ್ಷಕರಿಗೆ 2 ಅಂಕ ನೀಡಿ ‘ಅತ್ಯಂತ ಕಡಿಮೆ ಸಾಧನೆ’ ಎಂದು ವಿಶ್ಲೇಷಿಸಲಾಗಿದೆ. ಅಲ್ಲದೆ, ಶಿಕ್ಷಕರ ಕಾರ್ಯಶೈಲಿಯಲ್ಲಿ ಅಗತ್ಯವಿರುವ ಸುಧಾರಣೆಯ ಬಗ್ಗೆ ಪತ್ರ ಬರೆಯಲಾಗಿದೆ.

ತರಬೇತಿಯಲ್ಲೂ ಬದಲಾವಣೆ: ಸೇವಾನಿರತ ಶಿಕ್ಷಕರ ತರಬೇತಿಯಲ್ಲೂ ಅನೇಕ ಬದಲಾವಣೆ ತರಲು ಇಲಾಖೆ ಕ್ರಮ ಕೈಗೊಂಡಿದ್ದು, ಒಂದು ವೇಳೆ ಬೋಧನಾ ವಿಧಾನದಲ್ಲಿ ಅಲ್ಪಾವಧಿ ಅಥವಾ ದೀರ್ಘಾವಧಿಯ ತರಬೇತಿ ಅವಶ್ಯಕತೆಯಿದ್ದಲ್ಲಿ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

ಶೇ.75ರಷ್ಟು ಅಂಕ ಗಳಿಕೆ ಗುರಿ:

2019ರ ಎಸೆಸ್ಸೆಲ್ಸಿ ಪರೀಕ್ಷೆ ಹಾಗೂ ನಂತರದ ಪರೀಕ್ಷೆಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರಗತಿ ಸಾಧಿಸಲು ಇನ್ನಷ್ಟು ಸುಧಾರಣಾ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕನಿಷ್ಠ ಶೇ.75ರಷ್ಟು ವಿದ್ಯಾರ್ಥಿಗಳು ಶೇ.75ರಷ್ಟು ಪ್ರಗತಿ ಸಾಧಿಸಲು ಗುರಿ ಹಾಕಿಕೊಳ್ಳಬೇಕು ಎಂದು ಇಲಾಖೆಯ ಆಯುಕ್ತ ಡಾ.ಪಿ.ಸಿ.ಜಾಫರ್ ಶಿಕ್ಷಕರಿಗೆ ರವಾನಿಸಿದ ಪತ್ರದಲ್ಲಿ ಸಲಹೆ ಮಾಡಿದ್ದಾರೆ.

ಸಾಧನೆಯ ಪತ್ರ: ರಾಜ್ಯದ 16 ಸಾವಿರ ಪ್ರೌಢಶಾಲೆಗಳ ಶಿಕ್ಷಕರಿಗೆ ವಿಷಯವಾರು ಆಧರಿಸಿ 60 ಸಾವಿರ ಪತ್ರಗಳನ್ನು ಖುದ್ದು ಆಯುಕ್ತ ಡಾ.ಪಿ.ಸಿ.ಜಾಫರ್ ಅವರೇ ರವಾನಿಸುತ್ತಿದ್ದಾರೆ. ಆಯಾ ಜಿ.ಪಂ.ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಮೂಲಕ ಸಂಬಂಧಪಟ್ಟ ಶಾಲೆಗಳಿಗೆ ವಿದ್ಯಾರ್ಥಿಗಳ ಫಲಿತಾಂಶ ಸಾಧನೆಯ ಪತ್ರವನ್ನು ತಲುಪಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪತ್ರದ ಸಲಹೆ

* ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೇಂದ್ರಿಕರಿಸಬೇಕು.

*ಬೋಧನೆಗೆ ಸಂಬಂಧಿಸಿದಂತೆ ಇಲಾಖೆಯ ನೆರವು ಪಡೆದುಕೊಳ್ಳಬೇಕು.

* ಶಾಲಾ ಪೂರ್ವ-ನಂತರ, ರಜೆ ಅವಧಿಯಲ್ಲಿ ಪೂರಕ ಶಿಕ್ಷಣ ವ್ಯವಸ್ಥೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News