ಬಂಡವಾಳಿಗರ ಹಿತಾಸಕ್ತಿಯಂತೆ ಕಸ್ತೂರಿ ರಂಗನ್ ವರದಿ ಜಾರಿಗೆ ಹುನ್ನಾರ: ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಆರೋಪ

Update: 2018-12-02 11:34 GMT

ಮೂಡಿಗೆರೆ, ಡಿ.2: ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿಗರ ಬದುಕು ಬವಣೆಯಾಗಲಿದೆ. ಕೃಷಿ ಚಟುವಟಿಕೆಗೆ ಮಾರಕವಾಗಲಿರುವ ಈ ವರದಿ ವಿದೇಶಿ ವಿನಿಮಯಕ್ಕೆ, ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್ ವಲಯಗಳಿಗೆ ಅನುಕೂಲವಾಗುವಂತೆ ತಯಾರಿಸಲಾಗುತ್ತಿದೆ. ಈ ವರದಿ ಜಾರಿಯಲ್ಲಿ ಯಳ್ಳಷ್ಟು ಜನರ ಹಿತಾಸಕ್ತಿ ಇಲ್ಲ ಎಂದು ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಅಭಿಪ್ರಾಯಪಟ್ಟರು.

ಮಲೆನಾಡು ಉಳಿಸಿ ಹೋರಾಟ ವೇದಿಕೆಯಿಂದ ಪಟ್ಟಣದ ಲ್ಯಾಂಪ್ಸ್ ಸಹಕಾರಿ ಭವನದ ಸಭಾಂಗಣದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅರಣ್ಯ ಇಲಾಖೆಗಳಲ್ಲಿ ಹಲವು ರೀತಿಯ ಕಾಯ್ದೆಗಳಿದ್ದು ಇವುಗಳಿಂದ ಸಮಸ್ಯೆ ಬಗೆಹರಿಯದಂತಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಕೆಲವು ಎನ್‍ಜಿಒಗಳು ಸಿದ್ಧಪಡಿಸಿವೆ. ಗುಜರಾತಿನಿಂದ ಕರ್ನಾಟಕ ರಾಜ್ಯದವರೆಗೆ ಒಟ್ಟು 6 ರಾಜ್ಯಗಳ 180 ಗ್ರಾಮಗಳನ್ನು ಈ ವರದಿಗೆ ಸೇರಿಸಿ ಪಶ್ಚಿಮಘಟ್ಟ ಪ್ರಾಧಿಕಾರವನ್ನು ಕಾರ್ಯರೂಪಕ್ಕೆ ತರುವ ಮೂಲಕ ಅದರ ಒಡೆತನವನ್ನು ಎನ್‍ಜಿಒಗಳಿಗೆ ಬಿಟ್ಟುಕೊಟ್ಟಿದೆ. ಹುಲಿ, ಆನೆ, ಕಾಳಿಂಗ, ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನ, ಒತ್ತುವರಿ ತೆರವು ಎಲ್ಲವೂ ಮಲೆನಾಡಿಗೆ ಮಾರಕವಾಗಿವೆ. ವಿದೇಶಿ ಬಂಡವಾಳಕ್ಕೆ ಮುಗ್ಧ ರೈತರನ್ನು ಬಲಿಕೊಡುತ್ತಿರುವ ಎನ್‍ಜಿಒಗಳನ್ನು ಈ ರಾಷ್ಟ್ರದಿಂದಲೇ ತೊಲಗಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಹುಲಿಯೋಜನೆ ಪ್ರಾರಂಭವಾಗದೆ ಹುಲಿಯ ನಾಮಫಲಕಗಳನ್ನು ಅಮೆರಿಕದ ಕಂಪನಿಗಳು ಹಲವೆಡೆ ಅಳವಡಿಸುವ ಮೂಲಕ ದೊಡ್ಡ ಷಡ್ಯಂತ್ರ ನಡೆಸಿದ್ದಾರೆ. ಹೀಗಾಗಿ ಎನ್‍ಜಿಒಗಳ ಎಲ್ಲಾ ಯೋಜನೆ, ವರದಿಗಳನ್ನು ಧಿಕ್ಕರಿಸುವ ಮೂಲಕ ಮಲೆನಾಡು ಉಳಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು. ಬ್ರಿಟೀಷರ ಕಾಲದ ಕಾಯ್ದೆ, ಕಾನೂನುಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಪರ್ಯಾಸ. ಎನ್‍ಜಿಒಗಳು ಸುಪ್ರೀಂ ಕೋರ್ಟ್ ಮೂಲಕ ಜನರನ್ನು ಆಳುತ್ತಿವೆ. ಪರಿಸರ ರಕ್ಷಣೆ ಮಾಡಿದವರಿಗೆ ನಿರ್ಬಂಧ ಹೇರುತ್ತಾ ದೊಡ್ಡ ಅರಣ್ಯ ಮಾಫಿಯಾ ನಡೆಸಲು ತಯಾರಿ ನಡೆದಿದೆ ಎಂದು ದೂರಿದರು.  

ಕರ್ನಾಟಕ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಜೈರಾಂ ಮಾತನಾಡಿ, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮನವಿಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಎಲ್ಲಾ ಅಧಿಕಾರಿಗಳನ್ನು ಭೇಟಿಮಾಡಿ, ವಿವರಣೆ ನೀಡಿ ವಿರೋಧ ವ್ಯಕ್ತಪಡಿಸಲಾಗಿದೆ. ವರದಿ ಜಾರಿಗೊಳಿಸುವುದರಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ಮಲೆನಾಡಿನಲ್ಲಿ ಜನರನ್ನು ಒಕ್ಕಲೆಬ್ಬಿಸುವ ಷಡ್ಯಂತ್ರ ಅಡಗಿದೆ. ಈ ಹಿಂದೆ ವಿವಿಧೆಡೆ ಒಕ್ಕಲೆಬ್ಬಿಸಿದವರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮಲೆನಾಡಿನ ಜನರು ತಮಿಳುನಾಡಿನ ಜಲ್ಲಿಕಟ್ಟು ಮಾದರಿಯಲ್ಲಿ ಹೋರಾಟ ನಡೆಸುವ ಅನಿವಾರ್ಯತೆಯಿದೆ ಎಂದರು. 

ವಕೀಲ ಅನಂತೇಶ್ ಮಾತನಾಡಿ, ರಾಷ್ಟ್ರೀಯ ಉದ್ಯಾನ, ಕುದುರೆಮುಖ ಗಣಿಗಾರಿಕೆ ಇತ್ಯಾದಿಗಳು ಜನರ ವಿರೋಚಿತ ಹೋರಾಟದಿಂದ ತಡೆಯಲಾಗಿದೆ. ಅದೇ ಮಾದರಿಯಲ್ಲಿ ಹೋರಾಟ ತೀವ್ರಗೊಳಿಸಿದರೆ ಕಸ್ತೂರಿ ರಂಗನ್ ಯೋಜನೆಯ ಜಾರಿಯನ್ನೂ ತಡೆಯಬಹುದು. ಮಲೆನಾಡಿನಲ್ಲಿ ಉದ್ಯಾನವನಗಳ ಅವಶ್ಯಕತೆಯೇ ಇಲ್ಲ. ಎನ್‍ಜಿಒಗಳು ತಮ್ಮ ಲಾಭಕ್ಕಾಗಿ ಮಲೆನಾಡಿನಲ್ಲೇ ಇಂತಹ ಉದ್ಯಾನವನಗಳ ಸ್ಥಾಪನೆಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಜಾಗೃತ ವಿದ್ಯಾರ್ಥಿ ಯುವಜನ ವೇದಿಕೆಯ ಅಂಗಡಿ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಿ.ಸಿ.ದಯಾಕರ್, ಸುರೇಶ್ ಭಟ್, ಕೆ.ಕೆ.ರಾಮಯ್ಯ, ಸದಾಶಿವ, ಹೂವಪ್ಪ, ಪ್ರಸನ್ನ, ಹುಲ್ಲೇಮನೆ ಸುರೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News